ADVERTISEMENT

ರಾಮನಗರ | ಮಳೆ ಅಬ್ಬರ: ರಸ್ತೆ ಜಲಾವೃತ, ಮನೆಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 2:33 IST
Last Updated 12 ಅಕ್ಟೋಬರ್ 2025, 2:33 IST
ಮಳೆ ಅಬ್ಬರಕ್ಕೆ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿಯ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಳ ಸೇತುವೆ ಜಲಾವೃತಗೊಂಡಿತ್ತು
ಮಳೆ ಅಬ್ಬರಕ್ಕೆ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿಯ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಳ ಸೇತುವೆ ಜಲಾವೃತಗೊಂಡಿತ್ತು   

ರಾಮನಗರ: ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ ಸುರಿದ ಮಳೆಗೆ ವಿವಿಧೆಡೆ ರಸ್ತೆ ಜಲಾವೃತಗೊಂಡಿವೆ. ಐದೂ ತಾಲ್ಲೂಕುಗಳಲ್ಲಿ ಸುರಿದ ಮಳೆಗೆ ಕೆಲ ಮನೆಗಳು ಹಾನಿಗೊಂಡಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಕೆಲವೆಡೆ ಬೆಳೆ ಹಾನಿಯಾಗಿದೆ.ಕೆರೆ–ಕಟ್ಟೆ ಹಾಗೂ ಹಳ್ಳಗಳು ತುಂಬಿ ಹರಿದಿವೆ.

ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿ ಬಳಿಯ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಳ ಸೇತುವೆಯು ಮಳೆ ಅಬ್ಬರಕ್ಕೆ ಜಲಾವೃತಗೊಂಡಿತು. ಇದರಿಂದಾಗಿ ವಾಹನಗಳು ಹಾಗೂ ಪಾದಚಾರಿಗಳ ಓಡಾಟಕ್ಕೆ ತೊಂದರೆಯಾಯಿತು. ರಾಮನಗರದಲ್ಲಿ ಸೀರೆಹಳ್ಳದಲ್ಲಿ ನೀರಿನ ಹರಿವು ಹೆಚ್ಚಾಗಿದ್ದರಿಂದ ಯಾರಬ್‌ ನಗರ, ಜಿಯಾವುಲ್ಲಾ ಬ್ಲಾಕ್ ಸೇರಿದಂತೆ ಕೆಲ ಪ್ರದೇಶಗಳಿಗೆ ನೀರು ನುಗ್ಗಿತು.

ಕಾಯಿಸೊಪ್ಪಿನ ಬೀದಿಯಲ್ಲಿರುವ ಮನೆಗಳಿಗೆ ಮಳೆ ನುಗ್ಗಿದ್ದರಿಂದ ನಿವಾಸಿಗಳು ರಾತ್ರಿಯಿಡೀ ಮಳೆ ನೀರು ಹೊರ ಹಾಕುತ್ತಾ, ಜಾಗರಣೆ ಮಾಡಬೇಕಾಯಿತು. ಗಾಳಿ ಅಬ್ಬರಕ್ಕೆ ಕೊತ್ತಿಪುರ ಬಡಾವಣೆಯಲ್ಲಿ ಕೆಲ ಮನೆಗಳು ಹೆಂಚುಗಳು ಉದುರಿವೆ. ಬಿಡದಿಯ ನೆಲ್ಲಿಗುಡ್ಡ ಕೆರೆ ಮತ್ತು ರಾಮನಗರದ ರಂಗರಾಯರದೊಡ್ಡಿ ಕೆರೆಗಳು ತುಂಬಿ ಕೋಡಿ ಹರಿದಿವೆ. ಮಳೆಗೆ ಹಾರೋಹಳ್ಳಿಯ ಕೆಲವೆಡೆ ರಾಗಿ ಬೆಳೆ ನೆಲ ಕಚ್ಚಿದೆ.

ADVERTISEMENT

ರಾಮನಗರದ ಕೊಳೆಗೇರಿ ಹಾಗೂ ತಗ್ಗು ಪ್ರದೇಶಗಳು, ಕಾಲುವೆಗಳ ಪಕ್ಕದಲ್ಲಿರುವ ಮನೆಗಳಿಗೆ ಮಳೆ ನೀರು ನುಗ್ಗಿದ್ದರಿಂದ ಜನರು ಪರದಾಡಿದರು. ಚರಂಡಿಗಳು ಕಟ್ಟಿಕೊಂಡಿದ್ದರಿಂದ ರೈಲು ನಿಲ್ದಾಣದ ಎದುರಿನ ರಸ್ತೆ, ಕೆಳ ಸೇತುವೆ ಸೇರಿದಂತೆ ಕೆಲವೆಡೆ ಮಳೆ ನೀರು ನಿಂತಿದ್ದರಿಂದ ರಸ್ತೆ ಜಲಾವೃತಗೊಂಡಿತು. ಒಳ ಚರಂಡಿ ಸೇರಿದಂತೆ ರಸ್ತೆ ಕಾಮಗಾರಿ ಸ್ಥಳಗಳಲ್ಲಿ ನೀರು ಕಟ್ಟಿಕೊಂಡಿದ್ದರಿಂದ ರಸ್ತೆ ಕೆಸರುಮಯವಾಯಿತು.

