ADVERTISEMENT

ಗ್ರಾಮೀಣ ಕ್ರೀಡೆಗಳಿಗೆ ಉತ್ತೇಜನ ನೀಡಿ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2020, 14:13 IST
Last Updated 12 ಫೆಬ್ರುವರಿ 2020, 14:13 IST
ಚನ್ನಪಟ್ಟಣದಲ್ಲಿ ನಡೆದ ಗಿರೆಬಾಜಿ ಪಾರಿವಾಳ ಹಾರಾಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ರಮೇಶ್‌ಗೌಡ ಉದ್ಘಾಟಿಸಿದರು
ಚನ್ನಪಟ್ಟಣದಲ್ಲಿ ನಡೆದ ಗಿರೆಬಾಜಿ ಪಾರಿವಾಳ ಹಾರಾಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ರಮೇಶ್‌ಗೌಡ ಉದ್ಘಾಟಿಸಿದರು   

ಚನ್ನಪಟ್ಟಣ: ‘ಈಚಿನ ದಿನಗಳಲ್ಲಿಗ್ರಾಮೀಣ ಸ್ಪರ್ಧೆಗಳು ಕಡಿಮೆಯಾಗುತ್ತಿದ್ದು, ಇದಕ್ಕೆ ಉತ್ತೇಜನ ನೀಡುವ ಅಗತ್ಯವಿದೆ’ ಎಂದು ಕಸ್ತೂರಿ ಕರ್ನಾಟಕ ಜನಪರ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ರಮೇಶ್‌ಗೌಡ ಅಭಿಪ್ರಾಯಪಟ್ಟರು.

ಇಲ್ಲಿನ ರತ್ನಮಹಲ್ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಟಾಪ್ ಆಫ್ ಒನ್ ಗಿರೆಬಾಜಿ ಪಾರಿವಾಳ ಹಾರಾಟ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಪಾರಿವಾಳ ಸಾಕುವ ಹವ್ಯಾಸ ಹಾಗೂ ಹಾರಿಸುವ ಸ್ಪರ್ಧೆ ಈಚಿನ ವರ್ಷಗಳಲ್ಲಿ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಪಾರಿವಾಳ ಸಾಕಿ, ಅವುಗಳನ್ನು ಹೇಳಿದಂತೆ ಕೇಳುವ ರೀತಿಯಲ್ಲಿ ಪಳಗಿಸುವುದು ಒಂದು ಕಲೆ. ಪಾರಿವಾಳ ಶಾಂತಿಯ ಸಂಕೇತ. ಪಾರಿವಾಳ ಹಾರಾಟ ಸ್ಪರ್ಧೆಯಲ್ಲಿ ಎಲ್ಲ ಸಮುದಾಯದವರೂ ಭಾಗವಹಿಸುವುದು ಸೌಹಾರ್ದ‌ತೆಯ ಧ್ಯೋತಕ’ ಎಂದರು.

ADVERTISEMENT

ಕಾಂಗ್ರೆಸ್ ಮುಖಂಡರಾದ ಆರ್.ನವ್ಯಶ್ರೀ ಮಾತನಾಡಿ, ‘ರಾಜ ಮಹಾರಾಜರ ಕಾಲದಿಂದಲೂ ಪಾರಿವಾಳ ಹಾರಾಟ ಸ್ಪರ್ಧೆಗೆ ತನ್ನದೇ ಆದ ಇತಿಹಾಸವಿದೆ. ಇದನ್ನು ಮರೆಯಾಗಲು ಬಿಡದೆ ವಿವಿಧ ಜಿಲ್ಲೆಗಳ ಪಾರಿವಾಳ ಹಾರಾಟಗಾರರನ್ನು ಆಹ್ವಾನಿಸಿ, ಸ್ಪರ್ಧೆ ಆಯೋಜನೆ ಮಾಡಿ, ಕಲೆಯನ್ನು ಜೀವಂತವಾಗಿರಿಸಿರುವುದು ಒಳ್ಳೆಯ ಬೆಳವಣಿಗೆ’ ಎಂದರು.

ಹಿರಿಯ ಮುಖಂಡ ಪೇಟೆ ಬಷೀರ್ ಮಾತನಾಡಿ, ‘ಪಾರಿವಾಳ ಸ್ಪರ್ಧೆಯನ್ನು ಪ್ರತಿವರ್ಷ ಆಯೋಜನೆ ಮಾಡಿಕೊಂಡು ಬರಲಾಗುತ್ತಿದೆ. ಉತ್ತಮ ಸ್ಪರ್ಧಿಗಳನ್ನು ರೂಪಿಸುತ್ತಾ ಬರಲಾಗಿದೆ. ಹಾಗೆಯೇ ಸ್ಪರ್ಧೆಗೆ ಸಾಕಷ್ಟು ಪ್ರಾಯೋಜಕರೂ ಪ್ರೋತ್ಸಾಹ ನೀಡುತ್ತಿದ್ದಾರೆ. ಮುಂದೆಯೂ ಈ ಸ್ಪರ್ಧೆ ಹೆಚ್ಚಿನ ಪ್ರಮಾಣದಲ್ಲಿ ಮುಂದುವರೆಸಿಕೊಂಡು ಹೋಗಬೇಕು’ ಎಂದರು.

ಮುಖಂಡರಾದ ರಾಮನಗರ ಬಷೀರ್, ಪೈಲ್ವಾನ್ ಅಕ್ರಂ, ಬೆಂಗಳೂರು, ಮಂಡ್ಯ ಸೇರಿದಂತೆ ವಿವಿಧೆಡೆಯಿಂದ ಆಗಮಿಸಿದ್ದ ಸ್ಪರ್ಧಿಗಳು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.