ರಾಮನಗರ: ‘ರಾಣಿ ಅಬ್ಬಕ್ಕ ಈ ದೇಶದ ಹೆಮ್ಮೆ. ಅವರ ಧೈರ್ಯ ಹಾಗೂ ಶೌರ್ಯವು ಯುವಜನರಿಗೆ ಮಾರ್ಗದರ್ಶಿಯಾಗಿದೆ. ಅವರು ಕೇವಲ ತುಳುನಾಡಿಗೆ ಮಾತ್ರ ಸೀಮಿತವಲ್ಲ. 500 ವರ್ಷಗಳ ಹಿಂದೆ ತುಳುನಾಡಿನ ಮೇಲೆ ಆಕ್ರಮಣ ಮಾಡಿದ ಪೋರ್ಚುಗೀಸರ ಮೇಲೆ ಅಬ್ಬಕ್ಕ ಯುದ್ಧ ಮಾಡುವ ಮೂಲಕ ಅದಮ್ಯ ದೇಶಭಕ್ತಿ ತೋರಿದರು’ ಎಂದು ಸಂಸದ ಡಾ. ಸಿ.ಎನ್. ಮಂಜುನಾಥ್ ಬಣ್ಣಿಸಿದರು.
ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ವತಿಯಿಂದ ರಾಮನಗರದ ಬಿಜಿಎಸ್ ಪದವಿ ಪೂರ್ವ ಕಾಲೇಜು ಆವರಣದಲ್ಲಿ ರಾಣಿ ಅಬ್ಬಕ್ಕ ದೇವಿ ರಥಯಾತ್ರೆಗೆ ಸ್ವಾಗತ ಕಾರ್ಯಕ್ರಮದಲ್ಲಿ ಪಾಲ್ಗೊಂಡು, ಅಬ್ಬಕ್ಕ ಮೂರ್ತಿಗೆ ಪುಷ್ಪನಮನ ಸಲ್ಲಿಸಿ ಅವರು ಮಾತನಾಡಿದರು.
‘ಮಹಿಳೆಯರು ಸಮಾಜದಲ್ಲಿ ನಾಯಕತ್ವ ಬೆಳೆಸಿಕೊಳ್ಳಲು ಅಬ್ಬಕ್ಕನ ಶಕ್ತಿ ಮತ್ತು ಧೈರ್ಯವೇ ಪ್ರೇರಣಾದಾಯಕ ದಾರಿದೀಪ. ಇಂದಿನ ಯುವಜನತೆ ಅಬ್ಬಕ್ಕನ ಕಥೆಗಳಿಂದ ರಾಷ್ಟ್ರನಿಷ್ಠೆ, ಸ್ವಾಭಿಮಾನ, ಧೈರ್ಯಗಳನ್ನು ಕಲಿತುಕೊಳ್ಳಬೇಕಾಗಿದೆ. ಅಬ್ಬಕ್ಕನ ಶೌರ್ಯವನ್ನು ಶಾಲೆ-ಕಾಲೇಜು ಪಠ್ಯಕ್ರಮಗಳಲ್ಲಿ ಅಳವಡಿಸಿ ಯುವಜನರಲ್ಲಿ ದೇಶಭಕ್ತಿಯ ಕಿಚ್ಚು ಮೊಳಗಿಸಬೇಕು’ ಎಂದರು.
‘ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ದೇಶದ ಅತಿ ದೊಡ್ಡ ವಿದ್ಯಾರ್ಥಿ ಸಂಘಟನೆಯಾಗಿದೆ. ಸದಾ ರಾಷ್ಟ್ರಭಕ್ತಿ, ಶೌರ್ಯ ಮತ್ತು ಸಮಾಜ ಸೇವೆಯ ಮೌಲ್ಯಗಳನ್ನು ಯುವಜನರಲ್ಲಿ ಬೆಳೆಸುವ ಕಾರ್ಯ ಮಾಡುತ್ತಿದೆ. ರಾಣಿ ಅಬ್ಬಕ್ಕ ರಥಯಾತ್ರೆ ಮೂಲಕ ವಿದ್ಯಾರ್ಥಿಗಳಿಗೆ ಇತಿಹಾಸದ ಅರಿವು, ದೇಶದ ಗೌರವ ಮತ್ತು ರಾಷ್ಟ್ರೀಯ ಏಕತೆ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಆದಿಚುಂಚನಗಿರಿ ರಾಮನಗರ ಶಾಖಾ ಮಠದ ಅನ್ನದಾನೇಶ್ವರನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ರಾಮನಗರ ಜಿಲ್ಲಾ ಬಿಜೆಪಿ ಅಧ್ಯಕ್ಷ ಆನಂದಸ್ವಾಮಿ, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯದರ್ಶಿ ಪ್ರವೀಣ್ ಎಚ್.ಕೆ., ರಥಯಾತ್ರೆ ಸಂಚಾಲಕ ಯಶವಂತ್, ಸಹ ಸಂಚಾಲಕ ಜ್ಞಾನ, ಮಂದಾರ, ಅಂಬಣ್ಣ, ಆಕಾಶ್, ಸುಹಾಸ್ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.