
ರಾಮನಗರ: ನಗರದ ಐಜೂರಿನಲ್ಲಿರುವ ನೇತಾಜಿ ಪಾಪ್ಯುಲರ್ ಶಾಲೆಯ 34ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ‘ವಸಂತ–2026’ ಇತ್ತೀಚೆಗೆ ಜರುಗಿತು. ಸಮಾರಂಭ ಉದ್ಘಾಟಿಸಿ ಮಾತನಾಡಿದ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ, ‘ವಿದ್ಯಾರ್ಥಿಗಳು ಈ ದೇಶದ ಭವಿಷ್ಯ. ಶಾಲಾ ಹಂತದಲ್ಲಿ ಶಿಸ್ತು ಮತ್ತು ಸಂಸ್ಕಾರವನ್ನು ಮೈಗೂಡಿಸಿಕೊಂಡು ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡಬೇಕು’ ಎಂದರು.
‘ವಿದ್ಯೆ ಎಂಬುದು ಯಾರೂ ಕದಿಯಲಾಗದ ಆಸ್ತಿ. ಹಾಗಾಗಿ, ಪೋಷಕರು ಸಹ ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವತ್ತ ಗಮನ ಹರಿಸಬೇಕು. ಅವರಿಗೆ ಆಸ್ತಿ ಮಾಡುವ ಬದಲು, ಅವರನ್ನೇ ಆಸ್ತಿಯನ್ನಾಗಿ ಮಾಡಬೇಕು. ವಿದ್ಯಾರ್ಥಿಗಳು ಅತ್ಯುತ್ತಮ ಸಾಧನೆ ಮಾಡಿ ತಮ್ಮ ತಂದೆ–ತಾಯಿ ಹಾಗೂ ಶಾಲಾ–ಕಾಲೇಜಿಗೆ ಕೀರ್ತಿ ತರಬೇಕು’ ಎಂದರು.
ಶಾಲೆ ಅಧ್ಯಕ್ಷ ಡಾ. ನಾಗೇಂದ್ರ ಕುಮಾರ್ ಮಾತನಾಡಿ, ‘ವಿದ್ಯಾರ್ಥಿಗಳು ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲೂ ತೊಡಗಿಸಿಕೊಳ್ಳಬೇಕು. ತಂದೆ–ತಾಯಂದಿರು ಸಹ ಈ ವಿಷಯದಲ್ಲಿ ಮಕ್ಕಳನ್ನು ಪ್ರೋತ್ಸಾಹಿಸಬೇಕು. ಇದು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೂ ಪೂರಕ’ ಎಂದು ಅಭಿಪ್ರಾಯಪಟ್ಟರು.
ನಗರಸಭೆ ಸದಸ್ಯರಾದ ಬಿ.ಸಿ. ಪಾರ್ವತಮ್ಮ, ಭೈರೇಗೌಡ, ಮಾಜಿ ಸದಸ್ಯ ಶಿವಕುಮಾರಸ್ವಾಮಿ, ಶಾಲೆಯ ಕಾರ್ಯದರ್ಶಿ ವಸಂತ ವೀರೇಗೌಡ, ಮೀನಾಕ್ಷಿ ನಾಗೇಂದ್ರ ಕುಮಾರ್, ಕೆ.ಪಿ. ಶಿವಪ್ಪ, ಮಂಜುನಾಥ್ ಶೆಟ್ಟಿ, ಚಾಮಶೆಟ್ಟಿ, ಪ್ರವೀಣ್, ನವೀನ್ ಹಾಗೂ ಇತರರು ಇದ್ದರು. ಮಮತಾ ಪ್ರಾರ್ಥನೆ ಹಾಡಿದರು.
ಹಿಂದಿನ ಸಾಲಿನಲ್ಲಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳು ಹಾಗೂ ಅತಿಥಿಗಳನ್ನು ಸನ್ಮಾನಿಸಲಾಯಿತು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಪವಿತ್ರ ಅತಿಥಿಗಳನ್ನು ಸ್ವಾಗತಿಸಿ, ನಿರೂಪಣೆ ಮಾಡಿದರು. ಅಂಜನಾದೇವಿ ವಂದನಾರ್ಪಣೆ ಹಾಗೂ ಆಶಾ ಶಾಲಾ ವಾರ್ಷಿಕ ವರದಿ ಮಂಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.