ಮಾಡಬಾಳ್(ಮಾಗಡಿ): ಹಂಚಿಕುಪ್ಪೆ ಸರ್ವೆ ನಂಬರ್ 76ರ ಬೆಟ್ಟದಲ್ಲಿ ಕ್ವಾರಿ ಮತ್ತು ಕ್ರಷರ್ಗೆ ಮತ್ತೆ ಪರವಾನಗಿ ನವೀಕರಿಸಬಾರದು ಎಂದು ರೈತ ಮುಖಂಡ ಗವಿನಾಗಮಂಗಲದ ರಾಮಚಂದ್ರಯ್ಯ ಮನವಿ ಮಾಡಿದರು.
ಹಿಂದೆ ಮುಖ್ಯಮಂತ್ರಿ ಜನತಾ ದರ್ಶನದಲ್ಲಿ ಕ್ರಷರ್ನಿಂದಾಗಿ ರೈತರ ಬೆಳೆ ಮತ್ತು ದನಕರುಗಳ ಮೇವಿಗೆ ತೊಂದರೆಯಾಗಿದೆ ಎಂದು ಸಲ್ಲಿಸಿದ್ದ ಮನವಿ ಮೇರೆಗೆ ಗುರುವಾರ ಅಲ್ಲಿಗೆ ಭೇಟಿ ನೀಡಿದ ಅಧಿಕಾರಿಗಳ ಮುಂದೆ ದಾಖಲೆಗಳನ್ನು ತೋರಿಸಿ ಮಾತನಾಡಿದರು.
ಕ್ರಷರ್ನ ಸಿಡಿಮದ್ದು ಹಾಗೂ ದೂಳಿನಿಂದಾಗಿ ಬೆಟ್ಟದ ತಪ್ಪಲಿನಲ್ಲಿ ಇರುವ ರೈತರ ಮಾವಿನ ಮರಗಳಲ್ಲಿ ಕಾಯಿ ಕಚ್ಚದಂತಾಗಿದೆ. ಹೊಲಗಳ ಮೇಲೆ ದೂಳು ತುಂಬಿದ್ದು, ನಷ್ಟ ಅನುಭವಿಸುತ್ತಿದ್ದಾರೆ. ಜಿಕೆವಿಕೆಯ ನುರಿತ, ತಜ್ಞ ಕೃಷಿ ವಿಜ್ಞಾನಿಗಳನ್ನು ಸ್ಥಳಕ್ಕೆ ಕರೆಯಿಸಿ ಅವರಿಂದ ಕ್ರಷರ್ನಿಂದಾಗುವ ತೊಂದರೆಗಳ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿದರು.
ರೈತರಾದ ರಂಗನರಸಿಂಹಯ್ಯ, ಚಿಕ್ಕಣ್ಣ,ಲಿಂಗರಾಜ್, ರಾಜಗೋಪಾಲ್, ರವಿಕುಮಾರ್, ನಂಜುಂಡಯ್ಯ, ಕಪನಯ್ಯ ಕ್ರಷರ್ಗೆ ಭೇಟಿ ನೀಡಿದ್ದ ಅಧಿಕಾರಿಗಳ ಮುಂದೆ ಸಮಸ್ಯೆಗಳನ್ನು ಬಿಚ್ಚಿಟ್ಟರು.
ದುರಸ್ತಿಗೆ ಕ್ರಮ: ಕ್ರಷರ್ನ ಪಾಲುದಾರ ದಂಡೇನಹಳ್ಳಿ ಅಶ್ವಥ್ ಮಾತನಾಡಿ, ಕ್ರಷರ್ನಿಂದಾಗಿ ಸುತ್ತಲಿನ ರೈತರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಹದಗೆಟ್ಟ ರಸ್ತೆ ದುರಸ್ತಿಪಡಿಸಲಾಗುವುದು. ಕ್ರಷರ್ಗೆ ನೀಡಿದ್ದ ಪರವಾನಗಿ ಮೇ.31ರಂದು ಮುಗಿಯಲಿದೆ. ಚುನಾವಣೆ ನಂತರ ಅನುಮತಿ ಸಿಗಲಿದೆ. ಬೆಳೆ ಹಾನಿಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದರು.
ಚಕಮಕಿ: ಅಧಿಕಾರಿಗಳ ಎದುರಿನಲ್ಲಿಯೇ ರೈತ ಮುಖಂಡ ರಾಮಚಂದ್ರಯ್ಯ ಮತ್ತು ಕ್ರಷರ್ನ ಪಾಲುದಾರ ಅಶ್ವಥ್ ನಡುವೆ ಮಾತಿನ ಚಕಮಕಿ ನಡೆಯಿತು.
ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ರಾಮಲಿಂಗಯ್ಯ, ಪರಿಸರ ಇಲಾಖೆಯ ಅಧಿಕಾರಿ ಲೋಕೇಶ್.ಎಚ್.ಕೆ, ತೋಟಗಾರಿಕಾ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ನಾಗರಾಜು, ಚಂದೂರಾಯನಹಳ್ಳಿ ಕೃಷಿ ವಿಜ್ಞಾನ ಕೇಂದ್ರದ ಕೃಷಿ ವಿಜ್ಞಾನ ಡಾ.ದಿನೇಶ್, ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ. ವರದರಾಜು, ಕಂದಾಯ ಇಲಾಖೆ ಅಲೆಗ್ಸಾಂಡರ್ ಹಂಚಿಕುಪ್ಪೆ ಕ್ರಷರ್ನ ಸುತ್ತಲಿನ ಮಾವಿನ ತೋಟಗಳಲ್ಲಿ ಪರಿಶೀಲನೆ ನಡೆಸಿದರು. ಮೇಲಧಿಕಾರಿಗಳಿಗೆ ವರದಿ ಸಲ್ಲಿಸುವುದಾಗಿ ತಿಳಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.