ADVERTISEMENT

ಮಾಗಡಿ: ಭೂಸ್ವಾಧೀನ ವಿರೋಧಿಸಿ ಪ್ರತಿಭಟನೆ

ಭೂಸ್ವಾಧೀನ ಆದೇಶ ಹಿಂಪಡೆಯಲು ಸರ್ಕಾರಕ್ಕೆ ರೈತರ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2022, 4:10 IST
Last Updated 17 ಆಗಸ್ಟ್ 2022, 4:10 IST
ಮಾಗಡಿಯ ಶಿವನಸಂದ್ರ ಗ್ರಾಮದ ಜಮೀನುಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ವಶಪಡಿಸಿಕೊಳ್ಳುವುದರ ರೈತ ಮಹಿಳೆಯರು ತಹಶೀಲ್ದಾರ್‌ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು
ಮಾಗಡಿಯ ಶಿವನಸಂದ್ರ ಗ್ರಾಮದ ಜಮೀನುಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ವಶಪಡಿಸಿಕೊಳ್ಳುವುದರ ರೈತ ಮಹಿಳೆಯರು ತಹಶೀಲ್ದಾರ್‌ ಕಚೇರಿಯ ಮುಂದೆ ಪ್ರತಿಭಟನೆ ನಡೆಸಿದರು   

ಮಾಗಡಿ: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ವತಿಯಿಂದ ಶಿವನಸಂದ್ರ ಹಾಗೂ ಇನ್ನಿತರ ಗ್ರಾಮಗಳ ಜಮೀನು ಸ್ವಾಧೀನ ವಿರೋಧಿಸಿ ರೈತರು ಮಂಗಳವಾರ ತಹಶೀಲ್ದಾರ್ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ಜೊತೆಗೆ ಜಮೀನಿನ ಪಹಣಿಯ ಕಾಲಂ 11ರಲ್ಲಿ ಕೆ.ಐ.ಎ.ಡಿ.ಬಿ.ಗೆ ಭೂಸ್ವಾಧೀನ ಎಂದು ನಮೂದಿಸಲು ಸೂಚಿಸಿರುವ ಆದೇಶವನ್ನು ಹಿಂಪಡೆಯಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.

ತಾಲ್ಲೂಕು ರೈತ ಸಂಘ ಹಾಗೂ ಹಸಿರು ಸೇನೆಯ ಅಧ್ಯಕ್ಷ ಹೊಸಪಾಳ್ಯ ಲೋಕೇಶ್‌ ಮಾತನಾಡಿ, ಕುದೂರು ಹೋಬಳಿಯ ನಾರಸಂದ್ರ, ತಿಪ್ಪಸಂದ್ರಹೋಬಳಿಯ ಶಿವನಸಂದ್ರ, ಆರನಕಟ್ಟೆ ಪಾಳ್ಯದ ರೈತರ ಜಮೀನುಗಳನ್ನು ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿ ಬಲವಂತವಾಗಿ ಭೂಮಿ ವಶಪಡಿಸಿಕೊಳ್ಳುವುದು ಬೇಡ ಎಂದು ಹೇಳಿದರು.

ADVERTISEMENT

ರೈತರು ತಮ್ಮ ಜಮೀನುಗಳಲ್ಲಿ ತೋಟ ಮಾಡಿಕೊಂಡು, ಜೀವನ ನಡೆಸುತ್ತಿದ್ದಾರೆ. ರೈತರ ಫಲವತ್ತಾದ ಭೂಮಿಯನ್ನು ಕೈಗಾರಿಕೆ ಸ್ಥಾಪನೆಗೆ ವಶಕ್ಕೆ ಪಡೆಯಬಾರದು. ಇದರ ಬದಲಾಗಿ ವ್ಯವಸಾಯಕ್ಕೆ ಯೋಗ್ಯವಲ್ಲದ ಗೋಮಾಳ ಜಮೀನು ಇದ್ದರೆ ಅಲ್ಲಿ ಕೈಗಾರಿಕೆ ಆರಂಭಿಸಲಿ. ಒಂದು ವೇಳೆ ರೈತರ ಜಮೀನುಗಳನ್ನು ಕಿತ್ತುಕೊಳ್ಳಲು ಮುಂದಾದರೆ, ಉಗ್ರ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಮರೂರು ಸಾಗರ್‌ ಮಾತನಾಡಿ, ‘ನಮ್ಮ ಪಿತ್ರಾರ್ಜಿತ ಜಮೀನಿನಲ್ಲಿ ಬೆಲೆಬಾಳುವ ಅಡಿಕೆ, ತೆಂಗು ಇತರೆ ತೋಟದ ಬೆಳೆಗಳಿವೆ. ಕೈಗಾರಿಕೆ ಸ್ಥಾಪನೆಗೆ ನಮ್ಮ ಫಲವತ್ತಾದ ಭೂಮಿಯನ್ನು ಕಿತ್ತುಕೊಳ್ಳುವುದರ ವಿರುದ್ಧ ಹೋರಾಟ ಮಾಡುತ್ತೇವೆ. ಪಹಣಿಯ ಕಾಲಂ 11ರಲ್ಲಿ ಕೆ.ಐ.ಎ.ಡಿ.ಬಿಗೆ ಭೂಸ್ವಾಧೀನ ಎಂದು ನಮೂದಿಸಲು ಸೂಚಿಸಿರುವ ಆದೇಶವನ್ನು ಸರ್ಕಾರ ಈ ಕೂಡಲೇ ಹಿಂದಕ್ಕೆ ಪಡೆಯಬೇಕು’ ಎಂದು ಆಗ್ರಹಿಸಿದರು.

ಮರೂರು ಬಾಬು, ಗ್ರಾಮಪಂಚಾಯಿತಿ ಸದಸ್ಯರಾದ ಸಾಗರ್‌ ಗೌಡ, ಶ್ರೀನಿವಾಸ್‌, ಜಯರಾಮೇಗೌಡ, ವಿಶಾಲ, ಮಂಜುಳ, ಶಂಕ್ರಪ್ಪ, ಮುನಿರಾಜು, ಶಿವಪ್ರಸಾದ್‌, ಮಂಜುನಾಥ್‌, ಮರೂರು ಶಿವಕುಮಾರ್‌ ಮಾತನಾಡಿದರು.

ತಹಶೀಲ್ದಾರ್‌ ಶ್ರೀನಿವಾಸ್‌ ಪ್ರಸಾದ್‌ ಅವರಿಗೆ ಮನವಿ ಸಲ್ಲಿಸಿದರು. ರೈತರು ಮತ್ತು ರೈತ ಮಹಿಳೆಯರು ಇದ್ದರು.

ಈ ವೇಳೆ ಎಎಸ್‌ಐ ಮಂಜುನಾಥ್‌ ನೇತೃತ್ವದಲ್ಲಿ ಸೂಕ್ತ ಪೊಲೀಸ್‌ ಬಂದೋಬಸ್ತ್‌ ಏರ್ಪಡಿಸ
ಲಾಗಿತ್ತು. ಪ್ರಾಣಕೊಟ್ಟರೂ, ಸರಿ ಭೂಮಿ ಕೊಡುವುದಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.