ADVERTISEMENT

ಜಾನಪದ ಜಾತ್ರೆ ಪುನರಾರಂಭಕ್ಕೆ ಒತ್ತಾಯ

ಜನಪದ ವೇಷಭೂಷಣ, ಜನಪದ ಕಲಾ ಪ್ರದರ್ಶನ ಕಾರ್ಯಕ್ರಮ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2018, 11:39 IST
Last Updated 20 ಅಕ್ಟೋಬರ್ 2018, 11:39 IST
ಜಾನಪದ ಲೋಕದ ಆವರಣದಲ್ಲಿ ಶುಕ್ರವಾರ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು
ಜಾನಪದ ಲೋಕದ ಆವರಣದಲ್ಲಿ ಶುಕ್ರವಾರ ಸಂಜೆ ಬನ್ನಿ ಮುಡಿಯುವ ಕಾರ್ಯಕ್ರಮ ನಡೆಯಿತು   

ರಾಮನಗರ: ಸರ್ಕಾರದ ವತಿಯಿಂದ ನಡೆಯುತ್ತಿದ್ದ ‘ಜಾನಪದ ಜಾತ್ರೆ’ಯನ್ನು ಪುನಃ ಪ್ರಾರಂಭಿಸಬೇಕು ಎಂದು ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷ ಟಿ. ತಿಮ್ಮೇಗೌಡ ಒತ್ತಾಯಿಸಿದರು.

ಇಲ್ಲಿನ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ವತಿಯಿಂದ ಶುಕ್ರವಾರ ಸಂಜೆ ನಡೆದ ಜನಪದ ವೇಷಭೂಷಣ, ಜನಪದ ಕಲಾ ಪ್ರದರ್ಶನ ಹಾಗೂ ಬನ್ನಿ ಮುಡಿಯುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 2006ರಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರು ಜಾನಪದ ಜಾತ್ರೆ ಕಾರ್ಯಕ್ರಮವನ್ನು ರೂಪಿಸಿದ್ದರು. ಇದರಿಂದ ಕಲಾವಿದರಿಗೆ ಪ್ರದರ್ಶನದ ಜತೆಗೆ ಅವರ ಜೀವನ ಮಟ್ಟವೂ ಸುಧಾರಿಸಲು ಸಹಕಾರಿಯಾಗಿತ್ತು. ಜನರು ಕಲೆಗಳ ಬಗ್ಗೆ ತಿಳಿದುಕೊಳ್ಳಲು ನೆರವಾಗಿತ್ತು ಎಂದು ತಿಳಿಸಿದರು.

ಈಗ ಮತ್ತೆ ಮುಖ್ಯಮಂತ್ರಿಯಾಗಿರುವ ಕುಮಾರಸ್ವಾಮಿ ಅವರು ಜಾನಪದ ಜಾತ್ರೆಯನ್ನು ಮತ್ತೆ ಪ್ರಾರಂಭಿಸಬೇಕು. ಇದರಿಂದ ಪಾಶ್ಚ್ಯಾತ್ಯ ಸಂಗೀತಕ್ಕೆ ಮಾರು ಹೋಗುತ್ತಿರುವ ಯುವ ಸಮುದಾಯವನ್ನು ನಮ್ಮ ಸಂಸ್ಕೃತಿಯತ್ತ ಆಕರ್ಷಿಸಲು ಸಾಧ್ಯವಾಗುತ್ತದೆ ಎಂದು ಅವರು ಹೇಳಿದರು.

ADVERTISEMENT

ಕರ್ನಾಟಕ ಜಾನಪದ ಪರಿಷತ್ತಿನ ಮ್ಯಾನೇಜಿಂಗ್‌ ಟ್ರಸ್ಟಿ ಆದಿತ್ಯ ನಂಜರಾಜ್, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸು.ತ. ರಾಮೇಗೌಡ, ಸಾಹಿತಿ ಅಂಕನಹಳ್ಳಿ ಪಾರ್ಥ, ಕನ್ನಮಂಗಲದೊಡ್ಡಿಯ ಮುಖಂಡರಾದ ಪುಟ್ಟಣ್ಣ, ಮರಿಸ್ವಾಮಿ, ಶಿವಲಿಂಗಯ್ಯ, ಕೆಂಪಲಿಂಗಯ್ಯ, ಪೂಜಾರಪ್ಪ, ಜಾನಪದ ಲೋಕದ ಆಡಳಿತಾಧಿಕಾರಿ ಕುರುವ ಬಸವರಾಜ್, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ ಇದ್ದರು.

ವಿವಿಧ ಸ್ಪರ್ಧೆ ವಿಜೇತರು
ದಸರಾ ಅಂಗವಾಗಿ ಜಾನಪದ ಲೋಕದಲ್ಲಿ ಶುಕ್ರವಾರ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ವಿಜೇತರ ವಿವರ ಇಂತಿದೆ.
ಜಾನಪದ ವೇಷಭೂಷಣ ಸ್ಪರ್ಧೆ: ರಾಮನಗರದ ವಿ. ಚೇತನಾ ಪ್ರಥಮ, ನೂತನ್ ಆರ್. ಗೌಡ ದ್ವಿತೀಯ, ಆಯುಷ್‌ಗೌಡ ತೃತೀಯ ಹಾಗೂ ಸಾನ್ವಿ ಸಮಾಧಾನಕರ ಬಹುಮಾನ.

ಹಗ್ಗಜಗ್ಗಾಟ ಸ್ಪರ್ಧೆ: ಚನ್ನಪಟ್ಟಣದ ದೇವರಹೊಸಹಳ್ಳಿಯ ಅಂಜನ್‌ಕುಮಾರ್ ಪ್ರಥಮ, ಭರತ್‌ ದ್ವಿತೀಯ, ಕ್ಯಾಸಾಪುರದ ಶ್ರೀನಿವಾಸ್ ತೃತೀಯ ಹಾಗೂ ರಾಮನಗರದ ಸಂತೋಷ್ ಸಮಾಧಾನಕರ ಬಹುಮಾನ.

ಗುಂಡು ಎತ್ತುವ ಸ್ಪರ್ಧೆ: ದೇವರಹೊಸಹಳ್ಳಿಯ ಮಂಜು ಪ್ರಥಮ, ಬನ್ನಿಕಪ್ಪೆಯ ಶರತ್‌ ದ್ವಿತೀಯ, ಚನ್ನಪಟ್ಟಣದ ಲೋಕೇಶ್ ತೃತೀಯ ಹಾಗೂ ದೇವರಹೊಸಹಳ್ಳಿಯ ಜಿತೇಂದ್ರ ಸಮಾಧಾನಕರ ಬಹುಮಾನ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.