ಕೋಡಿಹಳ್ಳಿ ಗ್ರಾಮದಲ್ಲಿ ನೂರಾರು ಸಂಖ್ಯೆಯಲ್ಲಿ ಪುನೀತ್ ಅಭಿಮಾನಿಗಳು ಸೇರಿ 11ನೇ ದಿನದ ತಿಥಿ ಕಾರ್ಯ ಮಾಡಿದರು
ಕನಕಪುರ: ನಟ ಪುನೀತ್ ರಾಜ್ಕುಮಾರ್ ಅವರ 11ನೇ ದಿನದ ತಿಥಿ ಕಾರ್ಯವು ತಾಲ್ಲೂಕಿನ ಪ್ರತಿ ಗ್ರಾಮಗಳಲ್ಲೂ ನಡೆಯಿತು.
ತಮ್ಮ ನೆಚ್ಚಿನ ನಟನನ್ನು ಕಳೆದುಕೊಂಡಿರುವ ಅಭಿಮಾನಿಗಳು ತಮ್ಮ ಮನೆಯ ಸದಸ್ಯನೊಬ್ಬನನ್ನು ಕಳೆದುಕೊಂಡ ರೀತಿಯಲ್ಲಿ 11ನೇ ದಿನದ ಕಾರ್ಯ ನೆರವೇರಿಸಿದರು.ಕೆಲವೆಡೆ ಭಾನುವಾರವೇ ತಿಥಿ ಕಾರ್ಯ ನೆರವೇರಿಸಿದ ಅಭಿಮಾನಿಗಳು, ಪುನೀತ್ ಅವರಿಗೆ ಇಷ್ಟವಾದ ಮಾಂಸಾಹಾರ ಮತ್ತು ಸಸ್ಯಾಹಾರ ಮಾಡಿ ಗ್ರಾಮದ ಜನತೆಗೆ ಉಣ ಬಡಿಸಿದ್ದಾರೆ.
ಭಾನುವಾರ ಕಾರ್ಯ ಮಾಡದವರು ಸೋಮವಾರ ತಮ್ಮ ಗ್ರಾಮಗಳಲ್ಲಿ ಹೋಬಳಿ, ಪಟ್ಟಣ, ನಗರ ಕೇಂದ್ರದಲ್ಲಿ ಪುನೀತ್ ಅವರ ದೊಡ್ಡದಾದ ಭಾವಚಿತ್ರವನ್ನಿಟ್ಟು ಅದಕ್ಕೆ ದೊಡ್ಡ ಗಾತ್ರದ ಪುಷ್ಪ ಮಾಲಿಕೆಯನ್ನು ಹಾಕಿ ಪೂಜೆ ನೆರವೇರಿಸಿದರು. ನೂರಾರು ಸಂಖ್ಯೆಯಲ್ಲಿ ಸೇರಿದ ಅಭಿಮಾನಿಗಳಿಗೆ ಅನ್ನ ಸಂತರ್ಪಣೆ ಮಾಡಲಾಯಿತು.
ಕೆಲವೆಡೆ ಅಭಿಮಾನಿ ಬಳಗದ ಸದಸ್ಯರು ಸ್ವಯಂ ಪ್ರೇರಣೆಯಿಂದ ರಕ್ತದಾನ ಶಿಬಿರ ಏರ್ಪಡಿಸಿ ಪುನೀತ್ ನೆನಪಿಗಾಗಿ ರಕ್ತದಾನ ಮಾಡಿದರು.