ಕನಕಪುರ: ‘ಕೊರೊನಾದಂತಹ ಕ್ಲಿಷ್ಟಕರ ಪರಿಸ್ಥಿತಿಯಲ್ಲಿ ಸಂಘಟನೆಗಳು ಸಾಮಾಜಿಕ ಬದ್ಧತೆ ಪ್ರದರ್ಶಿಸಬೇಕು. ಕಷ್ಟದಲ್ಲಿರುವ ಜನತೆಗೆ ಸಹಾಯ ಮಾಡಬೇಕು’ ಎಂದು ದಲಿತ ಸೇನೆಯ ರಾಜ್ಯ ಯುವ ಘಟಕದ ಅಧ್ಯಕ್ಷ ತುಂಗಣಿ ಉಮೇಶ್ತಿಳಿಸಿದರು.
ತಾಲ್ಲೂಕಿನ ಹಾರೋಹಳ್ಳಿಯ ಸಿಂಧ್ಯನಗರದಲ್ಲಿ 100 ಬಡ ಕುಟುಂಬಗಳಿಗೆ ದಲಿತ ಸೇನೆಯ ಜಿಲ್ಲಾ ಘಟಕದಿಂದ ಭಾನುವಾರ ಆಯೋಜಿಸಿದ್ದ ದಿನಸಿ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪ್ರಕೃತಿ ವಿಕೋಪಗಳಿಂದ ಎಷ್ಟೋ ಜನರು ಮನೆ ಕಳೆದುಕೊಂಡು ನಿರಾಶ್ರಿತರಾಗುತ್ತಾರೆ. ಅದೇ ರೀತಿ ಕೊರೊನಾ ಸಹ ವಿಪತ್ತು ಸೃಷ್ಟಿಸಿದೆ. ಎಲ್ಲಾ ಜಾತಿಯಲ್ಲಿನ ಬಡವರು ಕಷ್ಟಕ್ಕೆ ಸಿಲುಕಿದ್ದಾರೆ. ಎಲ್ಲವನ್ನು ಸರ್ಕಾರವೇ ಮಾಡಬೇಕೆಂದು ನಿರೀಕ್ಷಿಸಬಾರದು ಎಂದು ಹೇಳಿದರು.
ಯಾವುದೇ ಸಂಘಟನೆಗಳಿರಲಿ ಇಂತಹ ಸಮಯದಲ್ಲಿ ಸಂಕಷ್ಟದಲ್ಲಿ ಇರುವವರಿಗೆ ಸಹಾಯ ಮಾಡಬೇಕು. ಎಲ್ಲಾ ಜಾತಿ, ಧರ್ಮದಲ್ಲಿರುವ ಬಡವರು, ಅಶಕ್ತರನ್ನು ಗುರುತಿಸಿ ಅವರ ಕಷ್ಟಕ್ಕೆ ಸ್ಪಂದಿಸಬೇಕಿದೆ ಎಂದು ಮನವಿ ಮಾಡಿದರು.
ಸಿಂಧ್ಯನಗರದ ನಿವಾಸಿ ಶಂಕರ್ ಮಾತನಾಡಿ, ಸಿಂಧ್ಯನಗರ ಕಡುಬಡವರು ವಾಸಿಸುವ ಪ್ರದೇಶವಾಗಿದೆ. ಆಶ್ರಯ ಯೋಜನೆಯಲ್ಲಿ ನಿವೇಶನ ಪಡೆದ ಎಲ್ಲಾ ಜಾತಿಯ ಬಡವರು ಇಲ್ಲಿ ಮನೆ ಕಟ್ಟಿಕೊಂಡು ವಾಸ ಮಾಡುತ್ತಿದ್ದಾರೆ. ಆದರೆ, ಇಲ್ಲಿಯವರೆಗೂ ಯಾವುದೇ ಪಕ್ಷ, ಪಂಚಾಯಿತಿಯಿಂದ ಸಹಾಯ ಮಾಡಿಲ್ಲ. ನಮ್ಮ ಕಷ್ಟ ಕೇಳಿಲ್ಲ ಎಂದು ಆರೋಪಿಸಿದರು.
ದಲಿತ ಸೇನೆಯ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ್ ಕುಮಾರ್, ರಾಜ್ಯ ಸಂಘಟನಾ ಕಾರ್ಯದರ್ಶಿ ಬೆಟ್ಟಳ್ಳಿಕಾವಲ್ ಶಂಕರ್, ತಾಲ್ಲೂಕು ಉಪಾಧ್ಯಕ್ಷ ಸತ್ಯಮೂರ್ತಿ, ಹಾರೋಹಳ್ಳಿ ಹೋಬಳಿ ಅಧ್ಯಕ್ಷ ವೈರಮುಡಿಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.