ಮಳೆ ಅಬ್ಬರಕ್ಕೆ ಚನ್ನಪಟ್ಟಣ ತಾಲ್ಲೂಕಿನ ತಿಟ್ಟಮಾರನಹಳ್ಳಿಯ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ಕೆಳ ಸೇತುವೆ ಜಲಾವೃತಗೊಂಡಿತ್ತು

ನಗರಸಭೆ ಕಾರ್ಮಿಕರು ಬೆಳಿಗ್ಗೆಯಿಂದಲೇ ಕಾರ್ಯಪ್ರವೃತ್ತರಾಗಿ ಮಳೆಯಿಂದಾಗಿರುವ ಅನಾಹುತದ ಸ್ಥಳಗಳಿಗೆ ತೆರಳಿ, ಸಮಸ್ಯೆ ಪರಿಹರಿಸಿದರು. ಕಟ್ಟಿಕೊಂಡಿದ್ದ ನೀರು ಸರಾಗವಾಗಿ ಹರಿಯುವಂತೆ ಮಾಡಿದರು. ಕೆಲವೆಡೆ ಮರದ ಕೊಂಬೆಗಳು ಮುರಿದು ಬಿದ್ದಿದ್ದ ಅವುಗಳನ್ನು ಸಹ ತೆರವುಗೊಳಿಸಿದರು. ಅಧಿಕಾರಿಗಳು ಸಹ ಎರಡನೇ ಶನಿವಾರದ ರಜೆ ಲೆಕ್ಕಿಸದೆ ಪರಿಹಾರ ಕೆಲಸಗಳನ್ನು ಮಾಡಿದರು.

ಮಳೆಯಿಂದಾಗಿ ರಾಮನಗರದ ಕೊತ್ತಿಪುರದ ಮನೆಯೊಂದರ ಹೆಂಚುಗಳು ಹಾರಿ ಹೋಗಿವೆ

ತುಂಬಿ ಹರಿದ ಕೆರೆ:

ಬಿಡಿದಯಲ್ಲಿ ನೆಲ್ಲಿಗುಡ್ಡೆ ಕೆರೆಯು ತುಂಬಿ ಹರಿದ ಹಿನ್ನೆಲೆಯಲ್ಲಿ ಹೊರಕ್ಕೆ ಬಂದ ಮೀನುಗಳನ್ನು ಸ್ಥಳೀಯರು ಪೈಪೋಟಿ ಬಿದ್ದು ಹಿಡಿದರು. ಚೀಲಗಳಲ್ಲಿ ತುಂಬಿಕೊಂಡು ಮನೆಯತ್ತ ತೆರಳಿದರು. ಕೆಲವರು ಸ್ಥಳದಲ್ಲೇ ಮಾರಾಟ ಮಾಡಿದರು. ಸಾರ್ವಜನಿಕರು ಸಹ ತುಂಬಿದ ಕೆರೆಯನ್ನು ವೀಕ್ಷಿಸಿ ಸಂತಸಪಟ್ಟರು.

ಮಳೆಯಿಂದಾಗಿರ ರಾಮನಗರದ ರಾಜಕಾಲುವೆಯಲ್ಲಿ ಕಟ್ಟಿಕೊಂಡಿರುವ ಕಸದ ರಾಶಿ

ರಾಮನಗರದ ರಂಗರಾಯರದೊಡ್ಡಿ ಕೆರೆ ಸಹ ತುಂಬಿ ಹೊರಕ್ಕೆ ನೀರು ಹರಿಯಿತು. ಸ್ಥಳೀಯರು ಕೋಡಿ ನೀರಿನಲ್ಲಿ ಆಟವಾಡಿ ಸಂಭ್ರಮಿಸಿದರು. ಕೆರೆಗೆ ಭೇಟಿ ನೀಡಿದ್ದ ಪ್ರವಾಸಿಗರು ಫೋಟೊ ತೆಗೆದುಕೊಂಡರು.

