ಮಾಧ್ಯಮ ಸಮಾಜದ ಕೊಂಡಿ
ಪ್ರಜಾವಾಣಿ ವಾರ್ತೆ Published 2 ಜುಲೈ 2019, 13:00 IST Last Updated 2 ಜುಲೈ 2019, 13:00 IST ಕನಕಪುರ ಸೆಂಟ್ ಮೈಕೆಲ್ ಶಾಲೆಯಲ್ಲಿ ನಡೆದ ಪತ್ರಿಕಾ ದಿನಾಚರಣೆಯಲ್ಲಿ ಭಾಸ್ಕರ್ ಮಾತನಾಡಿದರು
ಕನಕಪುರ: ‘ಮಾಧ್ಯಮ ಸಮಾಜದ ಕೊಂಡಿಯಂತೆ ಕೆಲಸ ಮಾಡುತ್ತಿದೆ. ಉತ್ತಮ ಸಮಾಜದ ನಿರ್ಮಾಣದಲ್ಲಿ ಮಾಧ್ಯಮದ ಪಾತ್ರ ಬಹಳ ಪ್ರಮುಖವಾಗಿದೆ’ ಎಂದು ಸೇಂಟ್ ಮೈಕೆಲ್ ಶಾಲೆಯ ಕಾರ್ಯದರ್ಶಿ ಭಾಸ್ಕರ್ ತಿಳಿಸಿದರು.
ನಗರದ ಸೇಂಟ್ ಮೈಕೆಲ್ ಶಾಲೆಯಲ್ಲಿ ಮಂಗಳವಾರ ಶಾಲಾ ವತಿಯಿಂದ ಅಯೋಜನೆ ಮಾಡಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಪತ್ರಿಕೋದ್ಯಮಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ಸಂವಹನದಲ್ಲಿ ಮಾದ್ಯಮ ಸಂವಹನವು ಅತ್ಯಂತ ಪ್ರಭಾವಿತ ಸಂವಹನವಾಗಿದ್ದು ಸಮಾಜದಲ್ಲಿನ ಆಗು ಹೋಗುಗಳನ್ನು ಸರಿ ತಪ್ಪುಗಳನ್ನು ಸಮಾಜಕ್ಕೆ ತಿಳಿಸುತ್ತಾ ಸಮಾಜವನ್ನು ಸರಿದಾರಿಗೆ ತರುವ ಕೆಲಸ ಮಾಡುತ್ತಿದೆ’ ಎಂದರು.
‘ಸಾರ್ವಜನಿಕ ಅಭಿಪ್ರಾಯಗಳನ್ನು ವಿಚಾರಗಳನ್ನು ಮುದ್ರಿಸಿ ಅದನ್ನು ಮನೆ ಮನೆಗೆ ತಲುಪಿಸಿ ಜನತೆ ಓದುವಂತ ಕೆಲಸವನ್ನು ಮಾಧ್ಯಮಗಳು ಮಾಡುತ್ತಿವೆ. ಈ ಒಂದು ಕೆಲಸವು ಅತ್ಯಂತ ಕಷ್ಟಕರವಾದ ಕೆಲಸವಾಗಿದ್ದರೂ ಅದು ನಿರಂತರವಾಗಿ ನಡೆದುಕೊಂಡು ಬರುತ್ತಿದೆ’ ಎಂದು ಶ್ಲಾಘಿಸಿದರು.
ಉಪನ್ಯಾಸಕ ಜಿ.ಎನ್.ಸತೀಶ್ ಪತ್ರಿಕಾ ದಿನಾಚರಣೆ ಕುರಿತು ಉಪನ್ಯಾಸ ನೀಡಿದರು. ಪತ್ರಕರ್ತರ ಸಂಘದ ತಾಲ್ಲೂಕು ಅಧ್ಯಕ್ಷ ಕೆ.ಕಬ್ಬಾಳಯ್ಯ, ವರದಿಗಾರರಾದ ಬರಡನಹಳ್ಳಿ ಕೃಷ್ಣಮೂರ್ತಿ, ಸುರೇಶ್.ಎಂ.ಎನ್. ಎಸ್.ಶಿವಲಿಂಗಯ್ಯ, ಜಿ.ಎಂ.ಪ್ರಾಣೇಶ್, ಉಮೇಶ್, ಸೆಂಟ್ ಮೈಕೆಲ್ ಶಾಲೆಯ ಪ್ರಾಂಶುಪಾಲರಾದ ತೆರೇಸಮ್ಮ ಇದ್ದರು.