ರಾಮನಗರ: ತಾಲ್ಲೂಕಿನ ರೇವಣಸಿದ್ದೇಶ್ವರ ಬೆಟ್ಟದ ಪ್ರಕೃತಿ ಸೌಂದರ್ಯ ಸವಿಯಲು ಭಾನುವಾರ ಬಂದಿದ್ದ ಬೆಂಗಳೂರಿನ ವಿದ್ಯಾರ್ಥಿಗಳಿಬ್ಬರು, ಬೆಟ್ಟದ ಹಿಂಭಾಗದಲ್ಲಿರುವ ಇಲ್ಲಿನ ಅವ್ವೇರಹಳ್ಳಿಯ ಹೊಸಕೆರೆಯಲ್ಲಿ ಈಜುವಾಗ ಮುಳುಗಿ ಮೃತಪಟ್ಟಿದ್ದಾರೆ.
ಬೆಂಗಳೂರಿನ ಬಾಗಲಕುಂಟೆಯ ಸಿದ್ದಾರ್ಥ್ (19) ಮತ್ತು ಹೆಸರುಘಟ್ಟದ ನಿಶಾಂತ್ (20) ಮೃತರು. ಇಬ್ಬರೂ ಯಲಹಂಕ ಬಳಿಯ ರಾಜಾನುಕುಂಟೆಯಲ್ಲಿರುವ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಬಿಬಿಎ ಓದುತ್ತಿದ್ದರು.
‘ಇಬ್ಬರು ವಿದ್ಯಾರ್ಥಿನಿಯರು ಸೇರಿದಂತೆ ಆರು ಮಂದಿಯ ತಂಡವು, ಯೂಟ್ಯೂಬ್ನಲ್ಲಿ ರೇವಣಸಿದ್ದೇಶ್ವರ ಬೆಟ್ಟದ ಸುಂದರ ಪ್ರಕೃತಿ ಗಮನಿಸಿ ಮಧ್ಯಾಹ್ನ ಕಾರಿನಲ್ಲಿ ಸ್ಥಳಕ್ಕೆ ಭೇಟಿ ನೀಡಿದ್ದರು. ಬೆಟ್ಟದಾಚೆಗಿರುವ ಅವ್ವೇರಹಳ್ಳಿಯ ಹೊಸಕೆರೆಗೆ ಸಂಜೆ 4 ಗಂಟೆ ಸುಮಾರಿಗೆ ಬಂದು, ಫೋಟೊ ಮತ್ತು ವಿಡಿಯೊ ತೆಗೆದುಕೊಂಡಿದ್ದರು’ ಎಂದು ರಾಮನಗರ ಗ್ರಾಮಾಂತರ ಠಾಣೆ ಪೊಲೀಸರು ತಿಳಿಸಿದರು.
‘ಈ ವೇಳೆ, ಸಿದ್ದಾರ್ಥ್ ಈಜುವುದಕ್ಕಾಗಿ ನೀರಿಗೆ ಇಳಿದಿದ್ದಾರೆ. ಸ್ವಲ್ಪ ಮುಂದೆ ಆಳವಾದ ಜಾಗಕ್ಕೆ ಹೋಗಿ ಈಜುತ್ತಿದ್ದ ಅವರು, ನೀರಿನಲ್ಲಿ ಮುಳುಗತೊಡಗಿದ್ದಾರೆ. ಅದನ್ನು ಗಮನಿಸಿದ ನಿಶಾಂತ್, ರಕ್ಷಿಸುವುದಕ್ಕಾಗಿ ನೀರಿಗೆ ಜಿಗಿದಿದ್ದಾರೆ. ಈ ವೇಳೆ, ನೀರಿನ ಸೆಳೆತಕ್ಕೆ ಸಿಲುಕಿ ಇಬ್ಬರೂ ಮುಳುಗಿದ್ದಾರೆ’ ಎಂದು ಪೊಲೀಸರು ಹೇಳಿದರು.
‘ದಡದಲ್ಲಿದ್ದ ಉಳಿದ ನಾಲ್ವರಿಗೆ ಈಜು ಬಾರದಿದ್ದರಿಂದ, ನೆರವಿಗಾಗಿ ಯಾರಾದರೂ ಬರುತ್ತಾರೆಯೇ ಎಂದು ಕೂಗಿಕೊಂಡರು. ಸ್ಥಳೀಯರು ಸ್ಥಳಕ್ಕೆ ಬರುವಷ್ಟರಲ್ಲಿ ಇಬ್ಬರೂ ನೀರಿನಲ್ಲಿ ಮುಳುಗಿದ್ದರು. ನಂತರ ಸ್ಥಳೀಯರು ಠಾಣೆಗೆ ಕೆರೆ ಮಾಡಿ ವಿಷಯ ತಿಳಿಸಿದರು’ ಎಂದು ತಿಳಿಸಿದರು.
‘ಸ್ಥಳಕ್ಕೆ ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿಯನ್ನು ಕರೆಯಿಸಿಕೊಂಡು, ಇಬ್ಬರ ಶವವನ್ನು ಹೊರತೆಗೆದು ರಾಮನಗರ ಜಿಲ್ಲಾಸ್ಪತ್ರೆಗೆ ಸಾಗಿಸಲಾಯಿತು. ಸೋಮವಾರ ಮರಣೋತ್ತರ ಪರೀಕ್ಷೆ ನಡೆಸಿ ಕುಟುಂಬದವರಿಗೆ ಹಸ್ತಾಂತರಿಸಲಾಗುವುದು. ಘಟನೆ ಕುರಿತು ಪ್ರಕರಣ ದಾಖಲಿಸಿಕೊಳ್ಳಲಾಗಿದೆ’ ಎಂದು ಹೇಳಿದರು.
ಮೃತ ವಿದ್ಯಾರ್ಥಿಗಳಲ್ಲಿ ಒಬ್ಬ ಮಾಜಿ ಯೋಧರೊಬ್ಬರ ಪುತ್ರನಾಗಿದ್ದು, ಮತ್ತೊಬ್ಬರ ತಂದೆ ಬ್ಯುಸಿನೆಸ್ ಮ್ಯಾನ್ ಆಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ಸ್ಥಳಕ್ಕೆ ಇನ್ಸ್ಪೆಕ್ಟರ್ ರಮೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.