ADVERTISEMENT

ಬಯಲು ಸೀಮೆಗೆ ಶಾಶ್ವತ ನೀರು ಒದಗಿಸಿ

ಜಲಸಂಪನ್ಮೂಲ ಸಚಿವ ರಮೇಶ್‌ ಜಾರಕಿಹೊಳಿ ಭೇಟಿ: ಒತ್ತಡ ಹೇರಲು ನಿರ್ಧಾರ

​ಪ್ರಜಾವಾಣಿ ವಾರ್ತೆ
Published 14 ಸೆಪ್ಟೆಂಬರ್ 2020, 8:28 IST
Last Updated 14 ಸೆಪ್ಟೆಂಬರ್ 2020, 8:28 IST
ಗಣೇಶ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಎಸ್.ಜಗನ್ನಾಥ್‌ ಮಾತನಾಡಿದರು
ಗಣೇಶ ದೇವಸ್ಥಾನದಲ್ಲಿ ನಡೆದ ಸಭೆಯಲ್ಲಿ ಎಸ್.ಜಗನ್ನಾಥ್‌ ಮಾತನಾಡಿದರು   

ಕನಕಪುರ: ನಾಲ್ಕು ಜಿಲ್ಲೆಗಳ ಕುಡಿಯುವ ನೀರು ಹಾಗೂ ನೀರಾವರಿ ಸಮಸ್ಯೆ ನೀಗಿಸುವ ಮಹತ್ವಾಕಾಂಕ್ಷೆ ಮೇಕೆದಾಟು ಜಲಾಶಯ ಯೋಜನೆ ಕೈಗೆತ್ತಿಕೊಳ್ಳಬೇಕು. ಮೇಕೆದಾಟು ಹೋರಾಟ ಸಮಿತಿ ಪದಾಧಿಕಾರಿಗಳು ಆಗ್ರಹಿಸಿದರು.

ಇಲ್ಲಿನ ಕೋಟೆ ಗಣೇಶ ದೇವಸ್ಥಾನದಲ್ಲಿ ಮೇಕೆದಾಟು ಹೋರಾಟ ಸಮಿತಿ, ರೈತ ಸಂಘ ಹಾಗೂ ವಿವಿಧ ಕನ್ನಡಪರ ಸಂಘಟನೆ ಆಶ್ರಯದಲ್ಲಿ ಭಾನುವಾರ ನಡೆಸಿದ ಸಭೆಯಲ್ಲಿ ಮೇಕೆದಾಟು ಜಲಾಶಯ ನಿರ್ಮಾಣ ಸಂಬಂಧ ಚರ್ಚೆ ನಡೆಸಿ ಮಾತನಾಡಿದರು.

ತಾಲ್ಲೂಕಿನ ಸಂಗಮ ಬಳಿ ಕಾವೇರಿ ನದಿಗೆ ಮೇಕೆದಾಟು ಬಳಿ ನಿರ್ಮಾಣ ಮಾಡಲು ಉದ್ದೇಶಿಸಿರುವ ಮೇಕೆದಾಟು ಜಲಾಶಯ ನಿರ್ಮಾಣ ಆಗಬೇಕೆಂದು 5 ವರ್ಷಗಳಿಂದ ತಾಲ್ಲೂಕಿನ ಮಠಾಧೀಶರ ನೇತ್ವತ್ವದಲ್ಲಿ ಹೋರಾಟ ನಡೆಸುತ್ತಾ ಬರಲಾಗಿದೆ. ಜಲಾಶಯ ನಿರ್ಮಾಣ ಆಗಲೇಬೇಕೆಂದು ಹೋರಾಟ ನಡೆಸಿ ಸರ್ಕಾರದ ಗಮನ ಸೆಳೆಯಲಾಗಿದೆ. ಈ ಹಿಂದಿನ ಜೆಡಿಎಸ್‌ – ಕಾಂಗ್ರೆಸ್‌ ಮೈತ್ರಿ ಸರ್ಕಾರದಲ್ಲಿ ಮುಖ್ಯಮಂತ್ರಿ ಎಚ್‌‌.ಡಿ.ಕುಮಾರಸ್ವಾಮಿ ಅವರು ₹5,912ಕೋಟಿ ವೆಚ್ಚದಲ್ಲಿ ಜಲಾಶಯ ನಿರ್ಮಾಣಕ್ಕೆ ಒಪ್ಪಿಗೆ ನೀಡಿದ್ದರು. ಅಂದಿನ ಜಲಸಂಪನ್ಮೂಲ ಸಚಿವರು ಕ್ಷೇತ್ರದ ಶಾಸಕರು ಆದ ಡಿ.ಕೆ.ಶಿವಕುಮಾರ್‌ ಅವರು ಯೋಜನೆ ತಮ್ಮ ಸರ್ಕಾರದಲ್ಲಿ ಅನುಷ್ಠಾನಗೊಳಿಸುವುದಾಗಿ ಭರವಸೆ ನೀಡಿ ಪ್ರಯತ್ನಿಸಿದ್ದರು. ಆದರೆ, ಸರ್ಕಾರ ಪತನವಾದ ಬಳಿಕ ಉದ್ದೇಶಿತ ಯೋಜನೆ ಅನುಷ್ಠಾನಕ್ಕೆ ಬರಲೇ ಇಲ್ಲ ಎಂದು ದೂರಿದರು.

