ADVERTISEMENT

ಯೇಸು ಪ್ರತಿಮೆ ವಿರೋಧಿಸಿ ಕನಕಪುರ ಚಲೋ 13ರಂದು

ಗೋಮಾಳ ಜಾಗ ಹಿಂಪಡೆಯಲು ರಾಜ್ಯ ಸರ್ಕಾರಕ್ಕೆ ಒತ್ತಾಯ

​ಪ್ರಜಾವಾಣಿ ವಾರ್ತೆ
Published 6 ಜನವರಿ 2020, 12:22 IST
Last Updated 6 ಜನವರಿ 2020, 12:22 IST
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಉಲ್ಲಾಸ್‌ ಮಾತನಾಡಿದರು
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಉಲ್ಲಾಸ್‌ ಮಾತನಾಡಿದರು   

ರಾಮನಗರ: ಯೇಸು ಪ್ರತಿಮೆ ನಿರ್ಮಾಣಕ್ಕೆ ಸರ್ಕಾರವು ನೀಡಿರುವ ಜಾಗವನ್ನು ಹಿಂಪಡೆಯುವಂತೆ ಆಗ್ರಹಿಸಿ ಹಿಂದೂ ಜಾಗರಣ ವೇದಿಕೆ ನೇತೃತ್ವದಲ್ಲಿ ಇದೇ 13ರಂದು ಕನಕಪುರ ಚಲೋ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ವೇದಿಕೆಯ ದಕ್ಷಿಣ ಪ್ರಾಂತ ಕಾರ್ಯದರ್ಶಿ ಉಲ್ಲಾಸ್‌ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

ಅಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಬೆಂಗಳೂರು, ಕೋಲಾರ, ಮಂಡ್ಯ, ರಾಮನಗರ ಸೇರಿದಂತೆ ರಾಜ್ಯದ ವಿವಿಧ ಭಾಗಗಳಿಂದ ಆಸಕ್ತರು ಪಕ್ಷಾತೀತವಾಗಿ ಪಾಲ್ಗೊಳ್ಳಲಿದ್ದಾರೆ. ಮುಖಂಡ ಕಲ್ಲಡ್ಕ ಪ್ರಭಾಕರ ಭಟ್‌ ಮುಖ್ಯ ಅತಿಥಿಯಾಗಿ ಬರಲಿದ್ದಾರೆ. ಮೆರವಣಿಗೆ ನಡೆಸಿ ತಹಶೀಲ್ದಾರ್‌ ಮುಖಾಂತರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಮುನೇಶ್ವರನ ಸನ್ನಿಧಿ

ADVERTISEMENT

ಕಪಾಲ ಬೆಟ್ಟ ಎಂದು ಗುರುತಿಸಲಾಗುತ್ತಿರುವ ಈ ಬೆಟ್ಟವು ಮೂಲದಲ್ಲಿ ಮುನೇಶ್ವರ ಸ್ವಾಮಿಯ ಸನ್ನಿಧಿಯಾಗಿತ್ತು. ಸುತ್ತಮುತ್ತಲಿನ ಗ್ರಾಮಸ್ಥರು ದೇವರಿಗೆ ಸೇವೆ ಸಲ್ಲಿಸುತ್ತಿದ್ದರು. ಈ ಪುಣ್ಯ ಭೂಮಿಯನ್ನು ಕ್ರೈಸ್ತೀಕರಣಗೊಳಿಸುವುದನ್ನು ತಡೆಯಲು ಕನಕಪುರ ಚಲೋ ಹಮ್ಮಿಕೊಳ್ಳಲಾಗಿದೆ ಎಂದರು.

ಸರ್ಕಾರವು ನಿಯಮಗಳನ್ನು ಗಾಳಿಗೆ ತೂರಿ ಹಾರೋಬೆಲೆ ಕಪಾಲ ಬೆಟ್ಟ ಅಭಿವೃದ್ಧಿ ಟ್ರಸ್ಟ್ ಗೆ ಗೋಮಾಳ ಮಂಜೂರು ಮಾಡಿದೆ. ಜಮೀನು ಸಿಗುವ ಮುನ್ನವೇ ಅಕ್ರಮವಾಗಿ ಕೆಲಸ ಆರಂಭಿಸಲಾಗಿದೆ. ಈ ಬಗ್ಗೆಯೂ ಕನಕಪುರ ತಹಶೀಲ್ದಾರ್‌ಗೆ ದೂರು ನೀಡಲಾಗುವುದು ಎಂದರು. ಈ ಹಿಂದೆ ಕನಕಪುರ ರಸ್ತೆಯಲ್ಲಿ ಇಸ್ಕಾನ್ ಶ್ರೀ ಕೃಷ್ಣ ಥೀಮ್ ಪಾರ್ಕ್ ನಿರ್ಮಾಣ ಮಾಡಲು ಹೊರಟಾಗ ಕ್ರೈಸ್ತ ಮಿಷನರಿಗಳು ವಿರೋಧ ವ್ಯಕ್ತಪಡಿಸಿದ್ದವು. ಸ್ಥಳೀಯ ಪ್ರಭಾವಿ ಮುಖಂಡರೊಬ್ಬರನ್ನು ಬಳಸಿಕೊಂಡು ಇದಕ್ಕೆ ತಡೆ ಒಡ್ಡಲಾಗಿತ್ತು ಎಂದು ದೂರಿದರು.

ಮತಾಂತರ ಯತ್ನ

ಕಪಾಲ ಬೆಟ್ಟದ ಸುತ್ತಲಿನ ಗ್ರಾಮಗಳಲ್ಲಿ ಈಗಾಗಲೇ ವ್ಯಾಪಕವಾಗಿ ಮತಾಂತರ ಕಾರ್ಯ ನಡೆದಿದೆ. ಅಲ್ಲದೇ ರಾಮನಗರ, ಮಂಡ್ಯ, ಬೆಂಗಳೂರು, ಚಿಕ್ಕಬಳ್ಳಾಪುರ, ಕೋಲಾರ ಭಾಗದಲ್ಲಿಯೂ ಮತಾಂತರ ಕಾರ್ಯಕ್ರಮಗಳು ಹೆಚ್ಚಾಗುತ್ತಿವೆ. ಒಕ್ಕಲಿಗರನ್ನೇ ಗುರಿಯಾಗಿಸಿಕೊಳ್ಳಲಾಗುತ್ತಿದೆ ಎಂದು ದೂರಿದರು.

ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಗಜೇಂದ್ರ ಸಿಂಗ್, ಪದಾಧಿಕಾರಿಗಳಾದ ಅನಿಲ್ ಬಾಬು, ಅರುಣ್ ಸಿಂಗ್, ರಾಜೇಶ್, ಧನಂಜಯ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.