ರಾಮನಗರ: ಓದುವಂತೆ ಒತ್ತಡ ಹೇರಿದ್ದ ಪೋಷಕರನ್ನು ಬೆದರಿಸುವ ಸಲುವಾಗಿ ತಾನೇ ಅಪಹರಣವಾದಂತೆ ನಾಟಕ ಆಡಿದ್ದ ಬಾಲಕನನ್ನು ಕನಕಪುರ ಪೊಲೀಸರು ಪತ್ತೆ ಮಾಡಿದ್ದು, ತಿರುಪತಿಯಿಂದ ವಾಪಸ್ ಕರೆ ತಂದಿದ್ದಾರೆ.
ಸದ್ಯ ಕನಕಪುರದಲ್ಲಿ ವಾಸ ಇರುವ, ತಮಿಳುನಾಡು ಮೂಲದ ಬಟ್ಟೆ ವ್ಯಾಪಾರಿಯೊಬ್ಬರ 16 ವರ್ಷದ ಬಾಲಕ ಕಳೆದ ಶುಕ್ರವಾರ ಸೈಬರ್ ಕೇಂದ್ರಕ್ಕೆ ಹೋಗಿ ಬರುವುದಾಗಿ ಹೇಳಿ ಮನೆಯಿಂದ ತೆರಳಿದ್ದು, ಬಳಿಕ ನಾಪತ್ತೆಯಾಗಿದ್ದ. ಅದಾದ ಕೆಲ ಸಮಯದಲ್ಲಿ ಬಾಲಕನ ನೆರೆ ಮನೆಯವರಿಗೆ ವಾಟ್ಸಪ್ ನಲ್ಲಿ ಒಂದಿಷ್ಟು ಚಿತ್ರಗಳು ಬಂದಿದ್ದವು. ಆತನನ್ನು ಶೌಚಾಲಯವೊಂದರಲ್ಲಿ ಕಟ್ಟಿ ಹಾಕಲಾಗಿತ್ತು. 5 ಲಕ್ಷ ರೂಪಾಯಿ ಹಣಕ್ಕೆ ಬೇಡಿಕೆಯನ್ನೂ ಸಂದೇಶದ ಮೂಲಕ ಇಡಲಾಗಿತ್ತು. ಇದರಿಂದ ಆತಂಕಕ್ಕೆ ಒಳಗಾದ ಪೋಷಕರು ಕನಕಪುರ ಟೌನ್ ಠಾಣೆಯಲ್ಲಿ ದೂರು ನೀಡಿದ್ದರು.
ಸಂದೇಶದ ಜಾಡು ಹಿಡಿದು ತನಿಖೆ ನಡೆಸಿದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಬಾಲಕನೇ ತನ್ನ ಕಿಡ್ನಾಪ್ ಆದಂತೆ ನಾಟಕ ಆಡಿದ್ದು, ಸ್ನೇಹಿತರ ನೆರವಿನಿಂದ ಫೋಟೊ ಕಳುಹಿಸಿ ಹಣಕ್ಕೆ ಬೇಡಿಕೆಯನ್ನೂ ಇಟ್ಟಿದ್ದ. ಚೆನ್ನಾಗಿ ಓದುವಂತೆ ಪೋಷಕರು ಪದೇ ಪದೇ ಒತ್ತಡ ಹೇರುತ್ತಿದ್ದರು. ಹೀಗಾಗಿ ಇದರಿಂದ ಅಪಹರಣದ ನಾಟಕ ಆಡಿದ್ದಾಗಿ ಬಾಲಕ ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.
ಇದೀಗ ಬಾಲಕನನ್ನು ಆತನ ಪೋಷಕರ ಮನೆಗೆ ಕರೆತರಲಾಗಿದ್ದು, ವಿಚಾರಣೆ ಮುಂದುವರಿದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.