ತಾಲ್ಲೂಕಿನಲ್ಲಿ 14 ಮನೆಗಳಿಗೆ ಹಾನಿಯಾಗಿದೆ. ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು ಹಾನಿಗೊಂಡಿರುವ ಮನೆಗಳ ಮಾಲೀಕರಿಗೆ ಒಟ್ಟು ₹5.16 ಲಕ್ಷ ಪರಿಹಾರ ನೀಡಲಾಗಿದೆ
– ತೇಜಸ್ವಿನಿ ತಹಶೀಲ್ದಾರ್ ರಾಮನಗರ ತಾಲ್ಲೂಕು
ರಾಮನಗರ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ಮಳೆಯಿಂದ ಹಾನಿಗೊಂಡಿರುವ ಯಾರಬ್ ನಗರದ ಸೇತುವೆ ವೀಕ್ಷಿಸಿದರು. ಉಪಾಧ್ಯಕ್ಷೆ ಆಯಿಷಾ ಬಾನು ಸದಸ್ಯರು ಹಾಗೂ ಅಧಿಕಾರಿಗಳು ಇದ್ದಾರೆ
ಅಧ್ಯಕ್ಷರ ನಗರ ಸಂಚಾರ
ರಾಮನಗರ ನಗರಸಭೆ ಅಧ್ಯಕ್ಷ ಕೆ. ಶೇಷಾದ್ರಿ ಶಶಿ ಅವರು ಬೆಳಿಗ್ಗೆ ಅಧಿಕಾರಿಗಳೊಂದಿಗೆ ನಗರ ಸಂಚಾರ ಮಾಡಿ ಮಳೆ ಹಾನಿಯಾಗಿರುವ ಪ್ರದೇಶಗಳನ್ನು ವೀಕ್ಷಿಸಿದರು. ಯಾರಬ್ ನಗರ ಮಂಜುನಾಥ ನಗರ ಜಿಯಾವುಲ್ಲಾ ಬ್ಲಾಕ್ ಸೀರೆಹಳ್ಳ ಕಾಲುವೆ ಸೇರಿದಂತೆ ವಿವಿಧ ಪ್ರದೇಶಳಿಗೆ ಭೇಟಿ ನೀಡಿದರು. ಈ ವೇಳೆ ಸ್ಥಳೀಯರು ಮಳೆಯಿಂದಾದ ಸಮಸ್ಯೆಗಳನ್ನು ತೋಡಿಕೊಂಡರು. ಸೀರೆಹಳ್ಳದ ಹರಿವಿನ ರಭಸಕ್ಕೆ ಯಾರಬ್‌ ನಗರದಲ್ಲಿ ಸೇತುವೆ ಹಾನಿಗೊಂಡಿದ್ದು ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಉಪಾಧ್ಯಕ್ಷೆ ಆಯಿಷಾ ಬಾನು ಸೇರಿದಂತೆ ಕೆಲ ಸದಸ್ಯರು ಜೊತೆಗಿದ್ದರು. ಭೇಟಿ ಬಳಿಕ ನಗರಸಭೆಯಲ್ಲಿ ಸಭೆ ನಡೆಸಿದ ಶಶಿ ಮಳೆ ಅನಾಹುತವಾದಾಗ ಕೂಡಲೇ ಸ್ಪಂದಿಸಿ ಪರಿಹಾರ ಕ್ರಮ ಕೈಗೊಳ್ಳಲು ಅಧಿಕಾರಿಗಳು ಸಿದ್ದರಾಗಿರಬೇಕು. ಮರಗಳು ಬಿದ್ದಾಗ ತಕ್ಷಣ ತೆರವುಗೊಳಿಸಬೇಕು. ಮಳೆ ಹಾನಿ ಕುರಿತು ಸಾರ್ವಜನಿಕರಿಂದ ದೂರು ಬಂದಾಕ್ಷಣ ಸ್ಪಂದಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಕೆಳ ಸೇತುವೆ ಜಲಾವೃತ
ಚನ್ನಪಟ್ಟಣ: ತಾಲ್ಲೂಕಿನ ಬೆಂಗಳೂರು–ಮೈಸೂರು ರಾಷ್ಟ್ರೀಯ ಹೆದ್ದಾರಿಯ ತಿಟ್ಟಮಾರನಹಳ್ಳಿ ಕ್ರಾಸ್ ಕೆಳ ಸೇತುವೆ ಮಳೆಯಿಂದಾಗಿ ಜಲಾವೃತಗೊಂಡಿತ್ತು. ಸೊಂಟದವರೆಗೆ ನೀರು ಬಂದಿದ್ದರಿದ ಗ್ರಾಮದ ಸಂಪರ್ಕ ಕೆಲ ಹೊತ್ತು ಕಡಿತಗೊಂಡಿತು. ಕೆಲ ವಾಹನಗಳ ಸವಾರರು ನೀರಿನಲ್ಲೇ ಸೇತುವೆ ದಾಟಿದರು. ಹೆದ್ದಾರಿ ನಿರ್ಮಾಣವಾದಾಗಿನಿಂದಲೂ ಮಳೆ ಬಂದಾಗ ಕೆಳ ಸೇತುವೆ ಜಲಾವೃತವಾಗುತ್ತದೇ ಇದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಮಾತ್ರ ಇದಕ್ಕೆ ಶಾಶ್ವತ ಪರಿಹಾರ ಕೊಟ್ಟಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ಸ್ಥಳೀಯ ಗ್ರಾಮ ಪಂಚಾಯಿತಿ ಕಾರ್ಮಿಕರು ಬಂದು ನೀರು ಹರಿದು ಹೋಗುವಂತೆ ಮಾಡಿದರು ಎಂದು ಸ್ಥಳೀಯರು ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.