ಮಾಗಡಿ: ತಾಲ್ಲೂಕಿನ ರಸ್ತೆ ಗುಂಡಿ ಮುಚ್ಚಲಾಗದವರು ಮಾಗಡಿ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಅಭಿವೃದ್ಧಿ ಮಾಡುತ್ತಾರಾ ಎಂದು ಶಾಸಕ ಬಾಲಕೃಷ್ಣ ವಿರುದ್ಧ ಮಾಜಿ ಶಾಸಕ ಎ.ಮಂಜುನಾಥ್ ಕಿಡಿಕಾರಿದರು.
ಪಟ್ಟಣದ ತಿರುಮಲೆ ಶ್ರೀರಂಗನಾಥ ಸ್ವಾಮಿ ದೇವಸ್ಥಾನಕ್ಕೆ ಕೊನೆಯ ಶ್ರಾವಣ ಶನಿವಾರ ಶಾಸಕ ಎ.ಮಂಜುನಾಥ್ ದಂಪತಿ ಭೇಟಿ ನೀಡಿ ಪೂಜೆ ಸಲ್ಲಿಸಿ ಸುದ್ದಿಗಾರರೊಂದಿಗೆ ಮಾತನಾಡಿದರು.
‘ನಾನು ಶಾಸಕನಾಗಿದ್ದ ಅವಧಿಯಲ್ಲಿ ಶ್ರೀರಂಗನಾಥ ಸ್ವಾಮಿ ದೇವಸ್ಥಾನ ಅಭಿವೃದ್ಧಿಗೆ ₹ 5 ಕೋಟಿ ಅನುದಾನ ಮಂಜೂರಾಗಿತ್ತು. ಚುನಾವಣೆ ಹಿನ್ನೆಲೆ ಅನುದಾನ ಬಳಕೆ ಮಾಡಿಕೊಳ್ಳಲು ಆಗಲಿಲ್ಲ. ಶಾಸಕ ಎಚ್.ಸಿ.ಬಾಲಕೃಷ್ಣರವರು ಸದನದಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಬಿಡುಗಡೆಯಾಗಿದ್ದ ಅನುದಾನವನ್ನು ಮುಜರಾಯಿ ಇಲಾಖೆ ಎಂದು ತಪ್ಪಾಗಿ ಪ್ರಶ್ನಿಸಿದ್ದರಿಂದ ಸಂಬಂಧಪಟ್ಟ ಸಚಿವರಿಂದ ಸರಿಯಾದ ಉತ್ತರ ಬರಲಿಲ್ಲ. ಎರಡೂವರೆ ವರ್ಷವಾದರೂ ಕೂಡ ದೇವಸ್ಥಾನಕ್ಕೆ ಹಣ ಬಿಡುಗಡೆಯಾಗಿಲ್ಲ. ಮಾಗಡಿ ಪಟ್ಟಣದ ರಸ್ತೆ ಗುಂಡಿ ಮುಚ್ಚದ ಸರ್ಕಾರ ದೇವಸ್ಥಾನ ಅಭಿವೃದ್ಧಿ ಮಾಡುತ್ತಾರಾ? ಮುಂದೆ ಶಾಸಕರಾಗಿ ಅವಕಾಶ ಸಿಕ್ಕರೆ ದೇವಸ್ಥಾನ ಅಭಿವೃದ್ಧಿ ಮೊದಲ ಆದ್ಯತೆ ಎಂದರು.
ಆಗಸ್ಟ್ 29 ರಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಮಾಗಡಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿ ಉದ್ಘಾಟನೆಗೆ ಆಗಮಿಸುತ್ತಿದ್ದು, ಅವರನ್ನು ಸ್ವಾಗತಿಸುತ್ತೇವೆ ಎಂದರು.
ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರನ್ನು ಶೀಘ್ರ ಮಾಗಡಿಗೆ ಕರೆಸಿ ಜೆಡಿಎಸ್ ಬೃಹತ್ ಸಮಾವೇಶ ನಡೆಸಲಾಗುತ್ತದೆ ಎಂದು ತಿಳಿಸಿದರು.
ಲಕ್ಷ್ಮಿ ಎ.ಮಂಜುನಾಥ್, ತಮ್ಮಣ್ಣಗೌಡ, ವಿಜಯಕುಮಾರ್ ಬೆಳಗುಂಬ, ಹೊಸಹಳ್ಳಿ ರಂಗಣಿ ಪಂಚೆ ರಾಮಣ್ಣ, ಕೋಟಪ್ಪ, ಕೆಂಪಸಾಗರ ಮಂಜುನಾಥ್, ಕೆ.ವಿ.ಬಾಲು, ಕದಂಬ ಗಂಗರಾಜು, ವಿಶ್ವನಾಥ್, ಕೆಂಪೇಗೌಡ, ಶಿವಕುಮಾರ್, ಕರಡಿ ನಾಗರಾಜು, ಚಕ್ರಬಾವಿ ನಟೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.