ADVERTISEMENT

ಸಾಮಾಜಿಕ ಮಾಧ್ಯಮದ ಹಿಡಿತದಲ್ಲಿ ಬದುಕು: ಸಂಸದೆ ಹೇಮಾಮಾಲಿನಿ ಅಭಿಪ್ರಾಯ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2025, 8:13 IST
Last Updated 16 ಫೆಬ್ರುವರಿ 2025, 8:13 IST
ಬೆಂಗಳೂರು– ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್‌ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಒಲಿಂಪಿಕ್ ಪದಕ ವಿಜೇತ ಬಾಕ್ಸಿಂಗ್ ಪಟು ಲವ್ಲಿನಾ ಬೊರ್ಗೋಹೈನ್ ಮಾತನಾಡಿದರು
ಬೆಂಗಳೂರು– ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್‌ ಅಂತರರಾಷ್ಟ್ರೀಯ ಕೇಂದ್ರದಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ಸಮ್ಮೇಳನದಲ್ಲಿ ಒಲಿಂಪಿಕ್ ಪದಕ ವಿಜೇತ ಬಾಕ್ಸಿಂಗ್ ಪಟು ಲವ್ಲಿನಾ ಬೊರ್ಗೋಹೈನ್ ಮಾತನಾಡಿದರು   

ರಾಮನಗರ: ‘ನಾವು ಪ್ರಸ್ತುತ ಕ್ಷಣವನ್ನು ಅನುಭವಿಸದೆ ಸಾಮಾಜಿಕ ಮಾಧ್ಯಮಗಳ ಹಿಡಿತದಲ್ಲಿ ಬದುಕುತ್ತಿದ್ದೇವೆ. ಅದರ ಅತಿಯಾಗಿ ಬಳಕೆಯು ಉದಾಸೀನತೆಗೆ ಕಾರಣವಾಗುತ್ತಿದೆ. ಜನರು ತಮ್ಮ ಬಗ್ಗೆ ತಾವೇ ಅಸಹ್ಯಪಟ್ಟಿಕೊಳ್ಳುವಂತೆ ಮಾಡುತ್ತಿದೆ. ಇದರಿಂದ ಮನುಷ್ಯ ಸಂಬಂಧಗಳು ಸಡಿಲವಾಗುತ್ತಿವೆ’ ಎಂದು ಸಂಸದೆ ಹೇಮಮಾಲಿನಿ ಅಭಿಪ್ರಾಯಪಟ್ಟರು.

ಬೆಂಗಳೂರು– ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್‌ ಅಂತರರಾಷ್ಟ್ರೀಯ ಕೇಂದ್ರದಲ್ಲಿ ಶುಕ್ರವಾರದಿಂದ ನಡೆಯುತ್ತಿರುವ ಮೂರು ದಿನಗಳ 10ನೇ ಅಂತರ ರಾಷ್ಟ್ರೀಯ ಮಹಿಳಾ ಸಮ್ಮೇಳನದ ಎರಡನೇಯ ದಿನವಾದ ಶನಿವಾರ ನಡೆದ ‘ಸರ್ಕಲ್ ಆಫ್ ವಿಸ್ಡಮ್’ ವಿಶೇಷ ಸತ್ರದಲ್ಲಿ ಪಾಲ್ಗೊಂಡು, ಸಾಮಾಜಿಕ ಮಾಧ್ಯಮಗಳಿಂದ ಉಂಟಾಗುವ ಮಾನಸಿಕ ಆರೋಗ್ಯ ಸಮಸ್ಯೆಗಳ ಕುರಿತು ಗಮನ ಸೆಳೆದರು.

ವೃತ್ತಿ ಜೀವನ, ಕೌಟುಂಬಿಕ ಜೀವನದ ಸಮತೋಲನ ಹಾಗೂ ಶಿಸ್ತಿನ ಜೀವನ ಶೈಲಿಯ ಮಹತ್ವವನ್ನು ಹಂಚಿಕೊಂಡ ಅವರು, ‘ಆರ್ಟ್ ಆಫ್ ಲಿವಿಂಗ್ ಆಶ್ರಮವು ಆತ್ಮನೊಂದಿಗೆ ಸಂಪರ್ಕ ಸಾಧಿಸುವ ಮತ್ತು ಸ್ವತಃ ನಮ್ಮನ್ನು ಪ್ರೀತಿಸಲು ಅವಕಾಶ ಒದಗಿಸುವ ಸ್ಥಳವಾಗಿದೆ’ ಎಂದು ಬಣ್ಣಿಸಿದರು.

