ADVERTISEMENT

ರೇಷ್ಮೆಗೂಡಿಗೆ ಪ್ರೋತ್ಸಾಹಧನ ನೀಡಲು ಒತ್ತಾಯ

pressmeet

​ಪ್ರಜಾವಾಣಿ ವಾರ್ತೆ
Published 29 ಮೇ 2020, 17:11 IST
Last Updated 29 ಮೇ 2020, 17:11 IST
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರವಿ ಮಾತನಾಡಿದರು
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರವಿ ಮಾತನಾಡಿದರು   

ರಾಮನಗರ: ರೇಷ್ಮೆಗೂಡಿಗೆ ರಾಜ್ಯ ಸರ್ಕಾರ ಕೂಡಲೇ ಪ್ರೋತ್ಸಾಹ ಧನವನ್ನು ಘೋಷಿಸಬೇಕು ಎಂದು ಜಿಲ್ಲಾ ರೇಷ್ಮೆ ಬೆಳೆಗಾರರ ಹಿತರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಕೆ.ರವಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಒತ್ತಾಯಿಸಿದರು.

ಕೊರೊನಾ ಲಾಕ್‌ಡೌನ್ ಪರಿಣಾಮವಾಗಿ ರೇಷ್ಮೆಗೂಡಿನ ದರ ಕುಸಿತ ಕಂಡಿದೆ. ಹೀಗಾಗಿ ದ್ವಿತಳಿ ಗೂಡಿಗೆ ₹250 ಹಾಗೂ ಮಿಶ್ರತಳಿ ಗೂಡಿಗೆ ₹200 ಪ್ರೋತ್ಸಾಹಧನ ನೀಡಬೇಕು. ರೇಷ್ಮೆಬೆಳೆ ಮಾಡಲಾಗದೇ ಇರುವ ಹಿಪ್ಪುನೇರಳೆ ತೋಟಕ್ಕೆ ಪ್ರತಿ ಎಕರೆಗೆ ₹25ಸಾವಿರ ಪರಿಹಾರಧನ ನೀಡಬೇಕು. ಸರ್ಕಾರ ರೀಲರ್‌ಗಳ ಸಮಸ್ಯೆಗೆ ಸ್ಪಂದಿಸಿ ಕೆಎಸ್‍ಎಂಬಿ ಮೂಲಕ ಒತ್ತೆ ಸಾಲ ನೀಡುತ್ತಿದೆ. ಅದೇ ರೀತಿ ರೇಷ್ಮೆ ಬೆಳೆಗಾರರ ಸಮಸ್ಯೆಗೂ ಪರಿಹಾರ ನೀಡಬೇಕೆಂದು ಎಂದು ಹೇಳಿದರು.

ಸರ್ಕಾರವೇ ರೇಷ್ಮೆ ಕೃಷಿ ಕ್ಷೇತ್ರಗಳಲ್ಲಿ ಚಾಕಿಹುಳು ಸಾಕಾಣಿಕಾ ಕೇಂದ್ರಗಳನ್ನು ತೆರೆದು ಬೆಳೆಗಾರರಿಗೆ ಕಡಿಮೆ ದರದಲ್ಲಿ ಉತ್ತಮ ಚಾಕಿಹುಳು ಸರಬರಾಜು ಮಾಡಬೇಕು. ಸೋಂಕು ನಿವಾರಕ ಔಷಧ ನೀಡಬೇಕು. ರೇಷ್ಮೆಹುಳು ಮನೆ ಮತ್ತು ಹಾಸಿಗೆ ಉಚಿತವಾಗಿ ನೀಡಬೇಕು ಎಂದು ಆಗ್ರಹಿಸಿದರು.

ADVERTISEMENT

ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಭಾರಿ ಮಳೆಯಿಂದಾಗಿ ಭೈರಮಂಗಲ ವ್ಯಾಪ್ತಿಯಲ್ಲಿ ರೇಷ್ಮೆ ಹುಳು ಸಾಕಾಣಿಕೆ ಮನೆಗಳು ಸಂಪೂರ್ಣ ಹಾನಿಗೊಳಗಾಗಿವೆ. ಅವರಿಗೂ ಪರಿಹಾರ ಘೋಷಿಸಬೇಕು ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಅಧ್ಯಕ್ಷ ಗೌತಮ್ ಗೌಡ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಲ್ಲರಿಗೂ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ, ರೇಷ್ಮೆ ಬೆಳೆಗಾರರನ್ನು ಮಾತ್ರ ಕಡೆಗಣಿಸಿವೆ ಎಂದು ವಿಷಾದ ವ್ಯಕ್ತಪಡಿಸಿದರು. ಸಂಕಷ್ಟದಲ್ಲಿರುವ ರೇಷ್ಮೆ ಬೆಳೆಗಾರರ ನೆರವಿಗೆ ಧಾವಿಸುವಂತೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಪದಾಧಿಕಾರಿಗಳಾದ ಚಂದ್ರು, ಶಶಿ, ಅನಂತ್, ರಾಮಕೃಷ್ಣ, ಶಿವ ರೇಣುಕ, ಸಂತೋಷ್ ಬಾಲು, ರಾಜೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.