ರಾಮನಗರ: ಜಿಲ್ಲೆಯ ವಿವಿಧ ಕಡೆಗಳಲ್ಲಿ ಅಕ್ರಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಮರಳು ಫಿಲ್ಟರ್ ಘಟಕಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು, ಘಟಕಗಳನ್ನು ನಾಶಪಡಿಸಿದ್ದಾರೆ.
ಜಿಲ್ಲಾ ಪೋಲಿಸ್ ಅಧಿಕಾರಿಗಳ ತಂಡ ಹಾಗೂ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿಗಳ ತಂಡ ಚನ್ನಪಟ್ಟಣ ತಾಲ್ಲೂಕಿನ ವಿರೂಪಾಕ್ಷಿಪುರ, ಕಾಡಾಕನಹಳ್ಳಿ, ಗೀಜಗನದಾಸದೊಡ್ಡಿ, ರಾಮನಗರ ತಾಲ್ಲೂಕಿನ ಕೈಲಾಂಚ, ಅರಳಾಳುಸಂದ್ರ, ಗೆಂಡೇಕೆರೆ, ನಾಗೋಹಳ್ಳಿ ಮುಂತಾದ ಕಡೆ ಅಕ್ರಮ ಫಿಲ್ಟರ್ ಮರಳು ಘಟಕಗಳ ಮೇಲೆ ದಾಳಿ ನಡೆಸಿದರು.
ಫಿಲ್ಟರ್ ಮರಳು ತಯಾರಿಸಿ ಸಾಗಣಿ ಮಾಡಲಾಗುತ್ತಿದೆ ಎಂಬ ದೂರುಗಳ ಹಿನ್ನೆಲೆಯಲ್ಲಿ ಈಚೆಗೆ ಸಭೆ ನಡೆಸಿ ಸಂಬಂಧಿಸಿರುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದರು. ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಬಿ. ರಮೇಶ್ ಪೊಲೀಸ್ ಸಿಬ್ಬಂದಿಗೆ ನಿರ್ದೇಶನ ನೀಡಿ ಅಕ್ರಮವೆಸಗಿದವರ ವಿರುದ್ಧ ಮೊಕದ್ದಮೆ ದಾಖಲಿಸುವಂತೆ ತಿಳಿಸಿದ್ದರು.
ದಾಳಿ ನೇತೃತ್ವವನ್ನು ಜಿಲ್ಲಾ ಭೂ ವಿಜ್ಞಾನ ಮತ್ತು ಗಣಿ ಇಲಾಖೆಯ ಉಪನಿರ್ದೇಶಕಿ ಡಾ. ಪುಷ್ಪ ವಹಿಸಿದ್ದರು. 6 ಜೆಸಿಬಿ ಯಂತ್ರಗಳನ್ನು ಬಳಸಿ ಫಿಲ್ಟರ್ ತೊಟ್ಟಿಗಳನ್ನು ನಾಶಪಡಿಸಲಾಯಿತು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.