ADVERTISEMENT

ರಾಮನಗರ ಜಿಲ್ಲಾ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ

ರಾಯರದೊಡ್ಡಿಯ ಆರ್‌ವಿಸಿಎಸ್‌ ಸಭಾಂಗಣದಲ್ಲಿ ವೇದಿಕೆ ಸಜ್ಜು

​ಪ್ರಜಾವಾಣಿ ವಾರ್ತೆ
Published 22 ಜನವರಿ 2020, 19:45 IST
Last Updated 22 ಜನವರಿ 2020, 19:45 IST
ಸಮ್ಮೇಳನಕ್ಕೆ ಸ್ವಾಗತ ಕೋರುವ ಫಲಕ
ಸಮ್ಮೇಳನಕ್ಕೆ ಸ್ವಾಗತ ಕೋರುವ ಫಲಕ   

ರಾಮನಗರ: ಕನ್ನಡ ಸಾಹಿತ್ಯ ಪರಿಷತ್ತಿನ ಆಶ್ರಯದಲ್ಲಿ ಜಿಲ್ಲೆಯ ಆರನೇ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಇಲ್ಲಿನ ರಾಯರದೊಡ್ಡಿಯ ಆರ್‌ವಿಸಿಎಸ್ ಸಭಾಂಗಣದಲ್ಲಿ ಇದೇ 23 ಹಾಗೂ 24 ರಂದು ಸಮ್ಮೇಳನ ನಡೆಯಲಿದೆ. ಇದಕ್ಕಾಗಿ ಬೇಕಾದ ಸಿದ್ಧತೆಗಳು ಪೂರ್ಣಗೊಂಡಿವೆ. ಸಭಾಂಗಣದಲ್ಲಿ ಜಿಲ್ಲೆಯ ಮಹಾನ್‌ ಚೇತನಗಳ ಹೆಸರಿನಲ್ಲಿ ವೇದಿಕೆಗಳನ್ನು ಸಿದ್ಧಪಡಿಸಲಾಗಿದೆ. ಕೆಂಗಲ್ ಹನುಮಂತಯ್ಯ ಮಂಟಪ, ಜಿ.ಪಿ.ರಾಜರತ್ನಂ ವೇದಿಕೆ ಸಿದ್ಧವಾಗಿದೆ. ಡಾ.ಶಿವಕುಮಾರ ಸ್ವಾಮೀಜಿ ಮಹಾದ್ವಾರ, ಡಾ. ಬಾಲಗಂಗಾಧರನಾಥ ಸ್ವಾಮೀಜಿ ಮಹಾದ್ವಾರ , ಎಸ್ .ಕರಿಯಪ್ಪ ಮಹಾದ್ವಾರ ಹಾಗೂ ದೇ.ಜವರೇಗೌಡ ಮಹಾದ್ವಾರ ನಿರ್ಮಿಸಲಾಗಿದೆ.

ಮತ್ತೊಂದೆಡೆ ಸಮ್ಮೇಳನದ ಅಧ್ಯಕ್ಷ ಪ್ರೊ. ಶಿವನಂಜಯ್ಯ ಅವರ ಮೆರವಣಿಗೆಗೆ ಸಿದ್ಧತೆ ನಡೆದಿದೆ. ರಸ್ತೆಗಳಲ್ಲಿ ಸಮ್ಮೇಳನದ ಕಟೌಟ್ ಗಳು ರಾರಾಜಿಸುತ್ತಿವೆ. ನಗರಸಭೆ ಬಳಿಯ ನೀರಿನ ಟ್ಯಾಂಕ್ ವೃತ್ತದಿಂದ ಆರಂಭಗೊಳ್ಳುವ ಮೆರವಣಿಗೆಯು ಸುಮಾರು 2 ಕಿ.ಮೀಟರ್ ವರೆಗೆ ಸಾಗಿ ಬರಲಿದೆ. ಪಟ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ ಸೇರಿದಂತೆ ಅನೇಕ ಜಾನಪದ ಕಲಾ ತಂಡಗಳು ಮೆರವಣಿಗೆಯ ಸೊಬಗನ್ನು ಹೆಚ್ಚಿಸಲಿವೆ.

