ಚನ್ನಪಟ್ಟಣದ ವಿವೇಕಾನಂದ ನಗರದಲ್ಲಿ ಭಾವಿಪ ಕಣ್ವ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆಯಲ್ಲಿ ಕಟ್ಟಡ ಕಾರ್ಮಿಕರನ್ನು ಸನ್ಮಾನಿಸಲಾಯಿತು.
ಚನ್ನಪಟ್ಟಣ: ಸುಂದರ ಸಮಾಜ ನಿರ್ಮಾಣದಲ್ಲಿ ಕಾರ್ಮಿಕರ ಪಾತ್ರ ಮಹತ್ವದ್ದಾಗಿದ್ದು, ಕಾರ್ಮಿಕರ ಶ್ರಮದಲ್ಲಿ ದೇಶದ ಅಭಿವೃದ್ಧಿ ಅಡಗಿದೆ ಎಂದು ಭಾರತ ವಿಕಾಸ ಪರಿಷತ್ ಕಣ್ವ ಶಾಖೆ ಅಧ್ಯಕ್ಷ ಪುಟ್ಟಸ್ವಾಮಿಗೌಡ ಅಭಿಪ್ರಾಯಪಟ್ಟರು.
ನಗರದ ವಿವೇಕಾನಂದ ನಗರದಲ್ಲಿ ಭಾರತ ವಿಕಾಸ ಪರಿಷತ್ ಕಣ್ವ ಶಾಖೆ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ವಿಶ್ವ ಕಾರ್ಮಿಕರ ದಿನಾಚರಣೆ ಕಾರ್ಯಕ್ರಮದಲ್ಲಿ ಕಟ್ಟಡ ಕಾರ್ಮಿಕರನ್ನು ಸನ್ಮಾನಿಸಿ ಮಾತನಾಡಿದರು.
ಕಾರ್ಮಿಕರು ಇಲ್ಲದಿರುವ ಜಗತ್ತನ್ನು ಊಹಿಸುವುದಕ್ಕೆ ಸಾಧ್ಯವಿಲ್ಲ. ಪ್ರತಿಯೊಂದು ಕ್ಷೇತ್ರದಲ್ಲೂ ಶ್ರಮಪಟ್ಟು ದುಡಿಯುವ ಕೆಲಸಗಾರರು ದೇಶ, ರಾಜ್ಯದ ಅಭಿವೃದ್ಧಿಗೆ ಹೆಗಲು ಕೊಡುತ್ತಾರೆ. ಹೀಗೆ ದೇಶದ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸುವ ಕಾರ್ಮಿಕರ ಶ್ರಮ ಮತ್ತು ಸೇವೆಯನ್ನು ಗೌರವಿಸುವುದು ಮತ್ತು ಅವರ ಸೇವೆಗೆ ಕೃತಜ್ಞತೆ ಸಲ್ಲಿಸುವುದು ಎಲ್ಲರ ಕರ್ತವ್ಯ ಎಂದರು.
ಭಾವಿಪ ಪ್ರಾಂತ್ಯ ಸಂಘಟನಾ ಕಾರ್ಯದರ್ಶಿ ವಸಂತಕುಮಾರ್ ಮಾತನಾಡಿ, ಕಾರ್ಮಿಕರ ದುಡಿಮೆಯಿಂದ ದೇಶದ ಆರ್ಥಿಕತೆ ನಿಂತಿದೆ. ಮಾಲೀಕ ಮತ್ತು ಕಾರ್ಮಿಕರ ಸಂಬಂಧ ತಂದೆ ಮಕ್ಕಳಂತಿದ್ದರೆ ದೇಶದ ಅಭಿವೃದ್ಧಿ ಸಾಧ್ಯ. ಕಾರ್ಮಿಕರ ಹಕ್ಕುಗಳ ಹೋರಾಟದ ನೆನಪಿಗಾಗಿ ಕಾರ್ಮಿಕ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ ಎಂದು ತಿಳಿಸಿದರು.
ಬೊಂಬೆನಾಡು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ಕರ್ಣ, ಮಸೀಗೌಡನದೊಡ್ಡಿ ಕಟ್ಟಡ ಕಾರ್ಮಿಕರಾದ ಲಲಿತಾ, ಕಾವೇರಿ, ಮದನ್, ಇತರರನ್ನು ಸನ್ಮಾನಿಸಲಾಯಿತು.
ಶಾಖೆಯ ಗೌರವಾಧ್ಯಕ್ಷ ಬಿ.ಎನ್.ಕಾಡಯ್ಯ, ಭಾವಿಪ ಕಾರ್ಯದರ್ಶಿ ಯೋಗೇಶ್ ಚಕ್ಕೆರೆ, ಖಜಾಂಚಿ ವಿ.ಟಿ.ರಮೇಶ್, ಉಪಾಧ್ಯಕ್ಷ ಕರಿಯಪ್ಪ, ಸಂಚಾಲಕ ರುದ್ರೇಶ್, ಸಂಘಟನಾ ಕಾರ್ಯದರ್ಶಿ ಕೃಷ್ಣಕುಮಾರ್, ಭಾವಿಪ ರಾಷ್ಟ್ರೀಯ ಪದಾಧಿಕಾರಿಗಳಾದ ಚಂದ್ರಿಕಾ ಗಿರೀಶ್, ಮನುಜಾ, ಪಾರ್ವತಮ್ಮ ಚಂದ್ರೇಗೌಡ, ವೆಂಕಟಾಚಲ, ಟಿ.ಎನ್. ದೇವರಾಜು, ಗೋವಿಂದಳ್ಳಿ ಶಿವಣ್ಣ, ಬಸವರಾಜು, ನಿವೃತ್ತ ಶಿಕ್ಷಕಿ ಪ್ರಮೀಳಮ್ಮ, ಶಿಕ್ಷಕಿ ರಾಜೇಶ್ವರಿ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.