ADVERTISEMENT

ಕೇಂದ್ರಕ್ಕೆ ರೈತರು ಗುಣಮಟ್ಟದ ರಾಗಿ ತನ್ನಿ: ಶಾಸಕ ಎಚ್.ಸಿ.ಬಾಲಕೃಷ್ಣ

​ಪ್ರಜಾವಾಣಿ ವಾರ್ತೆ
Published 12 ಮಾರ್ಚ್ 2025, 4:21 IST
Last Updated 12 ಮಾರ್ಚ್ 2025, 4:21 IST
ಮಾಗಡಿ ತಾಲ್ಲೂಕಿನ ಸೋಲೂರು ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಬಾಲಕೃಷ್ಣ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು
ಮಾಗಡಿ ತಾಲ್ಲೂಕಿನ ಸೋಲೂರು ರಾಗಿ ಖರೀದಿ ಕೇಂದ್ರಕ್ಕೆ ಶಾಸಕ ಬಾಲಕೃಷ್ಣ ಭೇಟಿ ನೀಡಿ ಅಧಿಕಾರಿಗಳಿಂದ ಮಾಹಿತಿ ಪಡೆದರು   

ಮಾಗಡಿ: ಸರ್ಕಾರ ಉತ್ತಮ ಬೆಲೆಗೆ ರಾಗಿ ಖರೀದಿಸುತ್ತಿದ್ದು, ರೈತರು ಗುಣಮಟ್ಟದ ರಾಗಿಯನ್ನು ಹಾಕಬೇಕೆಂದು ಶಾಸಕ ಎಚ್.ಸಿ.ಬಾಲಕೃಷ್ಣ ರೈತರಿಗೆ ತಿಳಿಸಿದರು.

ತಾಲ್ಲೂಕಿನ ಸೋಲೂರು ಬಳಿ ರಾಗಿ ಖರೀದಿ ಕೇಂದ್ರ ಆರಂಭದ ಹಿನ್ನಲೆ ಕೇಂದ್ರಕ್ಕೆ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ಒಂದು ಕ್ವಿಂಟಲ್‌ಗೆ ₹4,290ಕ್ಕೆ ಖರೀದಿಸುತ್ತಿದ್ದು, ಕೇಂದ್ರಕ್ಕೆ ಗುಣಮಟ್ಟದ ರಾಗಿ ಹಾಕಬೇಕು. ಕಳೆದ ಬಾರಿ ರಾಗಿಗೆ ಮಣ್ಣು, ಇಟ್ಟಿಗೆ ಪುಡಿ ಬೆರೆಸಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ. ಹಾಗಾಗಿ ಈ ಬಾರಿ ಉತ್ತಮ ರಾಗಿಯನ್ನು ಕೇಂದ್ರಕ್ಕೆ ಹಾಕಿ ಎಂದು ಮನವಿ ಮಾಡಿದರು.

ರಾಗಿ ಖರೀದಿ ಕೇಂದ್ರದ ಬಳಿ ಊಟ, ನೀರು, ಪೆಂಡಾಲ್, ಶೌಚಾಲಯ ವ್ಯವಸ್ಥೆ ಮಾಡಲಾಗಿದೆ. ಈಗ ಸೋಲೂರಿನಲ್ಲಿ ಮಾತ್ರ ನೋಂದಣಿಯಾಗಿರುವ ರೈತರಿಂದ ಮಾತ್ರ ರಾಗಿ ಖರೀದಿಸುತ್ತಿದ್ದು, ಮುಂದಿನ ಬಾರಿ ಮಾಗಡಿ ಟೌನ್, ಕಸಬಾ, ಮಾಡಬಾಳು ಹೋಬಳಿ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮಾಗಡಿಯಲ್ಲಿ ಖರೀದಿ ಕೇಂದ್ರ ಆರಂಭಿಸುವ ಬಗ್ಗೆ ಅಧಿಕಾರಿಗಳ ಜತೆ ಚರ್ಚಿಸಿ ರೈತರಿಗೆ ಅನುಕೂಲ ಮಾಡಲಾಗುವುದು ಎಂದರು.

ADVERTISEMENT

ರಾಗಿ ಖರೀದಿ ಅಧಿಕಾರಿ ಶಾಂತ ಮಾತನಾಡಿ, ರಾಗಿ ಖರೀದಿ ಮಾರ್ಚ್‌ 10 ರಿಂದ‌ ಆರಂಭವಾಗಿದ್ದು, ಮೂರು ತಿಂಗಳ ಕಾಲ ಖರೀದಿ ಮಾಡಲಾಗುತ್ತದೆ. ಹಾಗಾಗಿ ರೈತರು ಗುಣಮಟ್ಟದ ರಾಗಿಯನ್ನು ತರಬೇಕು. ಪ್ರತಿದಿನ ಬೆಳಿಗ್ಗೆ 8 ರಿಂದ ಸಂಜೆ 6 ರವರೆಗೆ ರಾಗಿ ಖರೀದಿಸುತ್ತಿದ್ದು, ಪ್ರತಿದಿನ 100 ರಿಂದ 120 ಕ್ವಿಂಟಲ್ ಖರೀದಿಸಲಾಗುತ್ತಿದೆ ಎಂದರು.

ಈ ಬಾರಿ ಸೋಲೂರು ರಾಷ್ಟ್ರೀಯ ಹೆದ್ದಾರಿ ಮುಖ್ಯರಸ್ತೆಯ ಶ್ರೀರಾಮ ಫೈನಾನ್ಸ್ ಕಚೇರಿ ಮುಂಭಾಗದಲ್ಲಿ ರಾಗಿ ಖರೀದಿ ಕೇಂದ್ರ ಆರಂಭಿಸಿದ್ದು, ರೈತರು ಇಲ್ಲಿಗೆ ಬಂದು ರಾಗಿ ಮಾರಾಟ ಮಾಡಬಹುದು ಎಂದು ತಿಳಿಸಿದರು.

ಟಿಎಪಿಸಿಎಂಎಸ್ ಅಧ್ಯಕ್ಷ ಶಿವಪ್ರಸಾದ್, ತಟ್ಟೆಕೆರೆ ಬಾಬು, ರಮೇಶ್, ಪ್ರಶಾಂತ್, ಜಯರಾಮಯ್ಯ ಸೇರಿದಂತೆ ಇತರರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.