ಮಾಗಡಿ: ವಿದ್ಯಾರ್ಥಿಗಳಿಗೆ ಬಾಲ್ಯದಿಂದಲೇ ದೇಶದ ಸಂವಿಧಾನದ ಆಶಯಗಳಾದ ಭಾವೈಕ್ಯ, ಸಮಗ್ರತೆ, ಪರಿಸರ ಸಂರಕ್ಷಣೆ, ಸೌಹಾರ್ತೆ ಮೈಗೂಡಿಸಿಕೊಳ್ಳುವಂತೆ ಶಿಕ್ಷಕರು ಮತ್ತು ಪೋಷಕರು ಮನವರಿಕೆ ಮಾಡಿಕೊಡಬೇಕಿದೆ ಎಂದು ಪ್ರಗತಿಪರ ಚಿಂತಕ ಮುಕುಂದ ತಿಳಿಸಿದರು.
ತಗ್ಗಿಕುಪ್ಪೆ ಗ್ರಾಮ ಪಂಚಾಯಿತಿಯಲ್ಲಿ ಶನಿವಾರ ನಡೆದ ಮಹಿಳಾ ಮತ್ತು ಮಕ್ಕಳ ಗ್ರಾಮಸಭೆಯಲ್ಲಿ ಅವರು ಮಾತನಾಡಿದರು. ಮಕ್ಕಳಿಗೆ ಕೌಟುಂಬಿಕ ವ್ಯವಸ್ಥೆ ಬಗ್ಗೆ ಪರಿಚಯ ಮಾಡಿಕೊಡಬೇಕು. ಮಹಿಳೆಯರು ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ಒದಗಿಸಬೇಕಿದೆ. ಆರ್ಥಿಕ, ಸಾಮಾಜಿಕ, ರಾಜಕೀಯ ಸಮಾನತೆ ಸಿಗಬೇಕಾಗಿದೆ ಎಂದು ಪ್ರತಿಪಾದಿಸಿದರು.
ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ನಾಗರಾಜು.ಜಿ.ಮಾತನಾಡಿ, ಶಾಲೆಗಳ ಬಿಸಿಯೂಟದ ತ್ಯಾಜ್ಯ ಬಳಸಿ ಗೊಬ್ಬರ ತಯಾರಿಸಲು ಕಾಂಪೋಸ್ಟ್ ಘಟಕ ಆರಂಭಿಸಲಾಗುವುದು. ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಶಾಲಾ ಮಕ್ಕಳು, ಶಿಕ್ಷಕರು, ಅಕ್ಷರಸ್ಥರು ಜನಸಾಮಾನ್ಯರಲ್ಲಿ ಪ್ಲಾಸ್ಟಿಕ್ ನಿಷೇಧದ ಬಗ್ಗೆ ಅರಿವು ಮೂಡಿಸುವ ಅವಶ್ಯವಿದೆ. ಕರಗದಹಳ್ಳಿ ಹಳೆ ಶಾಲಾ ಕಟ್ಟಡದಲ್ಲಿ ತಾತ್ಕಾಲಿಕವಾಗಿ ಘನತ್ಯಾಜ್ಯ ವಿಂಗಡಣೆ ಘಟಕ ಆರಂಭಿಸಲಾಗುವುದು ಎಂದರು.
ಪಶುವೈದ್ಯಾಧಿಕಾರಿ ಡಾ.ರೇಖಾ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ದೇವರಾಜಮ್ಮ, ಎಂ.ಆರ್.ಮುಕುಂದ, ಸದಸ್ಯರಾದ ಮಹಾಂತೇಶ್, ಗ್ರೇಡ್–1 ಕಾರ್ಯದರ್ಶಿ ಬಿ.ಕೆ.ರಾಮಕೃಷ್ಣ ಮಾತನಾಡಿದರು. ತಗ್ಗಿಕುಪ್ಪೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ನಾರಾಯಣಪ್ಪ, ಬೈಚಾಪುರ ಶಾಲೆ ರೇಣುಕಾರಾಧ್ಯ, ಬ್ಯಾಲಕೆರೆ ಶಿವಕುಮಾರಸ್ವಾಮಿ ಪ್ರೌಢಶಾಲೆ ಮುಖ್ಯಶಿಕ್ಷಕ ನಾರಾಯಣಪ್ಪ, ಸಿದ್ದಯ್ಯನಪಾಳ್ಯದ ಸಿದ್ದಲಿಂಗಯ್ಯ, ಮದಲಾರಯ್ಯನ ಪಾಳ್ಯದ ಜಗದೀಶ್, ಕಕ್ಕೆಪ್ಪನಪಾಳ್ಯದ ಪುಷ್ಪಾವತಿ, ನಾಗಶೆಟ್ಟಿಹಳ್ಳಿ ಶಾಲೆ ಜಯಲಕ್ಷ್ಮಮ್ಮ ಹಾಗೂ ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಗ್ರಾ.ಪಂ.ಸಿಬ್ಬಂದಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.