ಮಾಗಡಿ: ತಾಲ್ಲೂಕಿನ ಗುಮ್ಮಸಂದ್ರ ಕೆಂಪೇಗೌಡರ ಗುರುಮಠದಲ್ಲಿ ನ.10ರಂದು ಸಂಜೆ 6ಕ್ಕೆ ರುದ್ರಮುನೇಶ್ವರ ಸಂಸ್ಮರಣೋತ್ಸವ ಹಾಗೂ ಕಾರ್ತಿಕೋತ್ಸವ ಮತ್ತು ಸಾಧಕರಿಗೆ ರುದ್ರಮುನೇಶ್ವರ ಶ್ರೀ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಮಠದ ಪೀಠಾಧ್ಯಕ್ಷ ಚಂದ್ರಶೇಖರ ಸ್ವಾಮೀಜಿ ತಿಳಿಸಿದರು.
ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. 10 ರಂದು ಬೆಳಿಗ್ಗೆ 6ಕ್ಕೆ ರುದ್ರಮುನೇಶ್ವರ ಗದ್ದುಗೆಗೆ ರುದ್ರಾಭಿಷೇಕ ಬಿಲ್ವಾರ್ಚನೆ, 10ಕ್ಕೆ ಸಮಾಜಸೇವಕ ಕೆ.ಬಾಗೇಗೌಡರಿಂದ ಅನ್ನಬ್ರಹ್ಮೋತ್ಸವ ನಡೆಯಲಿದೆ. ಸಂಜೆ 6ಕ್ಕೆ ನಡೆಯಲಿರುವ ದೀಪೋತ್ಸವಕ್ಕೆ ಕನಕಪುರ ಮರಳೇಗವಿ ಮಠದ ಡಾ.ಮುಮ್ಮಡಿ ಶಿವರುದ್ರಸ್ವಾಮಿ ಚಾಲನೆ ನೀಡಲಿದ್ದಾರೆ. ಗದ್ದುಗೆ ಮಠದ ಮಹಂತಸ್ವಾಮಿ, ಬೆಟ್ಟಹಳ್ಳಿ ಮಠದ ಚಂದ್ರಶೇಖರಸ್ವಾಮಿ ಭಾಗವಹಿಸುವರು. ರುದ್ರಮುನೇಶ್ವರ ಮಠಾಧ್ಯಕ್ಷ ಚಂದ್ರಶೇಖರಸ್ವಾಮಿ ಪ್ರಾಸ್ತಾವಿಕ ಭಾಷಣ ಮಾಡುವರು.
ಆನೆಕಲ್ಲು ರಾಜಾಪುರ ಸಂಸ್ಥಾನ ಮಠದ ಪಟ್ಟದ ರಾಜೇಶ್ವರ ಶಿವಾಚಾರ್ಯ ಸ್ವಾಮೀಜಿ ಸಮಾರಂಭ ಉದ್ಘಾಟಿಸುವರು. ಶಾಸಕ ಎ.ಮಂಜುನಾಥ ಅಧ್ಯಕ್ಷತೆ ವಹಿಸುವರು. ವಿಧಾನ ಪರಿಷತ್ ಸದಸ್ಯರಾದ ಎಚ್.ಎಂ.ರೇವಣ್ಣ, ಅ.ದೇವೇಗೌಡ, ಕಾಂಗ್ರೆಸ್ ಮುಖಂಡ ಎಚ್.ಸಿ.ಬಾಲಕೃಷ್ಣ, ಕೆಂಪೇಗೌಡ ಅಭಿವೃದ್ಧಿ ಸಮಿತಿ ಅಧ್ಯಕ್ಷ ಎಚ್.ಎಂ.ಕೃಷ್ಣಮೂರ್ತಿ, ಬಿಜೆಪಿ ಮುಖಂಡ ರುದ್ರೇಶ್, ಕಾಂಗ್ರೆಸ್ ಮುಖಂಡ ಬಿ.ಎಸ್.ಪುಟ್ಟರಾಜು, ತಾಲ್ಲೂಕು ವೀರಶೈವ ಮಹಾಸಭಾ ಅಧ್ಯಕ್ಷ ಶಿವರುದ್ರಯ್ಯ, ಇತರೆ ಹರಗುರುಚರಮೂರ್ತಿಗಳು ಭಾಗವಹಿಸುವರು.
ಪ್ರಶಸ್ತಿ: ಡಾ.ಬಸವರಮಾನಂದ ಸ್ವಾಮಿಜಿ, ಎಲ್.ವಿ.ಪರಮೇಶ್ವರಯ್ಯ, ಜೆಡಿಎಸ್ ರಾಜ್ಯ ಕಾರ್ಯದರ್ಶಿ ಕೆ.ಕೃಷ್ಣಮೂರ್ತಿ, ಕನ್ನಡಪರ ಹೋರಾಟಗಾರ ಪಾಲನೇತ್ರ ಅವರಿಗೆ ರುದ್ರಮುನೇಶ್ವರ ಪ್ರಶಸ್ತಿ ನೀಡಲಾಗುವುದು. ದಾಸೋಹ ಏರ್ಪಡಿಸಲಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.