ರಾಮನಗರ: ಮಲೆನಾಡು ಭಾಗದಲ್ಲಿ ಮಂಗನ ಕಾಯಿಲೆ ಉಲ್ಬಣಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅಸಹಜವಾಗಿ ಮೃತಪಟ್ಟ ಮಂಗಗಳ ಶವ ಪರೀಕ್ಷೆ ನಡೆಸಲಾಗುತ್ತಿದೆ.
ಮಂಗಳವಾರ ಜಾನಪದ ಲೋಕದ ಆವರಣದಲ್ಲಿ ಮಂಗವೊಂದು ಮೃತಪಟ್ಟಿದ್ದು, ಪಶು ವೈದ್ಯಾಧಿಕಾರಿಗಳು ಅದರ ಮರಣೋತ್ತರ ಪರೀಕ್ಷೆ ನಡೆಸಿದರು. ಒಂದು ಗಂಟೆ ಕಾಲ ಪರೀಕ್ಷೆ ನಡೆಯಿತು. ‘ಗರ್ಭಕೋಶದಲ್ಲಿ ಬೆಳೆದಿದ್ದ ಗೆಡ್ಡೆಯಿಂದಾಗಿ ಮಂಗ ಮೃತಪಟ್ಟಿದೆ. ಹೆಚ್ಚಿನ ವರದಿಗಾಗಿ ಅದರ ಮಿದುಳು, ಕೈಕಾಲು ಇತರ ಅಂಗಾಂಗಗಳನ್ನು ಪುಣೆಯಲ್ಲಿನ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಅದರ ವರದಿ ಬಳಿಕ ಸ್ಪಷ್ಟ ಚಿತ್ರಣ ದೊರೆಯಲಿದೆ’ ಎಂದು ಬನ್ನಿಕುಪ್ಪೆ ಪಶು ವೈದ್ಯಾಧಿಕಾರಿ ಹರ್ಷ ತಿಳಿಸಿದರು.
ಕನಕಪುರ ತಾಲ್ಲೂಕಿನ ಸಾತನೂರು ಬಳಿ ಈಚೆಗೆ ಆರು ಮಂಗಗಳು ಸಾಮೂಹಿಕವಾಗಿ ಸಾವನ್ನಪ್ಪಿದ್ದವು. ಅಲ್ಲಲ್ಲಿ ಕೋತಿಗಳು ಸಾವನ್ನಪ್ಪುತ್ತಿರುವ ಕಾರಣ ಸಾರ್ವಜನಿಕರಲ್ಲಿ ಆತಂಕ ಮನೆ ಮಾಡಿದ್ದು, ಅದನ್ನು ದೂರ ಮಾಡುವ ಸಲುವಾಗಿ ಅರಣ್ಯ ಇಲಾಖೆ ಹಾಗೂ ಪಶುಪಾಲನಾ ಇಲಾಖೆಯು ಜಂಟಿಯಾಗಿ ಜಿಲ್ಲೆಯಲ್ಲಿ ಅಸಹಜವಾಗಿ ಸಾವನ್ನಪ್ಪುವ ಮಂಗಗಳ ಪರೀಕ್ಷೆ ಕೈಗೊಂಡಿದೆ.
ಆತಂಕ ಬೇಡ: ‘ಜಿಲ್ಲೆಯಲ್ಲಿ ಎಲ್ಲಿಯೂ ಮಂಗನ ಕಾಯಿಲೆಯ ಲಕ್ಷಣಗಳು ಕಾಣಿಸಿಕೊಂಡಿಲ್ಲ. ಹೀಗಾಗಿ ಜನರು ಆತಂಕ ಪಡುವ ಅಗತ್ಯ ಇಲ್ಲ’ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಟಿ. ಅಮರ್ನಾಥ್ ತಿಳಿಸಿದರು. ‘ಕಾಡಂಚಿನ ಗ್ರಾಮಗಳಲ್ಲಿ ಮನೆ ಮನೆಗೆ ತೆರಳಿ ಪರಿಶೀಲಿಸಲಾಗುತ್ತಿದೆ. ಎಲ್ಲ ಆಸ್ಪತ್ರೆಗಳಿಗೂ ಮಾಹಿತಿ ನೀಡಿದ್ದೇವೆ’ ಎಂದರು.
***
ಮಂಗಗಳು ಅಸಹಜವಾಗಿ ಮೃತಪಟ್ಟಿದ್ದು ಕಂಡುಬಂದಲ್ಲಿ ಸಾರ್ವಜನಿಕರು ಅರಣ್ಯ ಇಲಾಖೆ, ಆರೋಗ್ಯ ಇಲ್ಲವೇ ಪಶುಪಾಲನಾ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು
–ಸಹಾಯಕ ಉಪ ಅರಣ್ಯ ಸಂರಕ್ಷಣಾಧಿಕಾರಿ,ರಾಮನಗರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.