ADVERTISEMENT

ನಗರಸಭೆ: ಮಧ್ಯವರ್ತಿಗಳ ಕಡಿವಾಣಕ್ಕೆ ಒತ್ತಾಯ

ತುರ್ತುಸಭೆಯಲ್ಲಿ ನಗರಸಭೆ ಸದಸ್ಯರ ಆಗ್ರಹ

​ಪ್ರಜಾವಾಣಿ ವಾರ್ತೆ
Published 19 ಜೂನ್ 2025, 6:26 IST
Last Updated 19 ಜೂನ್ 2025, 6:26 IST
ಕನಕಪುರ ನಗರಸಭೆಯಲ್ಲಿ ಬುಧವಾರ ನಡೆದ ತುರ್ತು ಸಭೆಯಲ್ಲಿ ಪೌರಾಯುಕ್ತ ಎಂ.ಎಸ್.ಮಹದೇವ ಮಾತನಾಡಿದರು
ಕನಕಪುರ ನಗರಸಭೆಯಲ್ಲಿ ಬುಧವಾರ ನಡೆದ ತುರ್ತು ಸಭೆಯಲ್ಲಿ ಪೌರಾಯುಕ್ತ ಎಂ.ಎಸ್.ಮಹದೇವ ಮಾತನಾಡಿದರು   

ಕನಕಪುರ: ನಗರಸಭೆಯ ಕಂದಾಯ ಶಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗುತ್ತಿದ್ದು ಅದಕ್ಕೆ ಕಡಿವಾಣ ಹಾಕಬೇಕೆಂದು ನಗರಸಭೆ ಸದಸ್ಯರು ಒತ್ತಾಯಿಸಿದರು.

ಇಲ್ಲಿನ ನಗರಸಭೆ ಸಭಾಂಗಣದಲ್ಲಿ ಬುಧವಾರ ನಡೆದ ತುರ್ತು ಸಾಮಾನ್ಯ ಸಭೆಯಲ್ಲಿ ಸದಸ್ಯರು ನಗರಸಭೆ ಸಮಸ್ಯೆಗಳ ಕುರಿತು ಚರ್ಚಿಸಿದರು. 

ಕಂದಾಯ ಶಾಖೆಯಲ್ಲಿ ಖಾತೆ ವರ್ಗಾವಣೆ, ಇ–ಖಾತೆ, ಮತ್ತಿತರ ಕೆಲಸಗಳಿಗೆ ಸಾರ್ವಜನಿಕರು ಹೆಚ್ಚಾಗಿ ಬರುತ್ತಿದ್ದಾರೆ. ಆಸ್ತಿ ಸಂಬಂಧಿಸಿದ ಕೆಲಸಗಳಿಗೆ ಮಧ್ಯವರ್ತಿಗಳೇ ಕಚೇರಿಗೆ ಬಂದು ಗಂಟೆಗಟ್ಟಲೆ ಕೂರುತ್ತಾರೆ. ಇದರಿಂದ ಸದಸ್ಯರಿಗೆ ಕರ್ಚಿಗಳೇ ಇರುವುದಿಲ್ಲ. ಜೊತೆಗೆ ನೌಕರರು ತಮ್ಮ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ದೂರಿದರು.

ADVERTISEMENT

ಈ ವೇಳೆ ನಗರಸಭೆ ಅಧ್ಯಕ್ಷೆ ಹೇಮರಾಜು ಮಾತನಾಡಿ, ಕಚೇರಿಗಳಿಗೆ ಮಧ್ಯವರ್ತಿಗಳು ಬರದಂತೆ ಕ್ರಮ ತೆಗೆದುಕೊಳ್ಳಿ. ಖಾತೆ ವಿತರಣೆ ಮಾಡುವ ಮೊದಲು ಆಯಾ ವ್ಯಾಪ್ತಿಯ ನಗರಸಭೆ ಸದಸ್ಯರ ಗಮನಕ್ಕೆ ತರಬೇಕೆಂದು ಸೂಚನೆ ನೀಡಿದರು.

