ಚನ್ನಪಟ್ಟಣ: ಸಣ್ಣಪುಟ್ಟ ಕೆಲಸ ಕಾರ್ಯಗಳಿಗೆ ಯಾವುದೇ ಇಲಾಖೆ ಅಧಿಕಾರಿಗಳು ಸಾರ್ವಜನಿಕರನ್ನು ಸುಖಾಸುಮ್ಮನೆ ಅಲೆದಾಡಿಸುವ ದೂರು ಕೇಳಿ ಬಂದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಲೋಕಾಯುಕ್ತ ಎಸ್ಪಿ ಪಿ.ವಿ.ಸ್ನೇಹಾ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.
ನಗರದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಲೋಕಾಯುಕ್ತ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಸಾರ್ವಜನಿಕರ ಕುಂದುಕೊರತೆ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರ ಕೆಲಸ ಕಾರ್ಯ ಮಾಡಲು ಯಾವುದೇ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ತಮ್ಮ ಕೆಲಸವನ್ನು ಪ್ರಾಮಾಣಿಕವಾಗಿ ಮಾಡಬೇಕು ಎಂದು ಎಚ್ಚರಿಸಿದರು.
ಲೋಕಾಯುಕ್ತಕ್ಕೆ ಸಲ್ಲಿಕೆಯಾಗುವ ಅರ್ಜಿಗಳನ್ನು ಸ್ಥಳದಲ್ಲೇ ಬಗೆಹರಿಸಲು ಆಗುವುದಿಲ್ಲ. ಕಾಲ ಮಿತಿಯಲ್ಲಿ ಬಗೆಹರಿಸುವ ಜವಾಬ್ದಾರಿ ಅಧಿಕಾರಿಗಳ ಮೇಲಿದೆ. ಸಾರ್ವಜನಿಕರು ಸೂಕ್ತವಾದ ದಾಖಲೆ ಇಟ್ಟುಕೊಂಡು ದೂರು ಸಲ್ಲಿಸಬೇಕು. ಬಾಯಿ ಮಾತಿನಲ್ಲಿ ಹೇಳಿದರೆ ಅರ್ಥವಿಲ್ಲ. ಸಿಬ್ಬಂದಿ ಅಥವಾ ಅಧಿಕಾರಿ ಲಂಚಕ್ಕೆ ಒತ್ತಾಯಿಸಿದರೆ ಸೂಕ್ತ ಸಾಕ್ಷಿಯೊಂದಿಗೆ ಅಧಿಕಾರಿಗಳಿಗೆ ಮಾಹಿತಿ ನೀಡಿ ಅಥವಾ ಕಚೇರಿಗೆ ಭೇಟಿ ನೀಡಿ ದೂರು ದಾಖಲಿಸಿ ಎಂದರು.
ಲೋಕಾಯುಕ್ತ ಡಿವೈಎಸ್ ಪಿ.ರಾಜೇಶ್ ಮಾತನಾಡಿ, ಸಾರ್ವಜನಿಕರಿಗೆ ಅಧಿಕಾರಿಗಳು ಸೂಕ್ತವಾದ ಮಾಹಿತಿ ನೀಡುವುದಿಲ್ಲ ಎಂಬ ದೂರುಗಳು ಲೋಕಾಯುಕ್ತಕ್ಕೆ ಹೆಚ್ಚಾಗಿ ಬರುತ್ತಿವೆ. ಅಧಿಕಾರಿಗಳು ಸಾರ್ವಜನಿಕರು ಕೇಳುವ ಮಾಹಿತಿ ನೀಡಬೇಕು. ಎಲ್ಲ ಸರ್ಕಾರಿ ಕಚೇರಿಯಲ್ಲೂ ಸಾರ್ವಜನಿಕರಿಗೆ ಅಧಿಕಾರಿಗಳ ದೂರವಾಣಿ ಸಂಖ್ಯೆ ಸಹಿತ ಮಾಹಿತಿ ನಾಮಫಲಕ ಹಾಕಬೇಕು ಎಂದು ಸೂಚನೆ ನೀಡಿದರು.
ಸಭೆಯಲ್ಲಿ 20 ಅರ್ಜಿ ಸಲ್ಲಿಕೆಯಾದವು. ನಗರದ ಕೊತ್ತನಹಳ್ಳಿ ಕೆರೆ ಜಮೀನಿನಲ್ಲಿ ಖಾಸಗಿ ರಸ್ತೆ ನಿರ್ಮಾಣ ಮಾಡುತ್ತಿದ್ದರೂ ಅಧಿಕಾರಿಗಳು ಈ ಬಗ್ಗೆ ಗಮನಹರಿಸುತ್ತಿಲ್ಲ ಎಂದು ಅಪ್ಪಗೆರೆ ಪ್ರಸಾದ್ ದೂರು ನೀಡಿದರು. ದಲಿತ ಸಮುದಾಯದ ಮುಖಂಡರಾದ ಮತ್ತೀಕೆರೆ ಹನುಮಂತಯ್ಯ, ಶ್ರೀನಿವಾಸ ಅವರು ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆ ವತಿಯಿಂದ ದಲಿತರ ಕುಂದುಕೊರತೆ ಸಭೆ ಮಾಡುತ್ತಿಲ್ಲ ಎಂದು ದೂರು ಸಲ್ಲಿಸಿದರು. ಈ ದೂರುಗಳ ಬಗ್ಗೆ ಲೋಕಾಯುಕ್ತ ಅಧಿಕಾರಿಗಳು ಚರ್ಚೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
ಲೋಕಾಯುಕ್ತ ಡಿವೈಎಸ್ಪಿ ರಾಜೇಶ್, ಶಿವಪ್ರಸಾದ್, ಸಿಪಿಐ ಸಂದೀಪ್, ತಹಶೀಲ್ದಾರ್ ಗಿರೀಶ್, ತಾ.ಪಂ ಇಒ ಪ್ರದೀಪ್, ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.
ಹಿಂಬರಹ ನೀಡಲು ಸಮಸ್ಯೆ ಏನು?:
‘ಸಾರ್ವಜನಿಕರು ನೀಡುವ ಅರ್ಜಿಗಳಿಗೆ ಸಂಬಂಧಿಸಿದಂತೆ ಅಧಿಕಾರಿಗಳು ಹಿಂಬರಹ ನೀಡುತ್ತಿಲ್ಲ ಎನ್ನುವ ದೂರುಗಳು ಹೆಚ್ಚಾಗಿ ಬರುತ್ತಿವೆ. ಅಧಿಕಾರಿಗಳು ಅರ್ಜಿಗಳಿಗೆ ಹಿಂಬರಹ ನೀಡುವುದನ್ನು ರೂಢಿಸಿಕೊಳ್ಳಿ. ಯಾವುದೇ ತಪ್ಪಿಲ್ಲ ಎಂದ ಮೇಲೆ ಹಿಂಬರಹ ನೀಡಲು ಸಮಸ್ಯೆಯೇನು?’ ಪಿ.ವಿ.ಸ್ನೇಹಾ ಲೋಕಾಯುಕ್ತ ಎಸ್ಪಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.