ರಾಮನಗರ: ಜಿಲ್ಲೆಯಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೂ ಜನರು ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ನಗರಸಭೆ ಪೌರಾಯುಕ್ತ ನಂದಕುಮಾರ್ ಹೇಳಿದರು.
ನಗರದ ಕನ್ಯಕಾ ಮಹಲ್ನಲ್ಲಿ ಜಿಲ್ಲಾಡಳಿತ, ನಗರಸಭೆ, ಆರೋಗ್ಯ ಇಲಾಖೆ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಶ್ರೀವಾಸವಿ ವಿದ್ಯಾನಿಕೇತನ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಏರ್ಪಡಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಸ್ವಯಂಪ್ರೇರಿತ ರಕ್ತದಾನ ಶಿಬಿರ, ಕೋವಿಡ್ ಲಸಿಕಾ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ಕೋವಿಡ್ ಸೋಂಕು ಇನ್ನು ತೊಲಗಿಲ್ಲ, ಎರಡನೇ ಅಲೆ ಕಡಿಮೆಯಾಗಿದೆ ಅಷ್ಟೇ. ಹೀಗಾಗಿ ಜನರು ಮೈಮರೆಯದೇ ಆರೋಗ್ಯ, ಸ್ವಚ್ಛತೆ ಕಡೆ ಗಮನ ನೀಡಬೇಕು ಎಂದು ಸಲಹೆ ನೀಡಿದರು.
ಆರ್ಯವೈಶ್ಯ ಸಭಾದ ಜಿಲ್ಲಾ ಕಾರ್ಯದರ್ಶಿ ಕೆ.ವಿ. ಉಮೇಶ್ ಮಾತನಾಡಿ, ವಾಸವಿ ಪೀಠದ ದ್ವಿತೀಯ ಪೀಠಾರೋಹಣ ಮಹೋತ್ಸವದ ಈ ದಿನ ನಡೆದಿದ್ದು, ಸಚ್ಚಿದಾನಂದ ಸರಸ್ವತಿ ಸ್ವಾಮೀಜಿ ವಾಸವಿ ಪೀಠದ ದ್ವಿತೀಯ ಶ್ರೀಗಳಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಆಡಳಿತದ ಸಹಯೋಗದಲ್ಲಿ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಾನುವಾರ ಆಹಾರ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದರು.
ಬೆಳ್ಳಿ ರಕ್ತನಿಧಿ ತಂಡವು ರಕ್ತದಾನ ಶಿಬಿರವನ್ನು ನಡೆಸಿಕೊಟ್ಟಿತು. 20ಕ್ಕೂ ಹೆಚ್ಚು ದಾನಿಗಳು ರಕ್ತದಾನ ಮಾಡಿದರು. ಇದೇ ವೇಳೆ ಕೆ.ವಿ. ಉಮೇಶ್, ಕೆ.ಎನ್. ಗಿರೀಶ್, ಪಿ.ವಿ. ವಿವೇಕಾನಂದ, ಸುಮನ್ ರಾಘವೇಂದ್ರ, ರಾಘವೇಂದ್ರ, ರವಿ, ರಮೇಶ್, ವಕೀಲ ವಿನೋದ್ ಸೇರಿದಂತೆ 10 ಮಂದಿ ರಕ್ತದಾನಿಗಳನ್ನು ಸನ್ಮಾನಿಸಲಾಯಿತು.
ಆರೋಗ್ಯ ಶಿಬಿರವನ್ನು ರಾಯರದೊಡ್ಡಿ ನಗರ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ರಾಜು ರಾಥೋಡ್ ಮತ್ತು ತಂಡ ನಡೆಸಿಕೊಟ್ಟರು. ಅಗತ್ಯವಿದ್ದವರಿಗೆ ಉಚಿತವಾಗಿ ಔಷಧಿಗಳನ್ನು ವಿತರಿಸಲಾಯಿತು. 45 ವರ್ಷ ಮೇಲ್ಪಟ್ಟವರಿಗೆ ಕೋವಿಡ್ ಲಸಿಕಾ ಶಿಬಿರ ಸಹ ನಡೆಯಿತು.
ತಹಶೀಲ್ದಾರ್ ನರಸಿಂಹಮೂರ್ತಿ, 7ನೇ ವಾರ್ಡ್ ನಗರಸಭೆ ಸದಸ್ಯೆ ಮಹಾಲಕ್ಷ್ಮಿ, ಮಾಜಿ ಸದಸ್ಯ ಜೆ. ಮುಕುಂದರಾಜ್, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಗಂಗಾಧರ್, ಆರೋಗ್ಯ ಇಲಾಖೆಯ ನಳಿನಾ, ಯಾಜ್, ಮುಖಂಡರಾದ ಮಂಜು, ಗೂಳಿಕುಮಾರ್, ಕುಮಾರ್, ವಾಸವಿ ವಿದ್ಯಾನಿಕೇತನ ಟ್ರಸ್ಟ್ನ ಪ್ರಮುಖರಾದ ಕೆ.ಆರ್. ನಾಗೇಶ್, ಕೆ.ಆರ್. ಪ್ರದೀಪ್, ಎಂ.ಬಿ. ಜನಾರ್ಧನ, ಪಿ.ವಿ. ಬದರಿನಾಥ, ಆರ್ಯವೈಶ್ಯ ಸಭಾ ಸದಸ್ಯರಾದ ಕೆ.ಆರ್. ಮಹೇಶ್, ಕೆ.ಆರ್. ಸತೀಶ್, ವಿ.ಕೆ. ನಾಗರಾಜ್ ಹಾಜರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.