ಸದಸ್ಯ ವಿಜಯ್ ಕುಮಾರ್ ಮಾತನಾಡಿ, ನಗರದಲ್ಲಿ ಪ್ರತಿ ವಾರ್ಡ್‌ಗಳಿಗೂ ನಾಮಫಲಕ ಹಾಕಬೇಕೆಂದು ತಿಳಿಸಿ ಐದು ವರ್ಷಗಳಾಗಿವೆ. ಆದರೂ ನಾಮಫಲಕ ಅಳವಡಿಸಿಲ್ಲ. ಹಾಗಾಗಿ ತಕ್ಷಣವೇ ವಾರ್ಡ್‌ಗಳಲ್ಲಿ ನಾಮಫಲಕ ಅಳವಡಿಸಿ, ಸ್ವಚ್ಛತೆಗೆ ಆದ್ಯತೆ ನೀಡಿ ಎಂದರು.

ಸಭೆಯಲ್ಲಿ ಬೀದಿ ದೀಪಗಳ ಬಗ್ಗೆ ಚರ್ಚೆ ನಡೆಸಲಾಯಿತು. 60 ವ್ಯಾಟ್ ಬೀದಿ ದೀಪಗಳನ್ನು ಅಳವಡಿಸಬೇಕೆಂದು ತಿಳಿಸಿದರು.

ಪೌರಾಯುಕ್ತ ಎಂ.ಎಸ್.ಮಹದೇವ ಮಾತನಾಡಿ, ಬಿ ಖಾತೆ ಮಾಡಿಕೊಡುವಂತೆ ಸರ್ಕಾರ ಆದೇಶ ಮಾಡಿದೆ. ಸಿಬ್ಬಂದಿಗಳು ಬಾಕಿ ಇರುವ ಎ ಖಾತೆ ಮತ್ತು ಬಿ ಖಾತೆಗಳನ್ನು ನನಗೆ ಮಾಡಲು ನೀಡುತ್ತಿದ್ದಾರೆ. ಆದರೆ, ವಾರದಲ್ಲಿ ಎರಡರಿಂದ ಮೂರು ದಿನ ಸರ್ವರ್ ಸಮಸ್ಯೆ ಇರುತ್ತದೆ. ಹಾಗಾಗಿ ಖಾತೆಗಳಾಗುವುದು ತಡವಾಗುತ್ತಿದೆ. ಸಿಬ್ಬಂದಿಗಳು ರಾತ್ರಿ 8 ಗಂಟೆವರೆಗೂ ಕೆಲಸ ಮಾಡುತ್ತಿದ್ದಾರೆ ಎಂದು ತಿಳಿಸಿದರು.

ಕಂದಾಯ ಜಾಗದಲ್ಲಿ ಮನೆ ಕಟ್ಟಲು ಅನುಮತಿ ಕೊಡುವ ವಿಚಾರ ಸರ್ಕಾರದ ಮಟ್ಟದಲ್ಲಿ ಆಗಬೇಕು. ಅದು ನಮ್ಮ ಕೈಯಲ್ಲಿಲ್ಲ. ವಿದ್ಯುತ್ ಬಳಕೆ ಕಡಿಮೆ ಮಾಡುವ ಉದ್ದೇಶದಿಂದ ಎಲ್‌ಇಡಿ ಬೀದಿ ದೀಪ ಅಳವಡಿಸುವಂತೆ ಸರ್ಕಾರ ಆದೇಶ ಮಾಡಿದೆ. ಮುಂದೆ ನಗರದ ಎಲ್ಲಾ ದೀಪಗಳನ್ನು ಬದಲಾಯಿಸಿ ಎಲ್ಇಡಿ ದೀಪಗಳನ್ನು ಅಳವಡಿಸಲಾಗುವುದು ಎಂದು ಹೇಳಿದರು.

ನಗರಸಭೆ ಕಚೇರಿಯಲ್ಲಿ ಇನ್ನು ಮುಂದೆ ಮಧ್ಯವರ್ತಿಗಳಿಗೆ ಅವಕಾಶ ಮಾಡಿಕೊಡದಂತೆ ನಿಯಂತ್ರಣ ಮಾಡಲಾಗುವುದು. ಕಚೇರಿಗಳಲ್ಲಿ ನೌಕರರು, ಸಿಬ್ಬಂದಿ ಮಧ್ಯವರ್ತಿಗಳಿಗೆ ಅವಕಾಶ ನೀಡದಂತೆ ಕೆಲಸ ಮಾಡಬೇಕು. ನನ್ನ ಗಮನಕ್ಕೆ ಬಂದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.

ಮುಂದಿನ ತಿಂಗಳು 40 ಮಂದಿ ಇಂದೋರ್ ಪ್ರವಾಸ ಕೈಗೊಳ್ಳುವ ಬಗ್ಗೆ ತೀರ್ಮಾನಿಸಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.