ಮಾಗಡಿ: ಅಲೆಮಾರಿ ಮತ್ತು ಇತರ ಸಮುದಾಯಗಳ ಮಕ್ಕಳು ಮತ್ತು ಗರ್ಭಿಣಿಯರಿಗೆ ಕಡ್ಡಾಯವಾಗಿ ಇಂದ್ರಧನುಷ್ ಲಸಿಕೆ ಹಾಕಿಸಿ, ಮಾರಕ ರೋಗಗಳಿಂದ ರಕ್ಷಿಸಿ ಎಂದು ಮಹಿಳಾ ಹಿರಿಯ ಆರೋಗ್ಯ ಸಹಾಯಕಿ ಮಂಜುಳ ಮನವಿ ಮಾಡಿದರು.
ಪಟ್ಟಣದ ಬಿ.ಕೆ.ರಸ್ತೆ, ತಿರುಮಲೆ ಕಾಲೊನಿಗಳಲ್ಲಿ ಇಂದ್ರಧನುಷ್ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
‘ಅಲೆಮಾರಿ ಸಮುದಾಯದವರು ತಮ್ಮ ಒಂದೂವರೆ ತಿಂಗಳಿಂದ ಒಂದೂವರೆ ವರ್ಷದ ಒಳಗಿನ ಎಲ್ಲಾ ಮಕ್ಕಳಿಗೆ ಇಂದ್ರಧನುಷ್ ಲಸಿಕೆ ಹಾಕಿಸದೆ ಇರುವುದು ಅಪಾಯಕ್ಕೆ ದಾರಿಮಾಡಿಕೊಡಲಿದೆ. ಆರೋಗ್ಯ ಇಲಾಖೆಯ ಸವಲತ್ತುಗಳನ್ನು ಸರ್ವರು ಬಳಸಿಕೊಂಡು ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು’ ಎಂದರು.
ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಆರ್.ರಂಗನಾಥ್ ಮಾತನಾಡಿ, ‘ಆರೋಗ್ಯವೇ ಭಾಗ್ಯ ಎಂಬ ಮಾತನ್ನು ಅಲಕ್ಷಿಸಬೇಡಿ. ಮಕ್ಕಳನ್ನು ದೃಡಕಾಯರನ್ನಾಗಿಸಲು ಆರೋಗ್ಯ ಇಲಾಖೆಯ ನಿಮಯಗಳನ್ನು ಪಾಲಿಸಬೇಕು’ ಎಂದರು.
ಪುರುಷ ಆರೋಗ್ಯ ಸಹಾಯಕ ತುಕಾರಾಮ್, ಆಶಾ ಮೇಲ್ವಿಚಾರಕಿ ಶ್ರೀದೇವಿ, ದಾದಿ ರುದ್ರಾಣಮ್ಮ, ಹಿರಿಯ ಪುರುಷ ಆರೋಗ್ಯ ಸಹಾಯಕ ಶಿವಸ್ವಾಮಿ, ಆರೋಗ್ಯ ಸಹಾಯಕರಾದ ರಾಜಣ್ಣ, ವನಜಾಕ್ಷಮ್ಮ ಇದ್ದರು. ಗರ್ಭಿಣಿಯರಿಗೆ ಟೆಟಾನಸ್ ಚುಚ್ಚುಮದ್ದು ಮತ್ತು ಮಕ್ಕಳಿಗೆ ಇಂದ್ರಧನುಷ್ ಲಸಿಕೆ ಹಾಕಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.