ಚನ್ನಪಟ್ಟಣ: ಅಧ್ಯಾಪಕ ವೃತ್ತಿ ಶ್ರೇಷ್ಠವಾದುದ್ದು, ಆ ವೃತ್ತಿಯಲ್ಲಿ ಸಿಗುವ ನೆಮ್ಮದಿ, ಸಂತೋಷ, ವಿದ್ಯಾರ್ಥಿಗಳ ಒಡನಾಟ ಬದುಕಿನ ಇಳಿ ವಯಸ್ಸಿನಲ್ಲೂ ಮುದ ನೀಡುತ್ತದೆ ಎಂದು ಪ್ರೊ. ಪಿ.ಎನ್. ಲಲಿತಾ ಅಭಿಪ್ರಾಯಪಟ್ಟರು.
ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 36 ವರ್ಷ ಕಾರ್ಯ ನಿರ್ವಹಿಸಿ ನಿವೃತ್ತರಾದ ಲಲತಾ ಅವರಿಗೆ ಬುಧವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.
ಅಧ್ಯಾಪಕ ವೃತ್ತಿಯನ್ನು ಪ್ರೀತಿಸುತ್ತೇನೆ. ವಿದ್ಯಾರ್ಥಿಗಳೊಟ್ಟಿಗೆ ಬೆರೆಯುವುದೆಂದರೆ ಅದೊಂದು ದೊಡ್ಡ ಗೌರವವಿದ್ದಂತೆ ಎಂದು ಬಣ್ಣಿಸಿದರು.
ಮೂಡಿಗೆರೆಯ ಕಾಲೇಜಿನಲ್ಲಿ ಉಪನ್ಯಾಸಕರಗಿದ್ದ ಸಂದರ್ಭದಲ್ಲಿ ಸಾಹಿತಿ ಪೂರ್ಣಚಂದ್ರ ತೇಜಸ್ವಿ ಅವರನ್ನು ಭೇಟಿ ಮಾಡಿ ಅವರ ಜೊತೆ ಕಳೆದ ಕ್ಷಣಗಳನ್ನು ಮೆಲುಕು ಹಾಕಿದ ಅವರು, ಸದಾ ಚಟುವಟಿಕೆಯಿಂದ ಇರುವ ಉಪನ್ಯಾಸಕ ವೃತ್ತಿಯಲ್ಲಿ ವಿದ್ಯಾರ್ಥಿಗಳಿಗೆ ಹಿತಭೋದನೆ ಮಾಡುವ ಅವಕಾಶ ಸಿಗುತ್ತದೆ. ಇಂತಹ ವೃತ್ತಿಯನ್ನು ಎಲ್ಲರೂ ಪ್ರೀತಿಸುತ್ತಾರೆ ಎಂದರು.
ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ. ಭರತ್ ರಾಜ್ ಮಾತನಾಡಿ, ‘ಸದಾ ಓದು, ವಿಭಾಗದಲ್ಲಿ ಅಚ್ಚುಕಟ್ಟಿನ ಕಾರ್ಯನಿರ್ವಹಣೆ, ಅಪಾರ ಜ್ಞಾನ ಹೊಂದಿದ್ದ ಲಲಿತಾ ಅವರ ನಿವೃತ್ತಿಯಾಗುತ್ತಿರುವುದು ನಮ್ಮ ಕಾಲೇಜಿನ ವಿದ್ಯಾರ್ಥಿಗಳಿಗೆ ತುಂಬಲಾರದ ಕೊರತೆ. ಅವರು ನಿವೃತ್ತ ಜೀವನವನ್ನು ಚಟುವಟಿಕೆಯಿಂದ ಕಳೆಯಲಿ’ ಎಂದು ಆಶಿಸಿದರು.
ಕಾಲೇಜಿನ ಪ್ರಾಂಶುಪಾಲ ಡಾ. ವೆಂಕಟೇಶ್ ಅಧ್ಯಕ್ಷತೆ ವಹಿಸಿದ್ದರು. ಅಧ್ಯಾಪಕ ಕಾರ್ಯದರ್ಶಿ ಡಾ. ಜಿ.ಎಂ. ಜಯರಾಮಯ್ಯ, ಖಜಾಂಚಿ ಪ್ರೊ. ಜೆ.ನಾಗರಾಜು, ಕನ್ನಡ ವಿಭಾಗದ ಪ್ರೊ. ಪದ್ಮನಾಭ್ ಹಾಜರಿದ್ದರು. ಡಾ. ಬಿ.ಟಿ. ನೇತ್ರಾವತಿ ಗೌಡ ಸ್ವಾಗತಿಸಿದರು. ಡಾ. ಅಣ್ಣಯ್ಯ ತೈಲೂರು, ಪ್ರೊ. ಪಿ.ಎನ್.ಲಲಿತಾ ಅವರು ನಿರೂಪಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.