ಮಾಗಡಿ: ಭರತ ಹುಣ್ಣಿಮೆ ಅಂಗವಾಗಿ ಸೋಲೂರು ಆರ್ಯ ಈಡಿಗರ ಮಹಾಸಂಸ್ಥಾನ ಮಠದ ಆವರಣದಲ್ಲಿ ರೇಣುಕಾ ಯಲ್ಲಮ್ಮದೇವಿ ಜಾತ್ರಾ ಮಹೋತ್ಸವ ಶ್ರದ್ಧಾ–ಭಕ್ತಿಯಿಂದ ನಡೆಯಿತು. ಅರ್ಚಕ ಗೋಪಿ ಜೀಯರ್ ತಂಡದವರು ಗೋಪೂಜೆಯೊಂದಿಗೆ ಹೋಮ ನೆರವೇರಿಸಿದರು.
ಕರ್ನಾಟಕ ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ತಿಮ್ಮೇಗೌಡ, ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ಅಧ್ಯಕ್ಷ ಜೆ.ಪಿ.ಸುಧಾಕರ್ ದೇವಿಗೆ ಪೂಜೆ ಸಲ್ಲಿಸಿ ಜಾತ್ರಾಮಹೋತ್ಸವಕ್ಕೆ ಚಾಲನೆ ನೀಡಿದರು.
ಅಲಂಕೃತ ರೇಣುಕಾ ಯಲ್ಲಮ್ಮದೇವಿ ಉತ್ಸವಮೂರ್ತಿ ಹೆಗಲ ಮೇಲೆ ಹೊತ್ತು ಪ್ರಾಕಾರೋತ್ಸವ ನಡೆಸಿದರು. ಬಳ್ಳಾರಿಯಿಂದ ಬಂದಿದ್ದ ರಾಮವ್ವ ಜೋಗತಿ, ಮಂಜುಳಾ ಜೋಗತಿ ಚೌಡಿಕೆ ನುಡಿಸುತ್ತಾ ರೇಣುಕಾ ಯಲ್ಲಮ್ಮದೇವಿ ಜನಪದ ಕಥನ ಕಾವ್ಯ ಹಾಡಿದರು.
ರಂಗಲಕ್ಷ್ಮೀಗೋಪಾಲ್, ಕೆ.ಪಿ.ರಜನಿ ವಿಜಯವೆಂಕಟೇಶ್, ಕುಸುಮ ಪ್ರಸನ್ನಕುಮಾರ್, ಮಂಜುಳ ಚಂದ್ರಶೇಖರ್, ಮಂಜುಳ ಪುಟ್ಟಸ್ವಾಮಿ, ಲತಾವೆಂಕಟೇಶ್, ಶಿವಮ್ಮ ಮೋಹನ್ ಕುಮಾರ್ ತಂಡದ ಮಹಿಳೆಯರು ಹಸಿ ತಂಬಿಟ್ಟಿನ ಬೇವು ಬೆಲ್ಲದ ಆರತಿ ಬೆಳಗಿದರು.
ರಾಜ್ಯ ಆರ್ಯ ಈಡಿಗರ ಸಂಘದ ಪದಾಧಿಕಾರಿಗಳಾದ ಶಿವಕುಮಾರ್, ಹರ್ಷಕಣೆಕಲ್, ಚರಣ್ ರಾಜ್, ಶಿವಣ್ಣ, ರವಿದಾಸಪ್ಪ, ಪುರುಷೋತ್ತಮ್, ಮಠದ ವ್ಯವಸ್ಥಾಪಕ ಗಂಗಾಧರ್, ನಾರಾಯಣಸ್ವಾಮಿ, ರಾಜು, ರಂಗಸ್ವಾಮಯ್ಯ, ಶ್ರೀಗಿರಿಪುರದ ರಂಗಸ್ವಾಮಿ, ಸಿದ್ದರಾಜು, ಚಿದಾನಂದ್, ಆರ್.ಎಲ್.ಜಾಲಪ್ಪ ಅಕಾಡೆಮಿ ವಿದ್ಯಾರ್ಥಿಗಳು ಮತ್ತು ರಾಜ್ಯದ ವಿವಿಧ ಮೂಲೆಗಳಿಂದ ಬಂದಿದ್ದ ರೇಣುಕಾ ಯಲ್ಲಮ್ಮದೇವಿ ಭಕ್ತರು ಪಾಲ್ಗೊಂಡಿದ್ದರು.
ಜೋಗತಿಯರಾದ ಶ್ವೇತ, ರೇಣುಕಾ, ಅಶೋಕ, ರಾಮವ್ವ, ಯಲ್ಲಮ್ಮ ತಂಡದವರು ಉತ್ಸವದ ಮೆರವಣಿಗೆಯಲ್ಲಿ ನರ್ತಿಸಿ, ದೇವರಿಗೆ ಸೇವೆ ಸಲ್ಲಿಸಿದರು.
ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ಗೋಪಾಲ ಈಡಿಗ, ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಪುಟ್ಟಸ್ವಾಮಿ, ಮೋಹನ್ ಕುಮಾರ್ ತಂಡದವರು ಭಕ್ತರಿಗೆ ಕೋಸಂಬರಿ, ನೀರು ಮಜ್ಜಿಗೆ ಪಾನಕ ವ್ಯವಸ್ಥೆ ಮಾಡಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.