ADVERTISEMENT

ಹೈಟೆಕ್‌ ಸುಸಜ್ಜಿತ ಹೆರಿಗೆ ಆಸ್ಪತ್ರೆ; ತಿಂಗಳು ಆರಾದರೂ ಆಗಿಲ್ಲ ಉದ್ಘಾಟನೆ!

ಇನ್ಫೊಸಿಸ್‌ ಪ್ರತಿಷ್ಠಾನದಿಂದ ನಿರ್ಮಾಣ

ಬರಡನಹಳ್ಳಿ ಕೃಷ್ಣಮೂರ್ತಿ
Published 27 ಜೂನ್ 2022, 4:59 IST
Last Updated 27 ಜೂನ್ 2022, 4:59 IST
ನಮ್ಮ ಜನ ನಮ್ಮ ಧ್ವನಿ
ನಮ್ಮ ಜನ ನಮ್ಮ ಧ್ವನಿ   

ಕನಕಪುರ: ಇನ್ಫೊಸಿಸ್‌ ಪ್ರತಿಷ್ಠಾನದಿಂದ ಇಲ್ಲಿ ಹೈಟೆಕ್‌ ಸುಸಜ್ಜಿತ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ (ಎಂಸಿಎಚ್‌) ನಿರ್ಮಾಣಗೊಂಡು ಆರು ತಿಂಗಳು ಕಳೆಯುತ್ತಾ ಬಂದರೂ, ಇನ್ನೂ ಉದ್ಘಾಟನೆ ಭಾಗ್ಯ ಕೂಡಿ ಬಂದಿಲ್ಲ.

ಕನಕಪುರ ತಾಲ್ಲೂಕಿನ ಬಿಜ್ಜಳ್ಳಿ ಸಾಹುಕಾರರು ಸರಿಯಾದ ಸಮಯಕ್ಕೆ ಹೆರಿಗೆ ಸೇವೆ ದೊರಯಬೇಕೆಂದು ಬಸ್‌ ನಿಲ್ದಾಣಕ್ಕೆ ಹೊಂದಿಕೊಂಡಂತೆ ಒಂದು ಎಕರೆ ಭೂಮಿಯನ್ನು ದಾನವಾಗಿ ಕೊಟ್ಟಿದ್ದರು.

ಅದರಲ್ಲಿ ಅಂದಿನ ಕಾಲಕ್ಕೆ ತಕ್ಕಂತೆ ಸುಸಜ್ಜಿತ ಹೆರಿಗೆ ಆಸ್ಪತ್ರೆ ನಿರ್ಮಾಣಗೊಂಡಿತ್ತು. ತಾಲ್ಲೂಕು ಸೇರಿದಂತೆ ಪಕ್ಕದ ತಮಿಳುನಾಡು, ಮಂಡ್ಯ ಜಿಲ್ಲೆಯ ಹಲಗೂರು ಹೋಬಳಿ, ರಾಮನಗರ ತಾಲ್ಲೂಕು ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕಿನಿಂದ ಇಲ್ಲಿಗೆ ಹೆರಿಗಾಗಿ ಇಲ್ಲಿಗೆ ಬರುತ್ತಿದ್ದರು.

ADVERTISEMENT

ಕಾಲನಂತರದಲ್ಲಿ ಶಿಥಿಲವಾಗಿ ಸೋರಲು ಪ್ರಾರಂಭಿಸಿತು. ಹಲವು ಬಾರಿ ದುರಸ್ತಿಗೊಳಿಸಿದರೂ ಆಗ್ಗಾಗೆ ರಿಪೇರಿಗೆ ಬರುತ್ತಿತು. ಕಟ್ಟಡ ಕೆಡವಿ ಮರು ನಿರ್ಮಾಣ ಮಾಡಬೇಕೆಂದು ಸರ್ಕಾರ ಚಿಂತನೆ ನಡೆಸಿತ್ತು.

ಇನ್ಫೊಸಿಸ್‌ ಸುಧಾಮೂರ್ತಿ ಅವರಲ್ಲಿ ಡಿ.ಕೆ.ಶಿವಕುಮಾರ್‌, ಡಿ.ಕೆ.ಸುರೇಶ್‌ ಅವರು ಆಸ್ಪತ್ರೆ ನಿರ್ಮಾಣಕ್ಕೆ ಸಹಾಯ ಮಾಡುವಂತೆ ಮನವಿ ಸಲ್ಲಿಸಿದ್ದರು. ಅದರಂತೆ ಸುಧಾಮೂರ್ತಿ ಅವರು ತಮ್ಮ ಪ್ರತಿಷ್ಠಾನದಿಂದ ₹25 ಕೋಟಿ ದೇಣಿಗೆ ನೀಡುವುದಾಗಿ ಘೋಷಿಸಿದ್ದರು. ಮಹಿಳಾ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿ ಮಹಿಳೆಯರ ದೊಡ್ಡ ಸಂಖ್ಯೆ ನೋಡಿ ಭಾವುಕರಾಗಿ ಆಸ್ಪತ್ರೆಯನ್ನು ತಮ್ಮ ಪ್ರತಿಷ್ಠಾನದಿಂದಲೇ ನಿರ್ಮಾಣಕ್ಕೆ ಹಣವನ್ನು ತಾವೇ ಭರಿಸುವುದಾಗಿ ಘೋಷಣೆ ಮಾಡಿದ್ದರು.

