ಚನ್ನಪಟ್ಟಣ: ತಾಲ್ಲೂಕಿನಲ್ಲಿ ಪ್ರಸ್ತುತ ಪತ್ರಿನಿತ್ಯ 3ಲಕ್ಷ ಲೀಟರ್ ಹಾಲು ಉತ್ಪತ್ತಿಯಾಗುತ್ತಿದೆ. ಅದನ್ನು 5ಲಕ್ಷ ಲೀಟರ್ಗೆ ಹೆಚ್ಚಿಸುವ ಗುರಿ ಹೊಂದಲಾಗಿದೆ ಎಂದು ಬಮೂಲ್ ನಿರ್ದೇಶಕ ಎಸ್.ಲಿಂಗೇಶ್ ಕುಮಾರ್ ತಿಳಿಸಿದರು.
ತಾಲ್ಲೂಕಿನ ಬೈರಶೆಟ್ಟಿಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಈಚೆಗೆ ನಡೆದ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆ ಉದ್ಘಾಟಿಸಿ ಮಾತನಾಡಿದರು.
ಹಸು ಸಾಕಾಣಿಕೆ ಮಾಡಲು ಮುಂದೆ ಬರುವ ರೈತರಿಗೆ ಬಮೂಲ್ ಮತ್ತು ಸಂಘದ ಸಹಕಾರದಿಂದ ಬಿಡಿಸಿಸಿ ಬ್ಯಾಂಕ್ನಿಂದ ಎರಡು ಹಸುಗಳನ್ನು ಖರೀದಿಸಲು ₹1.80ಲಕ್ಷ ಸಾಲ ನೀಡಲಾಗುವುದು. ಇದರ ಜತೆಗೆ ಬಮೂಲ್ ವತಿಯಿಂದ ಹಲವು ಸೌಲಭ್ಯ ನೀಡಲಾಗುವುದು. ಸದಸ್ಯರು ಜಾಗೃತರಾಗಿ ಸಂಘ ಮತ್ತು ಬಮೂಲ್ ಸೌಲಭ್ಯ ಸದುಪಯೋಗಪಡಿಸಿಕೊಂಡು ಹೆಚ್ಚು ಗುಣಮಟ್ಟದ ಹಾಲು ಸರಬರಾಜು ಮಾಡಿ ಆರ್ಥಿಕವಾಗಿ ಪ್ರಗತಿ ಹೊಂದಬೇಕು ಎಂದು ಕಿವಿಮಾತು ಹೇಳಿದರು.
ಬಮೂಲ್ ವಿಸ್ತರಣಾಧಿಕಾರಿ ರಾಜು ಮಾತನಾಡಿ, ಸಭೆ ಉದ್ದೇಶ ಮತ್ತು ಬಮೂಲ್ನಿಂದ ಸಿಗುವ ಸೌಲಭ್ಯ ಮತ್ತು ವೈಜಾನಿಕವಾಗಿ ರಾಸುಗಳ ಪೋಷಣೆ ಮಾಡಿ ಹೆಚ್ಚಿನ ಹಾಲು ಇಳುವರಿ ಪಡೆಯುವ ಬಗ್ಗೆ ವಿವರಿಸಿದರು.
ಸಂಘದ ಸಿಇಒ ಬಿ.ಭದ್ರಯ್ಯ, ಸಂಘದ ಲೆಕ್ಕಪತ್ರ ಮಂಡಿಸಿ ಸಭೆ ಒಪ್ಪಿಗೆ ಪಡೆದರು. ಸಂಘದ ಉಪಾಧ್ಯಕ್ಷ ನಾಗರಾಜು, ನಿರ್ದೇಶಕರಾದ ಬಿ.ಪಿ.ಲೋಕೇಶ್, ನಾಗರಾಜು, ಶಿವಣ್ಣ, ಎಂ.ದಿನೇಶ್, ತಮ್ಮಯ್ಯ, ಎಂ.ನಾಗರಾಜು, ಉಮೇಶ್, ಬಿ.ಸಿ.ಚಂದ್ರು, ಜಯಮ್ಮ, ಶಿವಮ್ಮ, ಸಿಬ್ಬಂದಿ ಮಲ್ಲೇಶ್, ಚಲ್ಲೇಶ್ ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.