ADVERTISEMENT

ಲಂಚ: ಬೆಸ್ಕಾಂ ಎಇಇ ಲೋಕಾಯುಕ್ತ ಬಲೆಗೆ

​ಪ್ರಜಾವಾಣಿ ವಾರ್ತೆ
Published 18 ಸೆಪ್ಟೆಂಬರ್ 2024, 14:07 IST
Last Updated 18 ಸೆಪ್ಟೆಂಬರ್ 2024, 14:07 IST
   

ಬಿಡದಿ (ರಾಮನಗರ): ಕೇಬಲ್ ಅಳವಡಿಕೆಗೆ ಅನುಮತಿ ನೀಡಲು ವಿದ್ಯುತ್ ಗುತ್ತಿಗೆದಾರನಿಂದ ಕಚೇರಿಯಲ್ಲಿ ₹30 ಸಾವಿರ ಲಂಚ ಪಡೆಯುತ್ತಿದ್ದ ಬೆಸ್ಕಾಂನ ಬಿಡದಿ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಪುಟ್ಟಸ್ವಾಮಿಯನ್ನು ಲೋಕಾಯುಕ್ತ ಪೊಲೀಸರು ಬುಧವಾರ ಹಣದ ಸಮೇತ ಬಂಧಿಸಿದ್ದಾರೆ.

ವಿದ್ಯುತ್ ಗುತ್ತಿಗೆದಾರ ಅನಂತರಾಜ್ ಎಂಬುವರು ಬಿಡದಿ ಭಾಗದಲ್ಲಿ ಕೇಬಲ್ ಅಳವಡಿಸಲು ಗುತ್ತಿಗೆ ಪಡೆದಿದ್ದರು. ಗುತ್ತಿಗೆ ಮಂಜೂರಾತಿಯ ಪತ್ರಕ್ಕೆ ಸಹಿ ಮಾಡಲು ₹ 1.50 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದ ಪುಟ್ಟಸ್ವಾಮಿ, ಮುಂಗಡವಾಗಿ ₹ 30 ಸಾವಿರ ತಂದು ಕೊಡುವಂತೆ ಹೇಳಿದ್ದ. ಈ ಕುರಿತು, ಅನಂತರಾಜ್ ಲೋಕಾಯುಕ್ತಕ್ಕೆ ದೂರು ಕೊಟ್ಟಿದ್ದರು.

ಬೆಳಿಗ್ಗೆ ಅನಂತರಾಜ್‌ಗೆ ಕರೆ ಮಾಡಿದ್ದ ಪುಟ್ಟಸ್ವಾಮಿ, ಛತ್ರ ಗ್ರಾಮದಲ್ಲಿರುವ ತನ್ನ ಕಚೇರಿಗೆ ಹಣ ತಲುಪಿಸುವಂತೆ ಸೂಚಿಸಿದ್ದ. ಈ ಕುರಿತು ಮಾಹಿತಿ ಪಡೆದಿದ್ದ ನಮ್ಮ ತಂಡ ಮುಂಚೆಯೇ ಕಚೇರಿಗೆ ತೆರಳಿತ್ತು. ಕಚೇರಿಗೆ ಬಂದ ಪುಟ್ಟಸ್ವಾಮಿ, ಅನಂತರಾಜ್‌ ಅವರಿಂದ ₹ 30 ಸಾವಿರ ಲಂಚ ಪಡೆಯುತ್ತಿದ್ದಾಗ ಬಂಧಿಸಲಾಯಿತು ಎಂದು ಲೋಕಾಯುಕ್ತ ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.