
ಕನಕಪುರ: ಕಸಬಾ ಹೋಬಳಿ ಶಿವನಹಳ್ಳಿ ಶಿವಶಂಕರ ಮಠದಲ್ಲಿ ಶನೇಶ್ವರ ಜಾತ್ರಾ ಮಹೋತ್ಸವವು ಸೋಮವಾರ ಅದ್ದೂರಿಯಾಗಿ ನಡೆಯಿತು. ಜಾತ್ರೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.
ಶನಿವಾರ ಆರಂಭಗೊಂಡ ಶನೇಶ್ವರ ಜಾತ್ರಾ ಮಹೋತ್ಸವದ ಮೂರು ದಿನಗಳ ಕಾರ್ಯಕ್ರಮದಲ್ಲಿ ಮಠದ ಆವರಣದಲ್ಲಿ ನಿರ್ಮಿಸಿರುವ ಮಹಾ ಗಣಪತಿ, ಆತ್ಮಲಿಂಗೇಶ್ವರ, ನಂದೀಶ್ವರ, ಪಾರ್ವತಿ ದೇವಿ, ನವಗ್ರಹ ಪೂಜೆಗಳು ನಡೆದವು.
ಮೃತ್ಯುಂಜಯ ಪೂಜೆ ಕಳಸ ಪ್ರತಿಷ್ಠಾಪನೆಯೊಂದಿಗೆ ಮಹಾಮಂಗಳಾರತಿ ನಡೆಯಿತು. ಭಾನುವಾರ ಬ್ರಾಹ್ಮಿ ಮುಹೂರ್ತದಲ್ಲಿ ದೇವರಿಗೆ ರುದ್ರಾಭಿಷೇಕ, ನವಗ್ರಹ ಹೋಮ, ಗಣಪತಿ ಹೋಮ, ಮೃತ್ಯುಂಜಯ ಹೋಮ, ಶನೇಶ್ವರ ಸ್ವಾಮಿಯ ಮಹಾ ಯಾಗ ನೆರವೇರಿತು.
ಸೋಮವಾರ ಬೆಳಗ್ಗೆ ದೇವರಿಗೆ ಪಂಚಾಮೃತ ಅಭಿಷೇಕ, ಕುಂಭ ಲಗ್ನದಲ್ಲಿ ಗಿರಿಜಾ ಕಲ್ಯಾಣೋತ್ಸವ, ಮಹಾಮಂಗಳಾರತಿ, ಮಹಾ ರುದ್ರಾಭಿಷೇಕ ಸಹಿತ ಪೂಜಾ ಕಾರ್ಯಕ್ರಮ ಜರುಗಿದವು.
ದೇಗುಲ ಮಠದ ಕಿರಿಯ ಶ್ರೀ ಚನ್ನಬಸವ ಸ್ವಾಮೀಜಿ ಧಾರ್ಮಿಕ ಕಾರ್ಯಗಳ ಸಾನಿಧ್ಯ ವಹಿಸಿದರು.
ದೇವಾಲಯದ ಅರ್ಚಕ ಪ್ರಕಾಶ್, ಬಸವರಾಜು, ಮಹದೇವಪ್ಪ, ಸುರೇಶ್, ರಾಜು, ವೀರಭದ್ರಯ್ಯ ಎಲ್ಲ ಕಾರ್ಯಕ್ರಮಗಳ ನೇತೃತ್ವ ವಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.