ADVERTISEMENT

ಕಾಟಾಚಾರದ ಜಯಂತಿ: ಅಧಿಕಾರಿಗಳ ಗೈರು

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 2:45 IST
Last Updated 1 ನವೆಂಬರ್ 2020, 2:45 IST
ಕನಕಪುರದ ತಾಲ್ಲೂಕು ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು
ಕನಕಪುರದ ತಾಲ್ಲೂಕು ಕಚೇರಿಯಲ್ಲಿ ವಾಲ್ಮೀಕಿ ಜಯಂತಿ ಕಾರ್ಯಕ್ರಮ ನಡೆಯಿತು   

ಕನಕಪುರ: ‘ಮಹರ್ಷಿ ವಾಲ್ಮೀಕಿ ಜಯಂತಿಯನ್ನು ತಾಲ್ಲೂಕು ಆಡಳಿತ ಕಾಟಾಚಾರಕ್ಕಾಗಿ ಆಚರಣೆ ಮಾಡುತ್ತಿದೆ. ಕಾರ್ಯಕ್ರಮದಲ್ಲಿ ಹಲವು ಇಲಾಖೆಯ ಅಧಿಕಾರಿಗಳೇ ಗೈರುಹಾಜರಾಗಿದ್ದಾರೆ’ ಎಂದು ವಾಲ್ಮೀಕಿ ಸಮುದಾಯದ ಮುಖಂಡ ಡಿ. ಶ್ರೀನಿವಾಸ್‌ ವಿಷಾದಿಸಿದರು.

ಮಿನಿ ವಿಧಾನಸೌಧದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ಶನಿವಾರ ನಡೆದ ವಾಲ್ಮೀಕಿ ಜಯಂತಿಯಲ್ಲಿ ಮಾತನಾಡಿದರು.

ಸರ್ಕಾರವು ಮಹನೀಯರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಕ್ರಮವಹಿಸಿದೆ. ಅವರ ವಿಚಾರಧಾರೆಗಳನ್ನು ಜನತೆಗೆ ತಿಳಿಸಲು ಮುಂದಾಗಿದೆ. ಮಹನೀಯರ ತತ್ವ, ಆದರ್ಶಗಳನ್ನು ಪಾಲಿಸಿ ಸರಿದಾರಿಯಲ್ಲಿ ಸಾಗಲು ಜಯಂತಿಗಳಿಗೆ ಸರ್ಕಾರ ರಜೆ ನೀಡುತ್ತಿದೆ.ಬೆರಳೆಣಿಕೆಯಷ್ಟು ಇಲಾಖೆಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ ಎಂದರು.

ADVERTISEMENT

‘ಕೊರೊನಾ ಕಾರಣದಿಂದ ಹೆಚ್ಚಿನ ಜನರು ಗುಂಪು ಸೇರಿದಂತೆ ಸರ್ಕಾರ ಸುತ್ತೋಲೆ ಹೊರಡಿಸಿದೆ. ಇದರಿಂದ ಕೆಲವರು ಕಾರ್ಯಕ್ರಮಕ್ಕೆ ಗೈರಾಗಿದ್ದಾರೆ’ ಎಂದು ತಾಲ್ಲೂಕು ಕಚೇರಿಯ ಶಿರಸ್ತೇದಾರ್‌ ರಘು ತಿಳಿಸಿದರು.

ಇದರಿಂದ ಬೇಸರಗೊಂಡ ಶ್ರೀನಿವಾಸ್,‌ ‘ಸರ್ಕಾರ ಜನರನ್ನು ಗುಂಪು ಸೇರಿಸಬಾರದೆಂದು ತಿಳಿಸಿದೆ. ಮಾಸ್ಕ್‌ ಧರಿಸಿ ಪಾಲ್ಗೊಳ್ಳಬೇಕಿತ್ತು. ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷರಾಗಿರುವ ತಹಶೀಲ್ದಾರ್‌ ಅವರೇ ಕಾರ್ಯಕ್ರಮಕ್ಕೆ ಬಂದಿಲ್ಲ’ ಎಂದರು.

ಕ್ಷೇತ್ರ ಶಿಕ್ಷಣಾಧಿಕಾರಿ ಜೆ.ಎಂ. ಜಯಲಕ್ಷ್ಮಿ ಅಧ್ಯಕ್ಷತೆವಹಿಸಿದ್ದರು. ಜಿಲ್ಲಾ ಲೇಖಕರ ವೇದಿಕೆಯ ಅಧ್ಯಕ್ಷ ಕೂ.ಗಿ. ಗಿರಿಯಪ್ಪ ವಾಲ್ಮೀಕಿ ಬಗ್ಗೆ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.