
ರಾಮನಗರ ತಾಲ್ಲೂಕಿನ ಕೂನಗಲ್ ಗ್ರಾಮದ ರಂಗನಾಥ ಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಜರುಗಿತು
ರಾಮನಗರ: ತಾಲ್ಲೂಕಿನ ಕೂನಗಲ್ ಗ್ರಾಮದ ರಂಗನಾಥಸ್ವಾಮಿ ರಥೋತ್ಸವ ವಿಜೃಂಭಣೆಯಿಂದ ಭಾನುವಾರ ಜರುಗಿತು. ಚೋಳರ ಕಾಲದ ಇತಿಹಾಸ ಪ್ರಸಿದ್ದವಾದ ದೇವಾಲಯದಲ್ಲಿ ಪ್ರತಿ ವರ್ಷ ರಥಸಪ್ತಮಿಯಂದು ಗ್ರಾಮದಲ್ಲಿ ರಥೋತ್ಸವ ನಡೆಯುವುದು ಇಲ್ಲಿನ ವಿಶೇಷ.
ರಥೋತ್ಸವದ ಪ್ರಯುಕ್ತ ದೇವಾಲಯದಲ್ಲಿ ಮತ್ತು ಗ್ರಾಮದ ವರದರಾಜಸ್ವಾಮಿ, ಮಾರಮ್ಮ, ಆಂಜನೇಯ ದೇವಾಲಯದಲ್ಲಿ ವಿಶೇಷ ಪೂಜೆ, ವಿಶೇಷ ಅಲಂಕಾರ, ರುದ್ರಾಭಿಷೇಕ ನಡೆದವು. ಬೆಳಿಗ್ಗೆ 10.15ಕ್ಕೆ ರಂಗನಾಥಸ್ವಾಮಿಯ ಉತ್ಸವ ಮೂರ್ತಿಯನ್ನು ಮಂಗಳವಾದ್ಯಗಳ ಸಮೇತ ತಂದು ವಿಶೇಷ ಪುಷ್ಪಾಲಂಕೃತ ರಥೋತ್ಸವದಲ್ಲಿ ಇರಿಸಲಾಯಿತು.
ರಥಕ್ಕೆ ಪೂಜಾ ವಿಧಿವಿಧಾನ ಪೂರೈಸಿದ ನಂತರ ಕೈಲಾಂಚ ನಾಡಕಛೇರಿ ರಾಜಸ್ವ ನಿರೀಕ್ಷಕ ಮಂಜುನಾಥ್ ರಥದ ಚಕ್ರಗಳಿಗೆ ಕಾಯಿ ಒಡೆದು ಪೂಜೆ ಸಲ್ಲಿಸಿದ ನಂತರ ಭಕ್ತರು, ಗ್ರಾಮಸ್ಥರು ರಥ ಎಳೆದರು. ಜಿಲ್ಲೆಯ ವಿವಿಧ ಭಾಗಗಳಿಂದ ಬಂದಿದ್ದ ಭಕ್ತರು ರಥಕ್ಕೆ ಹೂ, ಹಣ್ಣು, ಬಾಳೆಹಣ್ಣು, ಜವನ ಎಸೆದರು.
ಭಕ್ತರು ಗೋವಿಂದ, ಗೋವಿಂದ ಜೈಕಾರ ಹಾಕಿ ಭಕ್ತಿ ಮೆರೆದರು. ಗ್ರಾಮಸ್ಥರು ಭಕ್ತರಿಗೆ ಬಾಳೆಹಣ್ಣು, ಹೆಸರುಬೇಳೆ, ಪಾನಕ, ಮಜ್ಜಿಗೆ ಸಿಹಿ ಪ್ರಸಾದ ವಿತರಿಸಿದರು. ಬೆಟ್ಟದ ಮೇಲಿನ ಆಂಜನೇಯ ದೇವಾಲಯದ ಆವರಣದಲ್ಲಿ ಮಧ್ಯಾಹ್ನ ಅನ್ನಸಂತರ್ಪಣೆ ನಡೆಯಿತು.
ಸ್ಥಳೀಯ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರಕಾಶ್, ಮಾಜಿ ಅಧ್ಯಕ್ಷ ಶಿವರಾಜು, ಪುಟ್ಟಸ್ವಾಮಿ, ಉಪಾಧ್ಯಕ್ಷೆ ಸಿದ್ದಮ್ಮ, ಸದಸ್ಯರಾದ ಸರೋಜಮ್ಮ, ಮಾಜಿ ಸದಸ್ಯ ಯಕ್ಷರಾಜು, ಮುಖಂಡರಾದ ರವಿಯಣ್ಣ, ವಾಸು, ಪುಟ್ಟಮಾಸ್ತಿಗೌಡ, ಅಪ್ಪಾಜಣ್ಣ, ದಶರಥ, ಎಂ. ರಾಜೇಶ್, ವರದರಾಜು, ಕೆಂಪರಾಜು, ಶಾಂತರಾಮ್, ರೇಣುಕ, ಜಯರಾಮು, ಅರ್ಚಕ ರಂಗ ಹಾಗೂ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.