ADVERTISEMENT

ಒಲಿಂಪಿಕ್ ಪದಕ ವಿಜೇತ ಬಾಕ್ಸಿಂಗ್ ಪಟು ಲವ್ಲಿನಾ ಬೊರ್ಗೋಹೈನ್ ಮಾತನಾಡಿ, ‘ಹೆತ್ತವರ ಸಂಕಟಗಳನ್ನು ದೂರ ಮಾಡುವುದು ಹಾಗೂ ಪದಕ ಗೆಲ್ಲುವುದೇ ನಿಜವಾದ ಯಶಸ್ಸು ಎಂದು ನಾನು ಭಾವಿಸಿದ್ದೆ. 2024ರ ಒಲಿಂಪಿಕ್ಸ್‌ನಲ್ಲಿ ಸೋತ ನಂತರ ನಾನು ಸಂಪೂರ್ಣ ಕಳೆದು ಹೋಗಿದ್ದೆ. ಗುರುದೇವ ಶ್ರೀ ಶ್ರೀ ರವಿಶಂಕರ್ ಅವರನ್ನು ಭೇಟಿಯಾದ ನಂತರ, ನಿಜವಾದ ಯಶಸ್ಸು ಎಂದರೇನು ಎಂಬುದು ಅರ್ಥವಾಯಿತು. ಕ್ರೀಡೆ ಬೆಳೆಸಲು ಬಯಸುವ ಮಕ್ಕಳಿಗೆ ನಾನು ಸ್ಪೂರ್ತಿಯಾಗಬಲ್ಲೆ ಎಂಬುದನ್ನು ಮನಗಂಡಾಗ ನಾನು ದೊಡ್ಡ ಸಂತೋಷ ಕಂಡುಕೊಂಡೆ’ ಎಂದರು.

ಲೇಖಕಿ ಮತ್ತು ನಿರ್ಮಾಪಕಿ ಅಶ್ವಿನಿ ಅಯ್ಯರ್ ತಿವಾರಿ ಮಾತನಾಡಿ, ‘ನಾನು ಕಾರ್ಪೊರೇಟ್ ಕೆಲಸ ಬಿಟ್ಟು, ಕತೆ ಹೇಳುವ ನನ್ನ ಗುರಿಯನ್ನು ಹಿಂಬಾಲಿಸಲು ನಿರ್ಧರಿಸಿದ್ದೆ. ಜೀವನದಲ್ಲಿ ಯಾವಾಗಲೂ ಹೊಸ ಬಾಗಿಲು ತೆರೆಯಲು ಪ್ರಯತ್ನಿಸಿ. ಏಕೆಂದರೆ ಸಹಾಯವು ನಮಗರಿಯದ ಯಾವುದಾದರೂ ರೂಪದಲ್ಲಿ ಬರುತ್ತದೆ’ ಎಂದು ಅಭಿಪ್ರಾಯಪಟ್ಟರು.

ಎಡಲ್‌ವೈಸ್ ಮ್ಯೂಚುಯಲ್ ಫಂಡ್‌ ವ್ಯವಸ್ಥಾಪಕ ನಿರ್ದೇಶಕಿ ಮತ್ತು ಸಿಇಒ ರಾಧಿಕಾ ಗುಪ್ತಾ, ಹಸುಗೆಛ್ಚಿ ರುಚಿರಾ ಕಂಬೋಜ ಅಭಿಪ್ರಾಯ ಹಂಚಿಕೊಂಡರು. ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ಶ್ರೀ ಶ್ರೀ ರವಿಶಂಕರ್ ಗುರೂಜಿ ಆಶೀರ್ವಚನ ನೀಡಿದರು. ಅಂತರರಾಷ್ಟ್ರೀಯ ಮಹಿಳಾ ಪರಿಷತ್ತಿನ ಅಧ್ಯಕ್ಷೆ ಭಾನುಮತಿ ನರಸಿಂಹನ್ ಇದ್ದರು.

ಶಿಕ್ಷಣವು ಜ್ಞಾನವನ್ನು ಪ್ರಜ್ಞೆಗೆ ಪರಿವರ್ತಿಸುವ ಪ್ರಕ್ರಿಯೆ. ಶಿಕ್ಷಣ ಎಂದರೆ ಧೈರ್ಯ ಆತ್ಮವಿಶ್ವಾಸ ಮತ್ತು ಬದ್ಧತೆ. ಇದು ಶಕ್ತಿಯುತ ಮಹಿಳೆಯರನ್ನೂ ಜವಾಬ್ದಾರಿಯುತ ಪುರುಷರನ್ನೂ ಬೆಳೆಸುವ ಕಲೆಯಾಗಿದೆ
ಐಶ್ವರ್ಯ ಡಿ.ಕೆ.ಎಸ್ ಹೆಗಡೆ ಉದ್ಯಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.