ADVERTISEMENT

Karnataka election 2023 | ಕನಕಪುರಕ್ಕೆ ಈ ಬಾರಿ ಹೃದಯವಂತ ಶಾಸಕ: ಆರ್‌.ಅಶೋಕ್‌

ಕಾರ್ಯಕರ್ತರ ಸಭೆಯಲ್ಲಿ ಡಿ.ಕೆ.ಶಿವಕುಮಾರ್‌ ವಿರುದ್ಧ ಬಿಜೆಪಿ ಅಭ್ಯರ್ಥಿ ಆರ್‌.ಅಶೋಕ್‌ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2023, 9:08 IST
Last Updated 17 ಏಪ್ರಿಲ್ 2023, 9:08 IST
ಕನಕಪುರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕನಕಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್‌.ಅಶೋಕ್‌
ಕನಕಪುರ ಕ್ಷೇತ್ರದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕನಕಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್‌.ಅಶೋಕ್‌   

ಕನಕಪುರ: ‘ಕನಕಪುರದಲ್ಲಿ ಬಂಡೆ ಹೋಗಿ ಹೃದಯವಂತ ಶಾಸಕ ಬರಬೇಕು ಎಂಬುದು ಕನಕಪುರ ಕ್ಷೇತ್ರದ ಜನರ ನಿರೀಕ್ಷೆಯಾಗಿದ್ದು, ಅದು ಈ ಬಾರಿಯ ಚುನಾವಣೆಯಲ್ಲಿ ಖಂಡಿತವಾಗಿ ನನಸಾಗಲಿದೆ’ ಎಂದು ಕನಕಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆರ್‌.ಅಶೋಕ್‌ ತಿಳಿಸಿದರು.

ಕಗ್ಗಲೀಪುರದಲ್ಲಿ ಭಾನುವಾರ ಆಯೋಜಿಸಿದ್ದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಂದಿನ ಸಭೆಯಲ್ಲಿ ಇಷ್ಟೊಂದು ಮಂದಿ ಸೇರುತೀರಾ ಎಂದು ನಾನು ಅಂದುಕೊಂಡಿರಲಿಲ್ಲ. ಇದು ಕ್ಷೇತ್ರಕ್ಕೆ ಉತ್ತಮ ಅಭ್ಯರ್ಥಿ ಬರುವಿಕೆಗಾಗಿ ಜನತೆ ಕಾಯುತ್ತಿರುವುದನ್ನು ಸೂಚಿಸುತ್ತದೆ ಎಂದರು.

’ಪಕ್ಷದ ಶಿಸ್ತಿನ ಸಿಪಾಯಿ ನಾನು, ಪಕ್ಷದ ವರಿಷ್ಠರಾದ ನರೇಂದ್ರ ಮೋದಿ ಮತ್ತು ಅಮಿತ್‌ ಶಾ ಅವರು ಕನಕಪುರ ಕ್ಷೇತ್ರದಲ್ಲಿ ಸ್ಪರ್ಧಿಸುವಂತೆ ಸೂಚಸಿದರು, ಅದರಂತೆ ನಾನು ಕನಕಪುರದಲ್ಲಿ ಸ್ಪರ್ಧಿಸುತ್ತಿದ್ದೇನೆ. ಏಪ್ರಿಲ್‌ 18 ರಂದು ನಾಮಪತ್ರ ಸಲ್ಲಿಸುತ್ತೇನೆ ಎಂದು ತಿಳಿಸಿದರು.

ADVERTISEMENT

ಎರಡು ಕ್ಷೇತ್ರದ ಸ್ಪರ್ಧೆ: ಈ ಕುರಿತು ಉತ್ತರಿಸದ ಅಶೋಕ್ ಅವರು, ನನ್ನ ರಾಜಕೀಯ ಜೀವನದಲ್ಲಿ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡುತ್ತಿರುವುದು ಇದೇ ಮೊದಲು. ಕನಕಪುರದಲ್ಲಿ ಗೆಲ್ಲುವ ವಿಶ್ವಾಸವಿದೆ. ಇಲ್ಲಿನ ಜನತೆ ಬೇಸತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್‌ ಆಡಳಿತವನ್ನು ತೊಲಗಿಸಿ, ಅಭಿವೃದ್ಧಿಪರ ಸರ್ಕಾರವನ್ನು ತರಬೇಕೆಂದು ಜನ ಬಯಸುತ್ತಿದ್ದಾರೆ ಎಂದರು.

