ರಾಮನಗರ: ತಾಲ್ಲೂಕಿನಲ್ಲಿ ಶನಿವಾರ ಮಧ್ಯಾಹ್ನ ರಾಮನಗರ ಸೇರಿದಂತೆ ವಿವಿಧೆಡೆ ಸಾಧಾರಣ ಮಳೆ ಸುರಿಯಿತು. ಬಿಸಿಲ ಬೇಗೆಯ ಜೊತೆಗೆ ಆಗಾಗ ಮೋಡ ಕವಿದ ವಾತಾವರಣವು ಕಡೆಗೂ ಮಳೆ ತಂದಿತು. ಭೂಮಿಗೆ ತಂಪೆರೆದ ಮಳೆರಾಯ, ರೈತರ ಮೊಗದಲ್ಲಿ ಸಂತಸ ಮೂಡಿಸಿದ.
ಬೆಳಿಗ್ಗೆ ಕೆಲ ಹೊತ್ತು ಇದ್ದ ಮೋಡ ಕವಿದ ವಾತಾವರಣವು ಮಳೆ ನಿರೀಕ್ಷೆಯನ್ನು ಹುಟ್ಟಿಸಿತ್ತು. ಕಡೆಗೂ ಮಧ್ಯಾಹ್ನ 3ರ ಸುಮಾರಿಗೆ ಶುರುವಾದ ಮಳೆಯು ಸುಮಾರು 30 ನಿಮಿಷ ಸಾಧಾರಣವಾಗಿ ಸುರಿದು ನಿಂತು ಹೋಯಿತು. ಕರಿಮೋಡ ಕಣ್ಮರೆಯಾಗಿ ಸೂರ್ಯನ ಕಿರಣಗಳು ಮಳೆ ಮೋಡವನ್ನು ಮರೆಗೆ ಸರಿಸಿದವು.
ಮಳೆಯಿಂದಾಗಿ ಪಾದಚಾರಿಗಳು ಹಾಗೂ ದ್ವಿಚಕ್ರ ವಾಹನ ಸವಾರರು ತೊಂದರೆ ಅನುಭವಿಸಿದರು. ಕೆಲವರು ರಸ್ತೆ ಬದಿಯ ಕಟ್ಟಡಗಳ ಬಳಿ ನಿಂತು ಆಶ್ರಯ ಪಡೆದರೆ, ಉಳಿದವರು ನೆನೆದುಕೊಂಡೇ ಮಳೆಯನ್ನು ಆನಂದಿಸಿಕೊಂಡು ನಡೆದುಕೊಂಡು ಹೋದರು. ಮಳೆ ಇಲ್ಲದೆ ಮೂಲೆ ಸೇರಿದ್ದ ಛತ್ರಿಗಳ ಸಹ ಅಲ್ಲಲ್ಲಿ ಕಣ್ಣಿಗೆ ಕಂಡವು.
‘ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಯಿಂದ ಮುಂಗಾರು ಪೂರ್ವ ಬಿತ್ತನೆಗೆ ಸ್ವಲ್ಪ ಅನುಕೂಲವಾಗಲಿದೆ. ನಿತ್ಯ ಕನಿಷ್ಠ ಒಂದು ತಾಸು ಸುರಿದರೆ ನೆಲ ಚನ್ನಾಗಿ ಹದಗೊಳ್ಳಲಿದ್ದು, ಉಳುಮೆ ಮತ್ತು ಬಿತ್ತನೆ ಕಾರ್ಯಗಳಿಗೆ ಪುಷ್ಟಿ ಸಿಗಲಿದೆ. ಕಳೆದ ವರ್ಷ ಮಳೆ ಇಲ್ಲದೆ ಭೀಕರ ಬರ ಎದುರಿಸಿದ ಜಿಲ್ಲೆಗೆ ಈ ಸಲವಾದರೂ ಮಳೆರಾಯ ಕರುಣೆ ತೋರಲಿ’ ಎಂದು ಹಳ್ಳಿಮಾಳದ ರೈತ ನಿಂಗೇಗೌಡ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.