ಹತ್ಯೆ (ಪ್ರಾತಿನಿಧಿಕ ಚಿತ್ರ)
ಕನಕಪುರ: ತಾಲ್ಲೂಕಿನ ಭದ್ರೇಗೌಡನ ದೊಡ್ಡಿ ಮುಂಭಾಗದ ಕೆರೆ ಬಳಿ ಮಂಗಳವಾರ ರಾತ್ರಿ 11ಕ್ಕೆ ಬೆಂಗಳೂರು ಎಮ್ಮಿಗೆಪುರದ ರೌಡಿಶೀಟರ್ ಚಿರಂಜೀವಿ (25) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ.
ಬುಧವಾರ ಬೆಳಗ್ಗೆ ಜಮೀನಿನ ಕಡೆ ಹೋದವರು ಶವವನ್ನು ಗಮನಿಸಿ ಗ್ರಾಮಾಂತರ ಠಾಣೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಯಾರು ಕೊಲೆ ಮಾಡಿದ್ದಾರೆ ಎಂದು ತಿಳಿದು ಬಂದಿಲ್ಲ. ಆರೋಪಿಗಳ ಪತ್ತೆಗೆ ಬಲೆ ಬೀಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾಗಿರುವ ಚಿರಂಜೀವಿ ರೌಡಿಶೀಟರ್ ಆಗಿದ್ದು, ಬೆಂಗಳೂರಿನಲ್ಲಿ ಕೊಲೆಯೊಂದನ್ನು ಮಾಡಿ ಜೈಲು ಸೇರಿದ್ದ. ನಂತರ ಜಾಮೀನಿನ ಮೇಲೆ ಹೊರ ಬಂದು ತನ್ನ ಅಜ್ಜಿಮನೆ ಭದ್ರೇಗೌಡನ ದೊಡ್ಡಿಯಲ್ಲಿ ವಾಸವಾಗಿದ್ದ ಎಂದು ತಿಳಿದು ಬಂದಿದೆ.
ಇತ್ತೀಚೆಗೆ ಚಿಕ್ಕ ಕಲ್ಬಾಳ್ ಗ್ರಾಮದಲ್ಲಿ ಚಿರಂಜೀವಿ ಗಲಾಟೆ ಮಾಡಿಕೊಂಡಿದ್ದ. ಆ ಗಲಾಟೆ ಮತ್ತು ಬೆಂಗಳೂರಿನಲ್ಲಿ ನಡೆದಿದ್ದ ಕೊಲೆಯ ಹಿನ್ನೆಲೆ ಚಿರಂಜೀವಿ ಕೊಲೆ ನಡೆದಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ.
ಬೆಂಗಳೂರು ದಕ್ಷಿಣ ಜಿಲ್ಲಾ ಎಸ್ಪಿ ಶ್ರೀನಿವಾಸ ಗೌಡ, ಎಎಸ್ಪಿ ರಾಮಚಂದ್ರಯ್ಯ, ಡಿಎಸ್ಪಿ ಗಿರಿ, ಕನಕಪುರ ಸರ್ಕಲ್ ಇನ್ಸ್ಪೆಕ್ಟರ್ ವಿಕಾಸ್ ಗೌಡ, ಸಬ್ ಇನ್ಸ್ಪೆಕ್ಟರ್ ಆಕಾಶ್ ಘಟನಾ ಸ್ಥಳಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಚಂದ್ರಮ್ಮ ದಯಾನಂದ ಸಾಗರ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.