ADVERTISEMENT

‘ಸಾಮಾಜಿಕ ಕಳಕಳಿ ಹೊಂದಿದ್ದ ಮೇರು ನಟ’

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2019, 15:30 IST
Last Updated 24 ಏಪ್ರಿಲ್ 2019, 15:30 IST
ಚನ್ನಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ದಿನೇಶ್ ಚಂದ್ರ ಅವರು ಡಾ.ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು
ಚನ್ನಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತಹಶೀಲ್ದಾರ್ ದಿನೇಶ್ ಚಂದ್ರ ಅವರು ಡಾ.ರಾಜ್ ಕುಮಾರ್ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು   

ಚನ್ನಪಟ್ಟಣ: ವರನಟ ಡಾ.ರಾಜ್‌ಕುಮಾರ್ ಅವರು ಸಾಮಾಜಿಕ ಕಳಕಳಿ ಹೊಂದಿದ ಕಲಾವಿದ ಎಂದು ತಹಶೀಲ್ದಾರ್ ದಿನೇಶ್ ಚಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ತಾಲ್ಲೂಕು ಕಚೇರಿಯಲ್ಲಿ ತಾಲ್ಲೂಕು ಆಡಳಿತ ವತಿಯಿಂದ ಬುಧವಾರ ಏರ್ಪಡಿಸಿದ್ದ ಡಾ. ರಾಜ್‌ಕುಮಾರ್ ಅವರ 91 ನೇ ಜನ್ಮದಿನಾಚರಣೆ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮಾತನಾಡಿದರು.

ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ ಅಪಾರ ಎಂದು ಪ್ರಶಂಸಿಸಿದರು. ಹಲವಾರು ಪ್ರಶಸ್ತಿ, ಬಿರುದುಗಳನ್ನು ಪಡೆದಿರುವ ಅವರು ಕನ್ನಡ ಚಿತ್ರರಂಗದ ದಿಗ್ಗಜರೆನಿಸಿಕೊಂಡಿದ್ದಾರೆ. ನಟಿಸಿದ ಚಿತ್ರಗಳಲ್ಲಿ ಸಾಮಾಜಿಕ ಸಂದೇಶವನ್ನು ನೀಡಿ, ಸಮಾಜಮುಖಿಯಾದವರು. ಅಂತಹ ಮಹಾನ್ ನಟರ ಜಯಂತಿ ಆಚರಣೆಯನ್ನು ಸರ್ಕಾರದ ಮಟ್ಟದಲ್ಲಿ ಆಚರಣೆ ಮಾಡಲು ಆದೇಶ ಮಾಡಿರುವುದು ನಿಜಕ್ಕೂ ಸ್ವಾಗತಾರ್ಹ ಕಾರ್ಯ ಎಂದರು.

ADVERTISEMENT

ಹಿರಿಯ ನಟರಾದ ರಾಜ್‌ಕುಮಾರ್ ಅವರ ಸರಳ ಜೀವನ ಶೈಲಿ, ದೊಡ್ಡ ನಟರಾದರೂ ಯಾವುದೇ ಅಹಂ ಇಲ್ಲದೆ ಸಮಾಜದ ಜೊತೆ ಗುರುತಿಸಿಕೊಂಡಿದ್ದ ಅವರ ಆದರ್ಶ ಇಂದಿನ ಯುವ ನಟರಿಗೆ ಮಾದರಿ. ಅಂತಹ ಮಹಾನ್ ನಟರ ದಾರಿಯಲ್ಲಿ ಎಲ್ಲರೂ ಸಾಗುವುದು ಅವಶ್ಯಕ ಎಂದರು.

ಮಳೂರು ಹೋಬಳಿ ರೆವಿನ್ಯೂ ಇನ್‌ಸ್ಪೆಕ್ಟರ್ ಲಕ್ಷ್ಮಣಗೌಡ, ಫುಡ್ ಇನ್‌ಸ್ಪೆಕ್ಟರ್ ಮಲ್ಲಿಕಾರ್ಜುನ, ನಗರಸಭಾ ಸದಸ್ಯ ವಿಷಕಂಠ ಮೂರ್ತಿ, ಮುಖಂಡ ಗೋವಿಂದರಾಜು, ತಾಲ್ಲೂಕು ಕಚೇರಿಯ ಸಿಬ್ಬಂದಿ ಹರೀಶ್, ಜಯರಾಮು, ಬಿಂದು, ಕವಿತಾ, ಬಿ. ಟಿ. ಪಾರ್ವತಮ್ಮ, ಇರ್ಫಾನ್, ಪ್ರಭಾಕರ್, ಕುರ್ಷಿದ್, ಪೂಜಾ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.