ADVERTISEMENT

ಜಿಲ್ಲಾ ವೆಬ್‌ಸೈಟ್‌: ಕನ್ನಡದ ಅಧೋಗತಿ!

ವರ್ಷಗಳಿಂದಲೂ ಬದಲಾಗದ ವ್ಯವಸ್ಥೆ; ಭಾಷಾ ಪ್ರಿಯರ ಕೆಂಗಣ್ಣು

ಆರ್.ಜಿತೇಂದ್ರ
Published 31 ಅಕ್ಟೋಬರ್ 2019, 19:55 IST
Last Updated 31 ಅಕ್ಟೋಬರ್ 2019, 19:55 IST
ವೆಬ್‌ಸೈಟ್‌ನಲ್ಲಿ ಹಿಂದಿನ ಜಿ.ಪಂ. ಅಧ್ಯಕ್ಷರ ಹೆಸರೇ ಮುಂದುವರಿದಿರುವುದು
ವೆಬ್‌ಸೈಟ್‌ನಲ್ಲಿ ಹಿಂದಿನ ಜಿ.ಪಂ. ಅಧ್ಯಕ್ಷರ ಹೆಸರೇ ಮುಂದುವರಿದಿರುವುದು   

ರಾಮನಗರ: ರಾಜ್ಯ ಸರ್ಕಾರ ಕನ್ನಡವನ್ನು ಆಡಳಿತ ಭಾಷೆಯನ್ನಾಗಿ ಜಾರಿಗೆ ತಂದು ದಶಕಗಳೇ ಕಳೆದಿವೆ. ಆದರೆ ಸರ್ಕಾರಿ ವೆಬ್ ತಾಣಗಳು ಮಾತ್ರ ಇನ್ನೂ ಕನ್ನಡತನವನ್ನು ಮೈಗೂಡಿಸಿಕೊಂಡಿಲ್ಲ. ರಾಮನಗರದ ಜಿಲ್ಲಾಡಳಿತದ ವೆಬ್‌ಸೈಟ್‌ ಅದಕ್ಕೊಂದು ಸ್ಪಷ್ಟ ಉದಾಹರಣೆ.

ರಾಷ್ಟ್ರೀಯ ಸೂಚನಾ ವಿಜ್ಞಾನ ಕೇಂದ್ರ (ಎನ್ಐಸಿ) ನಿರ್ವಹಿಸುತ್ತಿರುವ https://ramanagara.nic.in/ ವಿಳಾಸದ ಈ ವೆಬ್‌ ತಾಣದಲ್ಲಿ ಜನಸಾಮಾನ್ಯರಿಗೆ ಸುಲಭವಾಗಿ ಅರ್ಥವಾಗುವಂತಹ ಭಾಷೆ ಬಳಕೆಯಾಗಿಲ್ಲ. ಸಾಕಷ್ಟು ಕಡೆಗಳಲ್ಲಿ ಕನ್ನಡದ ವಾಕ್ಯಗಳು ಒಂದಕ್ಕೊಂದು ಸಂಬಂಧವೇ ಇಲ್ಲ ಎನ್ನುವಂತೆ ಇವೆ. ಓದಿದಷ್ಟೂ ತಪ್ಪು ಅರ್ಥವನ್ನೇ ಕೊಡುತ್ತವೆ. ಇಲ್ಲಿ ಕನ್ನಡ ಭಾಷೆಯ ಬಳಕೆ ಅಧೋಗತಿಗೆ ಇಳಿದಿದ್ದು, ಓದುಗರು ಕಣ್ಣು–ಬಾಯಿ ಬಿಡುವಂತಾಗಿದೆ.

‘ರಾಮನಗರ ಜಿಲ್ಲೆಯನ್ನು ಹಿಂದಿನ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯಿಂದ 23 ಆಗಸ್ಟ್, 2007 ರಂದು ಕೆತ್ತಲಾಗಿದೆ’ –ಜಿಲ್ಲೆಯ ಬಗ್ಗೆ ಮಾಹಿತಿ ಹುಡುಕುವವರಿಗೆ ಹೀಗೆ ಈ ವೆಬ್‌ ತಾಣವು ಮಾಹಿತಿ ನೀಡುತ್ತದೆ! ಇಂಗ್ಲಿಷಿನ ವಾಕ್ಯಗಳನ್ನು ಅಸಂಬದ್ಧವಾಗಿ ಅನುವಾದಿಸಿ, ಕನಿಷ್ಠ ಅದನ್ನು ಭಾಷೆ ಬಲ್ಲವರಿಂದ ಓದಿಸದೇ ಹಾಗೆಯೇ ಹಾಕಲಾಗಿದೆ.

ADVERTISEMENT

ರಾಜ್ಯದ ಆಡಳಿತ ಭಾಷೆ ಕನ್ನಡವಾದರೂ ನಮ್ಮ ರಾಮನಗರದ ವೆಬ್ ತಾಣ ಮೊದಲು ತೆರೆದುಕೊಳ್ಳುವುದು ಇಂಗ್ಲೀಷಿನಲ್ಲಿ. ಪುಟದ ಬಲಭಾಗದ ತುದಿಯ ಒಂದು ಮೂಲೆಯಲ್ಲಿ ಕನ್ನಡ ಎಂದು ಸಣ್ಣದಾಗಿ ಬರೆಯಲಾಗಿದೆ. ಅದನ್ನು ಕ್ಲಿಕ್ಕಿಸಿದರಷ್ಟೇ ಕನ್ನಡದ ಪುಟಗಳು ತೆರೆದುಕೊಳ್ಳುತ್ತಾ ಹೋಗುತ್ತವೆ.

ಹೆಸರುಗಳೂ ತಪ್ಪು: ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು ‘ವಾಸ್ತುಶಿಲ್ಪಿ, ಬಿಲ್ಡರ್‌ ಮತ್ತು ಮಾರ್ಗದರ್ಶಿ’ ಹೀಗೆಂದು ವೆಬ್‌ಸೈಟ್‌ ಹೇಳುತ್ತದೆ. ‘ಬಿಳಿ ಬೆಂಬಲಿತ ರಣಹದ್ದು’ ‘ಮಹಿಳೆಯರಿಗೆ ಮತ್ತು ಸಂತೃಪ್ತಿಗಾಗಿ ಶೌಚಾಲಯಗಳು’, ‘ಡೀಸೆಲ್ ಜನರೇಟರ್ಗಳ ಮೂಲಕ ಅಡ್ಡಿಪಡಿಸಿದ ವಿದ್ಯುತ್ ಸರಬರಾಜು’ ಮೊದಲಾದ ವಿಶೇಷಣಾ ವಾಕ್ಯಗಳನ್ನೂ ಇಲ್ಲಿ ಬಳಸಲಾಗಿದೆ.

ಕನಿಷ್ಠ ಹೆಸರುಗಳನ್ನದರೂ ಸರಿಯಾಗಿ ಬಳಕೆ ಮಾಡುವ ಪ್ರಯತ್ನ ನಡೆದಿಲ್ಲ. ವಿಧಾನಸೌಧ ನಿರ್ಮಾತೃ ಹೆಸರನ್ನು ‘ಕಂಗಲ್ ಹನುಮಾಂತಯ್ಯ’ ಎಂದು ತಪ್ಪುತಪ್ಪಾಗಿ ಬರೆಯಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.