
ರಾಮನಗರ: ಮುಂದೆ ಹೋಗುತ್ತಿದ್ದ ಹಾಲಿನ ಟ್ಯಾಂಕರ್ಗೆ ಹಿಂಬಂದಿಯಿಂದ ಡಿಕ್ಕಿ ಹೊಡೆದ ಕಾರೊಂದು ಕೆಲವೇ ಕ್ಷಣಗಳಲ್ಲೇ ಹೊತ್ತಿ ಉರಿದ ಘಟನೆ ತಾಲ್ಲೂಕಿನ ಸಂಗಬಸವನದೊಡ್ಡಿ ಗ್ರಾಮದ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದೆ. ಕಾರಿನಲ್ಲಿದ್ದವರು ಕೂಡಲೇ ಕೆಳಕ್ಕಿಳಿದು ದೂರಕ್ಕೆ ಹೋಗುವ ಮೂಲಕ ಅಪಾಯದಿಂದ ಪಾರಾಗಿದ್ದಾರೆ.
ಮೂರ್ನಾಲ್ಕು ಮಂದಿ ಇದ್ದ ಡಸ್ಟರ್ ಕಾರು ಮೈಸೂರಿನಿಂದ ಬೆಂಗಳೂರು ಕಡೆಗೆ ಹೋಗುತ್ತಿತ್ತು. ವೇಗವಾಗಿ ಹೋಗುತ್ತಿದ್ದ ಚಾಲಕ ಸಂಗಬಸವನದೊಡ್ಡಿ ಬಳಿ ನಿಯಂತ್ರಣ ಕಳೆದುಕೊಂಡು ಮುಂದೆ ಹೋಗುತ್ತಿದ್ದ ಹಾಲಿನ ಟ್ಯಾಂಕರ್ಗೆ ಗುದ್ದಿದ್ದಾನೆ. ಕೂಡಲೇ ಕಾರಿನಲ್ಲಿ ದಟ್ಟ ಹೊಗೆ ಕಾಣಿಸಿಕೊಳ್ಳತೊಡಗಿತು.
ಅಪಾಯ ಅರಿತ ಕಾರಿನಲ್ಲಿದ್ದವರು ತಕ್ಷಣ ಕೆಳಕ್ಕಿಳಿದು ದೂರಕ್ಕೆ ಓಡಿದರು. ಅದಾದ ಕೆಲವೇ ಕ್ಷಣದಲ್ಲಿ ಕಾರಿನಲ್ಲಿ ಬೆಂಕಿ ಕಾಣಿಸಿಕೊಂಡು ಹೊತ್ತಿ ಉರಿಯಿತು. ವಿಷಯ ತಿಳಿದು ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ನಂದಿಸಿದರುಉ. ಘಟನೆ ಕುರಿತು ರಾಮನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.