
ಚನ್ನಪಟ್ಟಣ: ತಾಲ್ಲೂಕಿನ ಕೆಂಗಲ್ ಇತಿಹಾಸ ಹಾಗೂ ಪುರಾಣ ಪ್ರಸಿದ್ಧ ಆಂಜನೇಯಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ಲಕ್ಷ್ಮಿ ವೆಂಕಟೇಶ್ವರಸ್ವಾಮಿ ರಥೋತ್ಸವ ಸೋಮವಾರ ವಿಜೃಂಭಣೆಯಿಂದ ನಡೆಯಿತು.
ರಥೋತ್ಸವ ಅಂಗವಾಗಿ ಬೆಳಗ್ಗೆಯಿಂದ ರಥಾಂಗ ಹೋಮ, ಯಾತ್ರಾದಾನ, ಮಂಟಪೋತ್ಸವ, ಬಲಿಪ್ರಧಾನ, ಗೋವು ಹಾಗೂ ಅಶ್ವಪೂಜೆ, ಪೂಜಾ ಕುಣಿತ, ತಮಟೆ, ಡೊಳ್ಳುಕುಣಿತ, ತೋಮಾಲಸೇವೆ, ಯಾತ್ರಾದಾನ ಸೇವೆ ನಡೆಯಿತು.
ಬೆಳಗ್ಗೆ 11.45ರಿಂದ ಮಧ್ಯಾಹ್ನ 12.45ರೊಳಗೆ ಸಲ್ಲುವ ಶುಭ ಅಭಿಜಿನ್ ಲಗ್ನದಲ್ಲಿ ರಥೋತ್ಸವಕ್ಕೆ ತಹಶೀಲ್ದಾರ್ ಬಿ.ಎನ್.ನಾಗೇಶ್ ಚಾಲನೆ ನೀಡಿದರು. ದೇವಸ್ಥಾನ ಸಮಿತಿ ಸಂಚಾಲಕ ವಿ.ಬಿ.ಚಂದ್ರು, ಧಾರ್ಮಿಕ ದತ್ತಿ ಇಲಾಖೆ ಅಧಿಕಾರಿಗಳು, ತಾಲ್ಲೂಕಿನ ಹಲವು ಇಲಾಖೆಗಳ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.
ಭಕ್ತರು ರಥವನ್ನು ದೇವಸ್ಥಾನ ಆವರಣ ಹಾಗೂ ಅಕ್ಕಪಕ್ಕದ ರಸ್ತೆಗಳಲ್ಲಿ ಎಳೆದು ಪುನೀತರಾದರು. ರಾಜ್ಯದ ಹಲವು ಭಾಗಗಳಿಂದ ಬಂದಿದ್ದ ಭಕ್ತರು ರಥೋತ್ಸದಲ್ಲಿ ಭಾಗವಹಿಸಿ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಣ್ಣು–ಜವನ ಎಸೆದು ಭಕ್ತಿಭಾವ ಮೆರೆದರು.
ಸಂಜೆ ಮುತ್ತಿನ ಪಲ್ಲಕ್ಕಿ ಉತ್ಸವ, ಹೂವಿನ ಪಲ್ಲಕ್ಕಿ ಉತ್ಸವ, ತಿರುಕಲ್ಯಾಣಿಯಲ್ಲಿ ವಸಂತೋತ್ಸವ, ಅಶ್ವವಾಹನೋತ್ಸವ, ಪುಷ್ಪಮುಡಿ ಉತ್ಸವ, ಧ್ವಜಾರೋಹಣ, ಪೂರ್ಣಾಹುತಿ, ಅಶ್ವವಾಹನೋತ್ಸವ, ಪುಷ್ಪಯಾಗ ಕಾರ್ಯಕ್ರಮ ನಡೆಯಿತು.
ರಥೋತ್ಸವ ಜತೆಗೆ ಇತಿಹಾಸ ಪ್ರಸಿದ್ಧ ಕೆಂಗಲ್ ದನಗಳ ಜಾತ್ರೆ ತೆರೆ ಕಂಡಿತು. ಮಂಗಳವಾರ (ಜ.20) ಅಷ್ಟೋತ್ತರ ಶತಕುಂಬಾಭಿಷೇಕ, ಶಾಂತ್ಯೋತ್ಸವ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.