ರಾಮನಗರ: ತಾಲ್ಲೂಕಿನ ಕಸಬಾ ಹೋಬಳಿಯ ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎಚ್.ಎ. ಇಕ್ಬಾಲ್ ಹುಸೇನ್ ಬುಧವಾರ ಭೂಮಿಪೂಜೆ ನೆರವೇರಿಸಿದರು.
ಬಳಿಕ ಮಾತನಾಡಿದ ಅವರು, ‘ಪಂಚಾಯಿತಿ ಮಟ್ಟದಲ್ಲಿ 15ನೇ ಹಣಕಾಸು ಯೋಜನೆಯಡಿ, ಕುಡಿಯುವ ನೀರು ಹಾಗೂ ಚರಂಡಿ ಸ್ವಚ್ಛತೆಗೆ ಮೊದಲ ಆದ್ಯತೆ ನೀಡಲಾಗುತ್ತದೆ. ಬೇಸಿಗೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ತಲೆದೋರದಂತೆ ಈಗಲೇ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿರುವೆ’ ಎಂದರು.
‘ಕುಡಿಯುವ ನೀರಿನ ಕೊರತೆ ಇರುವ ಕಡೆಗೆ ಟ್ಯಾಂಕರ್ ನೀರು ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳಬೇಕು. ಕೆಲವೆಡೆ ಶುದ್ಧ ಕುಡಿಯುವ ನೀರಿನ ಘಟಕಗಳು ದುರಸ್ತಿಗೆ ಕಾದಿದ್ದು, ಕೂಡಲೇ ದುರಸ್ತಿ ಮುಗಿಸಿ ನೀರು ಪೂರೈಸಬೇಕು’ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ಮಂಚನಬೆಲೆ ಎಡ ಹಾಗೂ ಬಲದಂಡೆ ನಾಲೆಗಳ ದುರಸ್ತಿ ಕಾರ್ಯ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರವೇ ನಾಲೆಯಲ್ಲಿ ನೀರು ಹರಿಯಲಿದೆ. ನಾಲೆ ಸಾಗಿರುವ ಮಾರ್ಗವನ್ನು ಕೆಲವರು ಒತ್ತುವರಿ ಮಾಡಿಕೊಂಡು ಮುಚ್ಚಿರುವುದು ಕಂಡುಬಂದಿದೆ. ಅಂತಹ ಜಾಗವನ್ನು ತೆರವುಗೊಳಿಸಿ ನಾಲೆ ಸ್ವಚ್ಛಗೊಳಿಸಲಾಗುವುದು. ಮುಖ್ಯಮಂತ್ರಿಗಳ ₹20 ಕೋಟಿ ವಿಶೇಷ ಅನುದಾನದಡಿ ಪ್ರತಿ ಪಂಚಾಯಿತಿಯಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದ್ದು, ಹಲವೆಡೆ ಕಾಮಗಾರಿ ಶುರುವಾಗಿದೆ’ ಎಂದು ತಿಳಿಸಿದರು.
ಬಮೂಲ್ ನಿರ್ದೇಶಕ ಪಿ. ನಾಗರಾಜು, ಹರಿಸಂದ್ರ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯಲಕ್ಷ್ಮಮ್ಮ, ಉಪಾಧ್ಯಕ್ಷ ವೀರಭದ್ರಸ್ವಾಮಿ, ಪಿಡಿಒ ದಯಾನಂದಸಾಗರ್, ಮುಖಂಡರಾದ ದೊಡ್ಡವೀರಯ್ಯ, ಮಂಜುಳಾ ಮರಿದೇವರು, ಪುಟ್ಟಣ್ಣ, ರವಿ, ಸತೀಶ್, ಮಂಚೇಗೌಡ, ವೆಂಕಟೇಶ್, ಸಿದ್ದಪ್ಪ, ರಂಜಿತ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.