ಕನಕಪುರ ಕ್ಷೇತ್ರದಲ್ಲಿ ನಮ್ಮ ಸರ್ಕಾರದಿಂದ ಹೆಚ್ಚಿನ ಅಭಿವೃದ್ಧಿ ಕಾರ್ಯಗಳು ಆಗಿವೆ. ಹಾಗಾಗಿ ಇಲ್ಲಿಗೆ ನಾನು ಸೂಕ್ತ ಅಭ್ಯರ್ಥಿ ಎಂದು ವರಿಷ್ಠರು ನನ್ನನು ಸೂಚಿಸಿದ್ದಾರೆ. ಜನತೆಯೂ ಬದಲಾವಣೆ ಬಯಸುತ್ತಿರುವುದರಿಂದ ಕ್ಷೇತ್ರದಲ್ಲಿ ಪಕ್ಷವನ್ನು ಗೆಲ್ಲಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಅಭ್ಯರ್ಥಿಯಾಗಿ ಘೋಷಣೆ ಆದರೂ ಕನಕಪುರ ಕ್ಷೇತ್ರಕ್ಕೆ ಇಲ್ಲಿಯವರೆಗೆ ಭೇಟಿ ನೀಡಿಲ್ಲವೇಕೆ ಎಂದಾಗ, ನಮ್ಮದು ರಾಷ್ಟ್ರೀಯ ಪಕ್ಷವಾಗಿದ್ದು ಜನರ ನಿರೀಕ್ಷೆ ಹೆಚ್ಚಿರುತ್ತದೆ. ನಮ್ಮ ಭೇಟಿ ಕಾರ್ಯಕರ್ತರಲ್ಲಿ ಹೆಚ್ಚು ಆತ್ಮವಿಶ್ವಾಸ ಮೂಡಿಸಲೆಂದು ಸಿದ್ಧತೆ ಮಾಡಿಕೊಂಡೇ ಭೇಟಿ ನೀಡಿದ್ದೇವೆ. ನಮಗೆ ಯಾರ ಅತಿಥ್ಯವೂ ಬೇಕಿಲ್ಲ ಜನತೆಯ ಆಶೀರ್ವಾದವಿದ್ದರೆ ಸಾಕು ಎಂದರು.

ಈ ಸಭೆಯಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವಥ್‌ನಾರಾಯಣ್‌ಗೌಡ, ಚುನಾವಣಾ ಉಸ್ತುವಾರಿ ಅಜಾದ್‌ಸಿಂಗ್, ಕನಕಪುರ ಪ್ರಭಾರಿ ಆನಂದಸ್ವಾಮಿ, ತಾಲ್ಲೂಕು ಅಧ್ಯಕ್ಷ ವೆಂಕಟೇಶ್, ನಗರ ಘಟಕದ ಮುತ್ತಣ್ಣ, ಆರ್ಥಿಕ ಪ್ರಕೋಷ್ಟದ ಕೃಷ್ಣಪ್ಪ, ಮುಖಂಡರಾದ ಅಪ್ಪಾಜಿಗೌಡ, ಶೀಗೇಕೋಟೆ ರವಿಕುಮಾರ್‌, ಅನಿಲ್, ನಾಗಾನಂದ, ಮುನಿಸಿದ್ದೇಗೌಡ, ಕುಮಾರಸ್ವಾಮಿ, ಸುನೀಲ್‌ಕುಮಾರ್‌, ಕೋಟೆ ಕಿಟ್ಟಿ, ಶಿವರಾಮ್‌ ಸೇರಿದಂತೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಉಪಸ್ಥಿತರಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.