ರಾಮನಗರ: ಇಲ್ಲಿನ ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಸ್ಥಾನಕ್ಕೆ ಜಿ.ಎನ್. ನಟರಾಜು ಮಂಗಳವಾರ ರಾಜೀನಾಮೆ ನೀಡಿದ್ದಾರೆ.
ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರಿಗೆ ರಾಜೀನಾಮೆ ಪತ್ರ ಸಲ್ಲಿಸಿರುವ ಅವರು, ವೈಯಕ್ತಿಕ ಕಾರಣದಿಂದ ತಾವು ರಾಜೀನಾಮೆ ನೀಡುತ್ತಿದ್ದು, ಅದನ್ನು ಅಂಗೀಕರಿಸುವಂತೆ ಕೋರಿದ್ದಾರೆ. ನಟರಾಜು ಸ್ವಚ್ಛ ಶುಕ್ರವಾರ ಅಭಿಯಾನ ಆರಂಭಿಸುವ ಮೂಲಕ ಜಿಲ್ಲೆಯ ಗಮನ ಸೆಳೆದಿದ್ದರು. ಜೊತೆಗೆ ಇ-ಖಾತೆ ಆಂದೋಲನವನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದರು. ಕುಡಿಯುವ ನೀರು ಪೂರೈಕೆ, ಕಲ್ಯಾಣಿಗಳ ಸ್ವಚ್ಛತೆ ಮೊದಲಾದ ಕಾರ್ಯಕ್ರಮಗಳಿಗೆ ಆದ್ಯತೆ ನೀಡಿದ್ದರು.
ರಾಮನಗರ ತಾ.ಪಂ.ನಲ್ಲಿ ಜೆಡಿಎಸ್-ಕಾಂಗ್ರೆಸ್ ಅಧಿಕಾರ ಹಂಚಿಕೆ ಸೂತ್ರ ರೂಪಿಸಿಕೊಂಡಿದ್ದವು. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ನವರಾದ ನಟರಾಜುಗೆ ಅವಕಾಶ ದೊರೆತು ಒಂದೂವರೆ ವರ್ಷ ಕಾಲ ಅವರು ಅಧ್ಯಕ್ಷರಾಗಿ ಆಡಳಿತ ನಡೆಸಿದ್ದರು. ಒಪ್ಪಂದದಂತೆ ತಮಗೆ ಹುದ್ದೆ ಬಿಟ್ಟುಕೊಡುವಂತೆ ಜೆಡಿಎಸ್ ಸದಸ್ಯರು ಒತ್ತಾಯಿಸಿದ್ದರು. ಹೀಗಾಗಿ ಕಳೆದ ತಾ.ಪಂ. ಸಾಮಾನ್ಯ ಸಭೆಗೆ ಸದಸ್ಯರು ಗೈರಾಗಿದ್ದು, ಕೋರಂ ಕೊರತೆ ಕಾರಣ ಸಭೆಯನ್ನು ಮುಂದೂಡಲಾಗಿತ್ತು. ರಾಜೀನಾಮೆ ನೀಡುವಂತೆ ಸಂಸದ ಡಿ.ಕೆ. ಸುರೇಶ್ ನಟರಾಜು ಅವರಿಗೆ ಸೂಚಿಸಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.