ADVERTISEMENT

ಸ್ಮರಣ ಸಂಚಿಕೆ, ಪುಸ್ತಕ ಮಳಿಗೆ, ಸಾಂಸ್ಕೃತಿಕ ಉತ್ಸವ, ವೈಚಾರಿಕ ಗೋಷ್ಠಿಗಳು ಸಮ್ಮೇಳನದ ಪ್ರಮುಖ ಅಂಶಗಳಾಗಲಿವೆ. ಒಂದು ಸಾವಿರಕ್ಕೂ ಹೆಚ್ಚು ಕನ್ನಡಾಭಿಮಾನಿಗಳು ವೇದಿಕೆ ಕಾರ್ಯಕ್ರಮ ವೀಕ್ಷಿಸಲು ಆಸನ ವ್ಯವಸ್ಥೆ ಕಲ್ಪಿಸಲಾಗಿದೆ.

ಸಭಾಂಗಣದ ಹೊರ ಭಾಗದಲ್ಲಿ ಪುಸ್ತಕ ಮಳಿಗೆ ತೆರೆಯಲು ತಾತ್ಕಾಲಿಕ ಟೆಂಟ್ ನಿರ್ಮಾಣವಾಗಿದೆ. ಸಮ್ಮೇಳನ ಯಶಸ್ವಿಗೆ ಸಮ್ಮೇಳನಕ್ಕೆ ಆಗಮಿಸಿದ ಸಾಹಿತ್ಯಾಸಕ್ತರಿಗೆ ಊಟೋಪಚಾರ ವ್ಯವಸ್ಥೆಯೂ ಇದೆ.
ಸಮ್ಮೇಳನವನ್ನು ಅಚ್ಚುಕಟ್ಟಾಗಿ ನಡೆಸುವ ನಿಟ್ಟಿನಲ್ಲಿ ವಿವಿಧ ಸಮಿತಿಗಳನ್ನು ರಚಿಸಲಾಗಿತ್ತು. ಮೆರವಣಿಗೆ ಸಮಿತಿ, ಸ್ವಾಗತ ಸಮಿತಿ, ವೇದಿಕೆ ಸಮಿತಿ, ಆಹಾರ ಸಮಿತಿ, ಸಾಂಸ್ಕೃತಿಕ ಸಮಿತಿ ಹಾಗೂ ಪ್ರಚಾರ ಸಮಿತಿ ಪದಾಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಿಸಿದ್ದಾರೆ.

₹5 ಲಕ್ಷ ಅನುದಾನ: ‘ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಆಯೋಜಿಸಲು ರಾಜ್ಯ ಸರ್ಕಾರ ₨5 ಲಕ್ಷ ಅನುದಾನ ಬಿಡುಗಡೆ ಮಾಡಿದೆ. ಜಿಲ್ಲೆಯ ಸಾಂಸ್ಕೃತಿಕ ಹಬ್ಬದಂತೆ ಸಮ್ಮೇಳನ ನಡೆಯಲಿದೆ’ ಎಂದು ಪರಿಷತ್‌ನ ಜಿಲ್ಲಾ ಕೋಶಾಧ್ಯಕ್ಷ ಎಚ್.ಪಿ. ನಂಜೇಗೌಡ ತಿಳಿಸಿದರು.

ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಗಳ ವಿವರ
ವರ್ಷ; ಸ್ಥಳ; ಸಮ್ಮೇಳನಾಧ್ಯಕ್ಷರು
2010; ಕನಕಪುರ; ಪ್ರೊ.ಕೆ.ಬಿ. ಶ್ರೀಕಾಂತ್
2011; ರಾಮನಗರ; ಡಾ. ಬೈರಮಂಗಲ ರಾಮೇಗೌಡ
2013; ಚನ್ನಪಟ್ಟಣ; ಎಂ. ಸರಸ್ವತಿಗೌಡ
2017; ಮಾಗಡಿ; ರಂಗನಾಥ ರಾವ್
2018; ಕನಕಪುರ; ಪಿ. ಪುಟ್ಟಸೋಮರಾಧ್ಯ
2020; ರಾಮನಗರ; ಪ್ರೊ.ಎಂ. ಶಿವನಂಜಯ್ಯ


ಎರಡು ದಿನ ಸಮ್ಮೇಳನಕ್ಕೆ ಬೇಕಾದ ಎಲ್ಲ ಸಿದ್ಧತೆ ಪೂರ್ಣಗೊಂಡಿದೆ. ಶಾಲೆ ಶಿಕ್ಷಕರು, ಕಾಲೇಜು ಅಧ್ಯಾಪಕರಿಗೆ ಒಒಡಿ ಸೌಲಭ್ಯವೂ ದೊರೆಯಲಿದೆ
ಸಿಂ.ಲಿಂ. ನಾಗರಾಜು
ಅಧ್ಯಕ್ಷ, ಕಸಾಪ ಜಿಲ್ಲಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.