ADVERTISEMENT

ಕನಕಪುರ | ಆಯತಪ್ಪಿ ಕೊಂಡಕ್ಕೆ ಬಿದ್ದ ಇಬ್ಬರು ಅರ್ಚಕರು

ಬಾಣಂತ ಮಾರಮ್ಮ ಅಗ್ನಿಕೊಂಡೋತ್ಸವದಲ್ಲಿ ಅವಘಡ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2025, 14:49 IST
Last Updated 15 ಏಪ್ರಿಲ್ 2025, 14:49 IST
ಕನಕಪುರದ ಕೂತಗೊಂಡನಹಳ್ಳಿಯಲ್ಲಿ ಮಂಗಳವಾರ ನಡೆದ ಊರು ಹಬ್ಬದಲ್ಲಿ ಕೊಂಡ ಆಯಲು ಬಾಣಂತ ಮಾರಮ್ಮ ಗಿಂಡಿ ಹೊತ್ತಿರುವ ಪ್ರಧಾನ ಅರ್ಚಕ ಶಿವಣ್ಣ
ಕನಕಪುರದ ಕೂತಗೊಂಡನಹಳ್ಳಿಯಲ್ಲಿ ಮಂಗಳವಾರ ನಡೆದ ಊರು ಹಬ್ಬದಲ್ಲಿ ಕೊಂಡ ಆಯಲು ಬಾಣಂತ ಮಾರಮ್ಮ ಗಿಂಡಿ ಹೊತ್ತಿರುವ ಪ್ರಧಾನ ಅರ್ಚಕ ಶಿವಣ್ಣ   

ಕನಕಪುರ: ಕೊಂಡ ಆಯುವಾಗ ಪ್ರಧಾನ ಆರ್ಚಕರು ಆಯತಪ್ಪಿ ಕೊಂಡಕ್ಕೆ ಬಿದ್ದು ಇಬ್ಬರು ಗಾಯಗೊಂಡಿರುವ ಘಟನೆ ಕೂತಗೊಂಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ನಡೆದಿದೆ.

ತಾಲ್ಲೂಕಿನ ಕಸಬಾ ಹೋಬಳಿಯ ಕೂತಗೊಂಡನಹಳ್ಳಿ ಗ್ರಾಮದಲ್ಲಿ ಮಂಗಳವಾರ ಬೆಳಿಗ್ಗೆ ನಡೆದ ಗ್ರಾಮ ದೇವತೆ ಬಾಣಂತ ಮಾರಮ್ಮ ಅಗ್ನಿಕೊಂಡೋತ್ಸವದಲ್ಲಿ ಈ ಅವಘಡ ಸಂಭವಿಸಿದೆ.

ದೇವಾಲಯದ ಪ್ರಧಾನ ಅರ್ಚಕ ಶಿವಣ್ಣ (42), ರಾಮಸ್ವಾಮಿ (63) ಕೊಂಡ ಆಯುವಾಗ ಆಯತಪ್ಪಿ ಬಿದ್ದು ಗಾಯಗೊಂಡವರು. ಶಿವಣ್ಣ ಮತ್ತು ರಾಮಸ್ವಾಮಿ ಅವರು ಚಿಕಿತ್ಸೆ ಪಡೆದಿದ್ದು, ಆರೋಗ್ಯವಾಗಿದ್ದಾರೆ.

ADVERTISEMENT

ಬಾಣಂತ ಮಾರಮ್ಮ ದೇವಿಯ ಅಗ್ನಿಕೊಂಡೋತ್ಸವದ ಅಂಗವಾಗಿ ಸೋಮವಾರ ಯಳವಾರ ಕಾರ್ಯಕ್ರಮ ನಡೆಯಿತು. ಮಂಗಳವಾರ ಬೆಳಿಗ್ಗೆ 5 ಗಂಟೆಯಿಂದ ಗ್ರಾಮದ ಸರ್ಕಾರಿ ಶಾಲೆ ಬಳಿಯಿಂದ ಮೆರವಣಿಗೆ ಮೂಲಕ ದೇವರನ್ನು ಅಗ್ನಿಕೊಂಡದ ಬಳಿಗೆ ಕರೆತರಲಾಯಿತು.

ಸುಮಾರು 7 ಗಂಟೆಗೆ ಪ್ರಧಾನ ಅರ್ಚಕ ಶಿವಣ್ಣ ಕರಗ ಹೊತ್ತು ಅಗ್ನಿಕೊಂಡ ಪ್ರವೇಶ ಮಾಡುವಾಗಲೇ ಆಯತಪ್ಪಿ ಬಿದ್ದಿದ್ದಾರೆ. ತಕ್ಷಣ ಪಕ್ಕದಲ್ಲಿದ್ದ ಭಕ್ತರು ಅರ್ಚಕರನ್ನು ಮೇಲೆತ್ತಿ ರಕ್ಷಿಸಿದ್ದಾರೆ. ಕೊಂಡವನ್ನು ಪೂರ್ಣಗೊಳಿಸಬೇಕೆಂದು ಶಿವಣ್ಣ ಅವರ ಕುಟುಂಬಕ್ಕೆ ಸೇರಿದ ರಾಮಸ್ವಾಮಿ ಅಗ್ನಿಕೊಂಡ ನೆರವೇರಿಸಲು ಮುಂದಾದರು. ಇವರು ಸಹ ಅಗ್ನಿಕೊಂಡ ಪ್ರವೇಶ ಮಾಡುವಾಗಲೇ ಆಯತಪ್ಪಿ ಕೊಂಡದ ಒಳಗೆ ಬಿದ್ದಿದ್ದಾರೆ. ನಂತರ ಇವರನ್ನು ಭಕ್ತರು ಮೇಲಕೆತ್ತಿ ರಕ್ಷಿಸಿದ್ದಾರೆ.

ನಂತರ ಅರ್ಚಕರ ಕುಟುಂಬಕ್ಕೆ ಸೇರಿದ ಮೂರನೇ ವ್ಯಕ್ತಿ ಶಿವಣ್ಣ ಎಂಬುವವರು ಕರಗ ಹೊತ್ತು ಅಗ್ನಿಕೊಂಡ ಪ್ರವೇಶಿಸಿ ಯಶಸ್ವಿಯಾಗಿ ಅಗ್ನಿಕೊಂಡೋತ್ಸವವನ್ನು ನೆರವೇರಿಸಿದರು.

ಯಶಸ್ವಿಯಾಗಿ ಕೊಂಡ ಆಯ್ದ ಅರ್ಚಕರ ಕುಟುಂಬದ ಶಿವಣ್ಣ
ಕೊಂಡ ಆಯಲು ಹೋಗಿ ಆಯತಪ್ಪಿ ಕೊಂಡಕ್ಕೆ ಬಿದ್ದಿರುವ ರಾಮಸ್ವಾಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.