ರಾಜಕೀಯ ಕಾರಣಕ್ಕಾಗಿ ತಡ: ಸುಧಾಮೂರ್ತಿ ಅವರ ಮಾತಿನಂತೆ ಐದು ಹಂತಸ್ತಿನ ಸುಸಜ್ಜಿತ ಆಸ್ಪತ್ರೆ ನಿರ್ಮಾಣ ಆಯಿತು. ಆದರೆ ನಿರ್ಮಾಣ ಕಾರ್ಯ ಪೂರ್ಣಗೊಂಡು ಆರು ತಿಂಗಳೇ ಕಳೆದಿವೆ. ಆದರೂ ಕಟ್ಟಡ ಉದ್ಘಾಟನೆ ಆಗಿಲ್ಲ. ಚುನಾವಣೆ ಸಮಯ ಅಥವಾ ತಮ್ಮ ಸರ್ಕಾರ ಬಂದ ಮೇಲೆ ಉದ್ಘಾಟನೆ ಮಾಡೋಣ ಎಂದು ಡಿ.ಕೆ.ಸಹೋದರರ ಮುಂದೂಡುತ್ತಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ. ಇದಕ್ಕೆ ಭಿನ್ನವಾಗಿ ಹೇಳುವ ಡಿ.ಕೆ.ಸಹೋದರರು, ಆಸ್ಪತ್ರೆ ಅಧಿಕಾರಿಗಳು, ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ, ಕಟ್ಟಡ ಸರ್ಕಾರಕ್ಕೆ ಹಸ್ತಾಂತರವಾಗಿಲ್ಲ ಎನ್ನುತ್ತಿದ್ದಾರೆ.

ಇಲ್ಲಿ ಭವ್ಯವಾದ ಹಾಗೂ ಸುಸಜ್ಜಿತವಾದ ಹೆರಿಗೆ ಆಸ್ಪತ್ರೆ ಸಿದ್ದವಿದ್ದರೂ ಉದ್ಘಾಟನೆ ಆಗದ ಕಾರಣ ಐಪಿಪಿ ಆಸ್ಪತ್ರೆಯಲ್ಲೇ ಹೆರಿಗೆ ಆಸ್ಪತ್ರೆ ನಡೆಸಲಾಗುತ್ತಿದೆ. ಇಲ್ಲಿ ವ್ಯವಸ್ಥೆ ಉತ್ತಮವಾಗಿಲ್ಲ. ಆದರೂ ಹೊಂದಾಣಿಕೆ ಮಾಡಿಕೊಂಡು ಹೋಗಲಾಗುತ್ತಿದೆ. ಪ್ರತಿನಿತ್ಯ ಇಲ್ಲಿ 5 –6, ತಿಂಗಳಲ್ಲಿ 150 ಹೆರಿಗೆ ಆಗುತ್ತಿವೆ. ಇಲ್ಲಿ ಸರಿಯಾದ ವ್ಯವಸ್ಥೆ ಇಲ್ದ ಕಾರಣ ಡಾ.ಚಂದ್ರಮ್ಮ ದಯಾನಂದ ಸಾಗರ್‌ ಆಸ್ಪತ್ರೆಗೆ ಹೋಗುತ್ತಿದ್ದಾರೆ.

ವೈದ್ಯರು, ತಂತ್ರಜ್ಞರು, ನೌಕರರು, ಸಿಬ್ಬಂದಿಗಳು ಸೇರಿ ಒಟ್ಟು 90 ಮಂದಿ ಉದ್ಯೋಗಿಗಳು ಇಲ್ಲಿ ಕೆಲಸ ನಿರ್ವಹಿಸಬೇಕಿದೆ. ಸದ್ಯಕ್ಕೆ ಐಪಿಪಿ ಆಸ್ಪತ್ರೆಯಲ್ಲಿ ಶೇಕಡ 30 ರಷ್ಟು ಸಿಬ್ಬಂದಿಗಳಿದ್ದು ಉಳಿದಂತೆ ಶೇ70 ರಷ್ಟು ಮಾನವ ಸಂಪನ್ಮೂಲ ಕೊಡಬೇಕಿದೆ. ಸರ್ಕಾರವು ಅಷ್ಟು ಮಾನವ ಸಂಪನ್ಮೂಲ ಕೊಡಬೇಕು. ಆಸ್ಪತ್ರೆ ಹಸ್ತಾಂತರ ಮಾಡಿಕೊಂಡು ಅಗತ್ಯ ಯಂತ್ರೋಪಕರಣಗಳನ್ನು ಪೂರೈಕೆ ಮಾಡಬೇಕು. ಇದೆ. ಎಲ್ಲವೂ ಪೂರ್ಣಗೊಂಡ ಮೇಲೆ ಆಸ್ಪತ್ರೆ ಉದ್ಘಾಟನೆ ಆಗಲಿದೆ ಎನ್ನುತ್ತಾರೆ ಐಪಿಪಿ ಆಸ್ಪತ್ರೆ ಆಢಳಿತಾಧಿಕಾರಿ ಡಾ.ವಾಸು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.