ADVERTISEMENT

ಕನಕಪುರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಎಸ್‌.ಜಗನ್ನಾಥ್‌ ಮಾತನಾಡಿ, ಮೇಕೆದಾಟು ಜಲಾಶಯ ನಿರ್ಮಾಣ ಮಾಡುವ ಉದ್ದೇಶದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲ ಎಂದರು.

ಯೋಜನೆ ಬಗ್ಗೆ ಉಪಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಅಶ್ವತ್ಥ್‌ನಾರಾಯಣ್‌ ಅವರು ಜಲಾಶಯ ನಿರ್ಮಾಣ ಸಂಬಂಧ ಈಗಾಗಲೇ 3 ಬಾರಿ ಸಭೆ ನಡೆಸಿ ಯೋಜನೆ ಸಂಬಂಧ ಚರ್ಚೆ ನಡೆಸಿದ್ದಾರೆ.

ಈ ಯೋಜನೆ ಅನುಷ್ಠಾನದ ವಿಚಾರದಲ್ಲಿ ತಾಲ್ಲೂಕಿನ ಎಲ್ಲ ಜನರು ಪಕ್ಷಬೇಧ ಮರೆತು ಎಲ್ಲರೂ ಒಟ್ಟಾಗಿ ಹೋರಾಟ ನಡೆಸಿ ಬೆಂಬಲ ನೀಡಲಿದ್ದಾರೆ. ಅದಕ್ಕೆ ಪಕ್ಷ ಸಂಪೂರ್ಣ ಸಹಕಾರ ನೀಡಲಿದೆ ಎಂದರು.

ಮೇಕೆದಾಟು ಹೋರಾಟ ಸಮಿತಿ ಪದಾಧಿಕಾರಿಗಳಾದ ಸಂಪತ್‌ಕುಮಾರ್‌, ಹಾರೋಹಳ್ಳಿ ಮಲ್ಲಪ್ಪ, ಎಂ.ಡಿ.ಶಿವಕುಮಾರ್‌, ಲಾಯರ್‌ ನಂಜೇಗೌಡ, ಒಕ್ಕಲಿಗರ ಒಕ್ಕೂಟ ರಾಜ್ಯ ಸಂಘಟನಾ ಕಾರ್ಯದರ್ಶಿ ಗಬ್ಬಾಡಿ ಕಾಡೇಗೌಡ, ರೈತ ಮುಖಂಡ ದೇವರಾಜು, ಬಿಜೆಪಿಯ ಅನಂದಪೈ, ಶಿವರಾಜು, ಶಿವಲಿಂಗಯ್ಯ, ಆಟೊ ಕುಮಾರ್‌, ರವೀಂದ್ರಬಾಬು, ಕೋಟೆ ಮಂಜು, ಪ್ರದೀಪ, ಪವಿತ್ರ ಸೇರಿದಂತೆ ಅನೇಕರು ಸಭೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.