
ಕನಕಪುರ: ಹಿಂದುತ್ವ ಪರ ಸಂಘಟನೆಗಳು, ರಾಷ್ಟ್ರೀಯ ಸ್ವಯಂ ಸೇವಕ ಕಾರ್ಯಕರ್ತರು ಆಯೋಜಿಸಿದ್ದ ತಾಲ್ಲೂಕು ಮಟ್ಟದ ಹಿಂದೂ ಸಮಾಜೋತ್ಸವ ಸೋಮವಾರ ನಗರದಲ್ಲಿ ನಡೆಯಿತು.
ನಗರದ ಅಯ್ಯಪ್ಪ ದೇವಸ್ಥಾನದ ಮುಂಭಾಗದಿಂದ ಮೆರವಣಿಗೆ ಆರಂಭವಾಯಿತು. ದೇಶದ ಮಹಾನ್ ನಾಯಕರ ಸ್ಥಬ್ದ ಚಿತ್ರ ಹಾಗೂ ಶಕ್ತಿ ದೇವತೆಗಳ ಮುತ್ತಿನ ಪಲ್ಲಕ್ಕಿ ಮೆರವಣಿಗೆ ನಗರದ ಎಂ.ಜಿ. ರಸ್ತೆಯಲ್ಲಿ ಸಾಗಿತು.
ಮೆರವಣಿಗೆ ತಾಲ್ಲೂಕು ಕ್ರೀಡಾಂಗಣದ ವೇದಿಕೆ ತಲುಪುತ್ತಿದ್ದಂತೆ ಪುಷ್ಪಾರ್ಚನೆ ಸಲ್ಲಿಸಿ ಕಾರ್ಯಕ್ರಮ ಪ್ರಾರಂಭಿಸಲಾಯಿತು.
ರಾಮಕೃಷ್ಣಾಶ್ರಮದ ನಾರಾಯಣ ಸರಸ್ವತಿ, ಚಿಕ್ಕಕಲ್ಬಾಳ ಮಠದ ಶಿವಾನಂದ ಶಿವಾಚಾರ್ಯ ಸ್ವಾಮೀಜಿ, ಕನಕಪುರದ ಜೋಷ್ ಮಯಿ, ಉತ್ಕರ್ಷ ಮಾತನಾಡಿದರು.
ಮಹಾನ್ ಸಾಧುಸಂತರನ್ನು ಮಹನೀಯರನ್ನು, ಪುಣ್ಯ ಪುರುಷರನ್ನು ಒಂದು ಜಾತಿಗೆ ಸೀಮಿತಗೊಳಿಸುವುದು ಸರಿಯಲ್ಲ. ಅವರನ್ನು ಜಾತಿಯ ಬಂಧನದಿಂದ ಮುಕ್ತಗೊಳಿಸಬೇಕು, ಸ್ವಾರ್ಥಕ್ಕೆ ಬಳಸಿಕೊಳ್ಳುವುದನ್ನು ಬಿಡಬೇಕು. ಹಿಂದೂ ಸಮಾಜದ ಉಳಿವಿಗೆ ಎಲ್ಲರೂ ಒಟ್ಟಾಗಬೇಕೆಂದು ಹೇಳಿದರು.
ಹಿಂದೂ ಸಮಾಜೋತ್ಸವ ಆಚರಣೆ ಸಮಿತಿ ಅಧ್ಯಕ್ಷ ಬಿ. ನಾಗರಾಜು ಸೇರಿದಂತೆ ಸಮಿತಿ ಸದಸ್ಯರು ,ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.