ರಾಮನಗರ: ಆದ್ಯತಾ ವಲಯಗಳ ಜನರಿಗೆ ಕೋವಿಡ್ ಲಸಿಕೆ ನೀಡುವ ಕಾರ್ಯಕ್ರಮದ ಅಣಕು ಕಾರ್ಯಾಚರಣೆಗೆ ಜಿಲ್ಲೆಯ ಆರೋಗ್ಯ ಇಲಾಖೆಯು ಸಿದ್ಧತೆ ಮಾಡಿಕೊಂಡಿದೆ.
ಜಿಲ್ಲೆಯ ಎಂಟು ಆಸ್ಪತ್ರೆಗಳಲ್ಲಿ ಈ ‘ಡ್ರೈ ರನ್’ ಕಾರ್ಯಾಚರಣೆಯು ಶುಕ್ರವಾರ ನಡೆಯಲಿದೆ. ಬೆಳಿಗ್ಗೆ 11ಕ್ಕೆ ಜಿಲ್ಲಾಸ್ಪತ್ರೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಕೋವಿಡ್ ಲಸಿಕೆ ಪೂರೈಕೆಯಾದ ಸಂದರ್ಭ ಅದನ್ನು ಹೇಗೆ ಬಳಸಬೇಕು ಎಂಬುದರ ಪೂರ್ವಸಿದ್ಧತೆ ಕಾರ್ಯಕ್ರಮವು ಇದಾಗಿದೆ. ಪ್ರತಿ ಆಸ್ಪತ್ರೆಯಲ್ಲಿ ಲಸಿಕೆ ವಿತರಣೆಗೆ 25 ಸಿಬ್ಬಂದಿಯನ್ನು ಗುರುತಿಸಲಾಗಿದ್ದು, ಅವರಿಗೆ ಈಗಾಗಲೇ ಅಗತ್ಯ ತರಬೇತಿ ನೀಡಲಾಗಿದೆ.
ಹೇಗಿರಲಿದೆ ಕಾರ್ಯಾಚರಣೆ: ಇಂಜೆಕ್ಷನ್ ರೂಪದ ಲಸಿಕೆ ನೀಡುವುದು ಒಂದನ್ನು ಬಿಟ್ಟು ಉಳಿದೆಲ್ಲ ಹಂತದ ಪ್ರಕ್ರಿಯೆಗಳನ್ನು ಈ ಅಣಕು ಕಾರ್ಯಾಚರಣೆಯಲ್ಲಿ ಅನುಸರಿಸಲಾಗುತ್ತದೆ. ಇಂಜೆಕ್ಷನ್ ತೆಗೆದುಕೊಳ್ಳಲು ತೆರಳುವ ವ್ಯಕ್ತಿಯನ್ನು ಹೇಗೆ ಉಪಚರಿಸಬೇಕು. ಹೆಸರು ನೋಂದಣಿ, ದೇಹದ ಉಷ್ಣಾಂಶ ಪರೀಕ್ಷೆ, ಇಂಜೆಕ್ಷನ್ ನೀಡಿದ ನಂತರ ಕೊಠಡಿಯಲ್ಲಿ ಅರ್ಧತಾಸು ಇರುವ ತನಕ ಯಾವ ಪ್ರಕ್ರಿಯೆ ನಡೆಸಲಾಗುತ್ತದೆ ಎಂಬುದನ್ನು ಇಲ್ಲಿ ತೋರಿಸಲಾಗುತ್ತದೆ. ಒಂದೊಮ್ಮೆ ಇಂಜೆಕ್ಷನ್ ನೀಡಿದ ಬಳಿಕ ವ್ಯಕ್ತಿಯ ದೇಹದಲ್ಲಿ ಬದಲಾವಣೆ ಆದಲ್ಲಿ, ಯಾವ ರೀತಿ ಉಪಚಾರ ನೀಡಬೇಕು ಎಂಬುದನ್ನೂ ಈ ಸಂದರ್ಭ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದರು.
ಎಲ್ಲೆಲ್ಲಿ ಕಾರ್ಯಾಚರಣೆ
ರಾಮನಗರ: ಜಿಲ್ಲಾಸ್ಪತ್ರೆ, ರಾಮಕೃಷ್ಣ ಆಸ್ಪತ್ರೆ.
ಮಾಗಡಿ: ಸೋಲೂರು ಸಮುದಾಯ ಆರೋಗ್ಯ ಕೇಂದ್ರ
ಚನ್ನಪಟ್ಟಣ: ತಾಲ್ಲೂಕು ಸಾರ್ವಜನಿಕ ಆಸ್ಪತ್ರೆ, ಇಗ್ಗಲೂರು ಪ್ರಾಥಮಿಕ ಆರೋಗ್ಯ ಕೇಂದ್ರ
ಕನಕಪುರ: ದಯಾನಂದ್ ಸಾಗರ್ ಮೆಡಿಕಲ್ ಕಾಲೇಜು, ಹಾರೋಹಳ್ಳಿ ಸಮುದಾಯ ಆರೋಗ್ಯ ಕೇಂದ್ರ, ಕನಕಪುರ ನಗರ ಆರೋಗ್ಯ ಕೇಂದ್ರ.
*
ಕೋವಿಡ್ ಡ್ರೈ ರನ್ ಪ್ರಕ್ರಿಯೆಗೆ ಜಿಲ್ಲೆಯ ಎಂಟು ಆಸ್ಪತ್ರೆಗಳನ್ನು ಗುರುತಿಸಲಾಗಿದೆ. ಪ್ರತಿ ಕೇಂದ್ರದಲ್ಲೂ 25 ಸಿಬ್ಬಂದಿ ಇರಲಿದ್ದಾರೆ.
-ಡಾ.ಪದ್ಮಾ, ಆರ್ಸಿಎಚ್ ಅಧಿಕಾರಿ, ಆರೋಗ್ಯ ಇಲಾಖೆ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.