ADVERTISEMENT

ಮಾರಮ್ಮ ದೇವಿ ಕೊಂಡೋತ್ಸವ

​ಪ್ರಜಾವಾಣಿ ವಾರ್ತೆ
Published 11 ನವೆಂಬರ್ 2021, 4:25 IST
Last Updated 11 ನವೆಂಬರ್ 2021, 4:25 IST
ಬರಡನಹಳ್ಳಿಯಲ್ಲಿ ನಡೆದ ಮಾರಮ್ಮ ದೇವಿ ಕೊಂಡೋತ್ಸವದಲ್ಲಿ ಅರ್ಚಕ ವೀರಭದ್ರ ಕೊಂಡವನ್ನು ಹಾಯುತ್ತಿರುವುದು
ಬರಡನಹಳ್ಳಿಯಲ್ಲಿ ನಡೆದ ಮಾರಮ್ಮ ದೇವಿ ಕೊಂಡೋತ್ಸವದಲ್ಲಿ ಅರ್ಚಕ ವೀರಭದ್ರ ಕೊಂಡವನ್ನು ಹಾಯುತ್ತಿರುವುದು   

ಕನಕಪುರ: ತಾಲ್ಲೂಕಿನಬರಡನಹಳ್ಳಿಯಶಕ್ತಿದೇವತೆ ಮಾರಮ್ಮ ದೇವಿಯ ಕೊಂಡೋತ್ಸವಬುಧವಾರ ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

ದೇವಿಯ ಕೊಂಡೋತ್ಸವದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಮಂಗಳವಾರ ಸಂಜೆ ಎಳವಾರ ಕಾರ್ಯಕ್ರಮ ನಡೆಯಿತು. ಎಳವಾರದಮೆರವಣಿಗೆ ಮುಕ್ತಾಯವಾದ ನಂತರ ಕೊಂಡದಲ್ಲಿ ಸೌದೆಯನ್ನಿಟ್ಟುಅಗ್ನಿಪೂಜೆ ನೆರವೇರಿಸಲಾಯಿತು.

ಬೆಳಿಗ್ಗೆ ಬರಡನಹಳ್ಳಿ ಗ್ರಾಮಸ್ಥರು ಮಾರಮ್ಮ ದೇವಸ್ಥಾನದ ಅರ್ಚಕ ವೀರಭದ್ರ ಅವರೊಂದಿಗೆ ಚಿಕ್ಕಹೊಳೆಯಲ್ಲಿ ಗಂಗಾಪೂಜೆ ನೆರವೇರಿಸಿದರು. ನಂತರ ದೇವರನ್ನು ಮೆರವಣಿಗೆಯಲ್ಲಿ ಕರೆ ತರಲಾಯಿತು. ಬಸಪ್ಪನ ದೇವಸ್ಥಾನದ ಅರ್ಚಕ ಪರಶಿವಯ್ಯ ಅವರ ಮನೆವರೆಗೂ ಜನರು ಮಾರಮ್ಮನಿಗೆ ಮಡಲಕ್ಕಿ ಕಟ್ಟಿ ಪೂಜೆ ನೆರವೇರಿಸಿದರು.

ADVERTISEMENT

ಗ್ರಾಮದಲ್ಲಿರುವ ಪ್ರತಿ ಕುಟುಂಬದ ಹೆಣ್ಣುಮಕ್ಕಳು ತಂಬಿಟ್ಟಿನ ಆರತಿಯೊಂದಿಗೆ ದೇವರನ್ನು ಮೆರವಣಿಗೆಯಲ್ಲಿ ಅಗ್ನಿಕೊಂಡದವರೆಗೆ ಕರೆತಂದರು. ದೇವರು ಹೊತ್ತ ಅರ್ಚಕ ವೀರಭದ್ರ ಕೊಂಡದ ಸುತ್ತಲೂ ಮೂರು ಸುತ್ತು ಪ್ರದಕ್ಷಿಣೆ ನಡೆಸಿ ಕೊಂಡ ಹಾಯ್ದರು.

ಸಾವಿರಾರು ಸಂಖ್ಯೆಯಲ್ಲಿ ನೂಕುನುಗ್ಗಲಿನಲ್ಲಿ ನಿಂತಿದ್ದ ಭಕ್ತರು ದೇವರು ಅಗ್ನಿಕೊಂಡು ಪ್ರವೇಶಿಸುವುದನ್ನು ನೋಡಿ ಕಣ್ತುಂಬಿಕೊಂಡರು. ನಂತರ ಅಲ್ಲೇ ಇರುವ ಮಾರಮ್ಮ ದೇವಿಯ ಚಿಕ್ಕಗುಡಿಯಲ್ಲಿ ತಂಬಿಟ್ಟಿನ ಆರತಿಯನ್ನು ದೇವಿಗೆ ಸಮರ್ಪಿಸಿ ಕುಟುಂಬಕ್ಕೆ ಒಳ್ಳೆಯದಾಗಲಿ. ಎಲ್ಲಾ ಸಮಸ್ಯೆಗಳು ದೂರವಾಗಲಿ ಎಂದು
ಪ್ರಾರ್ಥಿಸಿದರು.

ಹಬ್ಬದ ಹಿನ್ನೆಲೆಯಲ್ಲಿ ಜನರಲ್ಲಿ ಹೊಸ ಚೈತನ್ಯ ಮತ್ತು ನವೋಲ್ಲಾಸ ಮನೆ ಮಾಡಿತ್ತು. ಗ್ರಾಮದ ಯಜಮಾನರು (ಊರಗೌಡರು) ಹಬ್ಬದ ನೇತೃತ್ವವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.