ರಾಮನಗರ: ಕಲಬೆರಕೆ ಬಿತ್ತನೆ ಬೀಜದಿಂದ ನಷ್ಟ ಅನುಭವಿಸಿದ ರೈತನಿಗೆ ಪರಿಹಾರವಾಗಿ ₨93,219 ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯು ಕರ್ನಾಟಕ ರಾಜ್ಯ ಬೀಜ ನಿಗಮಕ್ಕೆ ಆದೇಶ ನೀಡಿತು.
ಮಾಗಡಿ ತಾಲ್ಲೂಕಿನ ಕಸಬಾ ಹೋಬಳಿಯ ಬೆಳಗುಂಬ ಗ್ರಾಮದ ನರಸೇಗೌಡ ಪರಿಹಾರ ಪಡೆಯಲಿರುವ ರೈತ. ಇವರು ತಮ್ಮ 2 ಎಕರೆ 36 ಗುಂಟೆ ಕುಷ್ಕಿ ಜಮೀನಿನಲ್ಲಿ ಬಿತ್ತನೆ ಮಾಡಲು ಮಾಗಡಿ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಿಂದ 2018ರ ಜೂನ್ 19ರಂದು ₨500 ಪಾವತಿಸಿ 25 ಕೆ.ಜಿ ಎಂ.ಆರ್-6 ಬಿತ್ತನೆ ರಾಗಿ ಖರೀದಿಸಿ ಬಿತ್ತನೆ ಮಾಡಿದ್ದರು. ಪ್ರತಿ ವರ್ಷ 45 ಕ್ವಿಂಟಲ್ ರಾಗಿ ಇಳುವರಿ ಪಡೆಯುತ್ತಿದ್ದ ನರಸೇಗೌಡ ಅವರಿಗೆ ಈ ವರ್ಷ ಕೇವಲ 18 ಕ್ವಿಂಟಲ್ ಫಸಲು ಸಿಕ್ಕಿತ್ತು. ಕಳಪೆ ಬಿತ್ತನೆ ಬೀಜದ ಕಾರಣ ಹೀಗಾಗಿದೆ ಎಂದು ದೂರಿ ಅವರು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ದೂರು ಸಲ್ಲಿಸಿದ್ದರು.
ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ ದೂರಿನ ವಿಚಾರಣೆ ನಡೆಸಿತು. ಬೆಳೆ ನಷ್ಟದ ಪರಿಹಾರವಾಗಿ ₨78,219, ಮಾನಸಿಕ ಹಾಗೂ ದೈಹಿಕ ತೊಂದರೆಗೆ ಪರಿಹಾರವಾಗಿ ₨10 ಸಾವಿರ ಹಾಗೂ ವ್ಯಾಜ್ಯದ ಖರ್ಚು ₨5 ಸಾವಿರ ಅನ್ನು ಆರು ವಾರದ ಒಳಗೆ ನೀಡುವಂತೆ ವೇದಿಕೆಯು ಆದೇಶ ನೀಡಿತು. ಪರಿಹಾರ ನೀಡಲು ತಡವಾದಲ್ಲಿ ದೂರು ಸಲ್ಲಿಸಿದ ದಿನದಿಂದ ಪರಿಹಾರ ವಿತರಣೆ ದಿನದವರೆಗೂ ಶೇ 6ರ ಬಡ್ಡಿ ನೀಡುವಂತೆಯೂ ಜಿಲ್ಲಾ ಗ್ರಾಹಕರ ಪರಿಹಾರ ವೇದಿಕೆ ಅಧ್ಯಕ್ಷ ಎಸ್. ಎಲ್. ಪಾಟೀಲ್, ಸದಸ್ಯ ಪಿ.ಕೆ ಶಾಂತ ಆದೇಶಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.